ರಾಜೀನಾಮೆ ಕೊಡ್ತೇನೆಂದು ಬರೆದುಕೊಟಿದ್ದಾರಾ? ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಸಿಎಂ; ರಾಯರೆಡ್ಡಿ

| Updated By: ಗಣಪತಿ ಶರ್ಮ

Updated on: Aug 09, 2024 | 1:13 PM

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಆಡಳಿತ ಶುರು ಮಾಡಿದ ಆರಂಭದಲ್ಲಿ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪತ್ರ ಬರೆದಿದ್ದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಆ ನಂತರ ಹಲವು ಬಾರಿ ಸರ್ಕಾರಕ್ಕೆ ಮುಜುಗರ ತರುವಂಥ ಹೇಳಿಕೆಗಳನ್ನು ನೀಡಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮೈಸೂರಿನ ಜನಾಂದೋಲನ ಸಮಾವೇಶದಲ್ಲಿ ಅವರು ಹೇಳಿದ್ದೇನು ಓದಿ.

ರಾಜೀನಾಮೆ ಕೊಡ್ತೇನೆಂದು ಬರೆದುಕೊಟಿದ್ದಾರಾ? ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಸಿಎಂ; ರಾಯರೆಡ್ಡಿ
ಬಸವರಾಜ ರಾಯರೆಡ್ಡಿ
Follow us on

ಮೈಸೂರು, ಆಗಸ್ಟ್ 9: ಇನ್ನೂ ಮೂರೂವರೆ ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರೂ ಆಗಿರುವ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಯಾರೂ ಸಿದ್ದರಾಮಯ್ಯ ರಾಜೀನಾಮೆ ಪಡೆಯಲು ಆಗಲ್ಲ. ಹೈಕಮಾಂಡ್ ಕೂಡ ಅಂತಹ ಮನಸ್ಸನ್ನು ಮಾಡುವುದಿಲ್ಲ ಎಂದರು.

ರಾಜೀನಾಮೆ ಕೊಡ್ತೇನೆಂದು ಸಿದ್ದರಾಮಯ್ಯ ಬಾಂಡ್​​ಪೇಪರ್​ನಲ್ಲಿ ಬರೆದುಕೊಟಿದ್ದಾರಾ? ಅವರೇ ಇನ್ನೂ ಮೂರೂವರೆ ವರ್ಷ ಸಿಎಂ ಆಗಿರಬೇಕು. ಹೈಕಮಾಂಡ್ ಸಂಪೂರ್ಣವಾಗಿ ಸಿದ್ದರಾಮಯ್ಯ ಬೆನ್ನಿಗೆ ನಿಂತಿದೆ. ಈ ಬಗ್ಗೆ ನನಗೂ ಮಾಹಿತಿ ಬಂದಿದೆ. ಸಿಎಂ ಸ್ಥಾನಕ್ಕಾಗಿ ಯಾರು ಸಹ ನಮ್ಮಲ್ಲಿ ಪ್ರಯತ್ನ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ವಾರದ ಹಿಂದಷ್ಟೇ ಅವರು ಇದೇ ರೀತಿಯ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರು ಇನ್ನೂ 3 ವರ್ಷ 10 ತಿಂಗಳು ಜನಪರ ಆಡಳಿತ ನೀಡಲಿ ಎಂಬುದು ನಮ್ಮ ಆಶಯ ಎಂದು ಕೊಪ್ಪಳದಲ್ಲಿ ರಾಯರೆಡ್ಡಿ ಹೇಳಿದ್ದರು. ಇದೀಗ ಜನಾಂದೋಲನ ಸಮಾವೇಶದಲ್ಲೇ ಆ ಬಗ್ಗೆ ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಆರಂಭದ ದಿನಗಳಲ್ಲಿ ಸಚಿವರ ಕಾರ್ಯವೈಖರಿಗೆ ಬೇಸತ್ತು ಬಸವರಾಜ ರಾಯರೆಡ್ಡಿ ನೇತೃತ್ವದಲ್ಲಿ ಶಾಸಕರು ಮುಖ್ಯಮಂತ್ರಿಗೆ ಬಹಿರಂಗ ಪತ್ರ ಬರೆದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ವಿಚಾರ ಬಹಳಷ್ಟು ಚರ್ಚೆಗೂ ಗ್ರಾಸವಾಗಿತ್ತು.

ಇದನ್ನೂ ಓದಿ: ಎಲ್ಲವೂ 10ನೇ ತಾರೀಕಿನ ನಂತರ ನೋಡ್ತಿರಿ: ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಚಲುವರಾಯಸ್ವಾಮಿ

ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿರುವುದು ನಿಜ ಎಂದು ಕೆಲವು ದಿನಗಳ ಹಿಂದಷ್ಟೇ ಹೇಳಿದ್ದು, ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದರು. ಇದೀಗ ಸಿಎಂ ಪರ ಬ್ಯಾಟ್ ಬೀಸಿದ್ದಾರೆ.

ಮತ್ತೆ ಶುರುವಾಗುತ್ತಾ ಸಿಎಂ ಬದಲಾವಣೆ ಚರ್ಚೆ

ಈ ಹಿಂದೊಮ್ಮೆ ಸಿಎಂ ಬದಲಾವಣೆ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ನಂತರ ಹೈಕಮಾಂಡ್ ಮಧ್ಯ ಪ್ರವೇಶಿಸಿ ತೇಪೆಹಚ್ಚುವ ಕಾರ್ಯ ನಡೆಸಿತ್ತು. ಅದಾದ ನಂತರ ಸಿದ್ದರಾಮಯ್ಯ ಬಣದ ಶಾಸಕರು ಹೆಚ್ಚುವರಿ ಡಿಸಿಎ ಹುದ್ದೆ ಸೃಷ್ಟಿ ವಿಚಾರ ಪ್ರಸ್ತಾಪಿಸಿದ್ದು ಕೂಡ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಸಂಘರ್ಷ ತಂದೊಡ್ಡಿತ್ತು. ಡಿಸಿಎಂ ಡಿಕೆ ಶಿವಕುಮಾರ್ ಬಣಕ್ಕೆ ಟಾಂಗ್ ಕೊಡಲೆಂದೇ ಸಿದ್ದರಾಮಯ್ಯ ಬಣದ ಶಾಸಕರು ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಿಶ್ಲೇಷಿಸಲಾಗಿತ್ತು. ನಂತರ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಶಾಸಕರನ್ನು ಕರೆದು ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ನೀಡಿದ್ದರು.

ರಾಜ್ಯದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ