ಬೆಳಗಾವಿ: ಕರ್ನಲ್ ಸೋಫಿಯಾ ಖುರೇಷಿ ಪತಿ ಮನೆ ಮೇಲೆ RSS ದಾಳಿ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ
ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಕುರಿತು ಸುಳ್ಳು ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಸೋಫಿಯಾ ಪತಿ ಮನೆ ಮೇಲೆ RSS ಅಟ್ಯಾಕ್ ಮಾಡಿದೆ ಎಂದು ಅನಿಸ್ ಉದ್ದೀನ್ ಎಂಬಾತನಿಂದ ಪೋಸ್ಟ್ ಮಾಡಲಾಗಿತ್ತು. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿ, ಮೇ 14: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಸದ್ಯ ಕದನವಿರಾಮ ಘೋಷಿಸಲಾಗಿದೆ. ಆದರೂ ಉದ್ವಿಗ್ನ ಪರಿಸ್ಥಿತಿ ಇದೆ. ಹೀಗಿರುವಾಗ ಕಿಡಿಗೇಡಿಗಳು ಈ ಸಂದರ್ಭದಲ್ಲಿ ಕೆಲ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಇದೀಗ ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ (colonel sophia qureshi) ಕುರಿತು ಸುಳ್ಳು ಸುದ್ದಿಯೊಂದು ವೈರಲ್ ಆಗಿದೆ. ಸೋಫಿಯಾ ಪತಿ ಮನೆ ಮೇಲೆ ಆರ್ಎಸ್ಎಸ್ (RSS) ಅಟ್ಯಾಕ್ ಮಾಡಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಆದರೆ ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ತಾಜುದ್ದೀನ್ ಮನೆ ಇದೆ. ‘ಅನಿಸ್ ಉದ್ದೀನ್ ಎಂಬಾತನಿಂದ ಟ್ವೀಟರ್ನಲ್ಲಿ ಸೋಫಿಯಾ ಪತಿ ಮನೆ ಮೇಲೆ ಆರ್ಎಸ್ಎಸ್ ಅಟ್ಯಾಕ್ ಮಾಡಿದೆ ಎಂದು ಮನೆ ಧ್ವಂಸದ ಯಾವುದೋ ಹಳೇ ಫೋಟೋವನ್ನು’ ಪೋಸ್ಟ್ ಮಾಡಿದ್ದಾನೆ.
ಸೋಫಿಯಾ ಪತಿ ಮನೆ ಅಟ್ಯಾಕ್ ಆಗಿಲ್ಲ: ಎಸ್ಪಿ ಭೀಮಾಶಂಕರ್ ಗುಳೇದ್ ಸ್ಪಷ್ಟನೆ
ಇನ್ನು ಪೋಸ್ಟ್ ವಿಚಾರ ತಿಳಿದು ಸೋಫಿಯಾ ಪತಿ ಕರ್ನಲ್ ತಾಜುದ್ದೀನ್ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ತಾಜುದ್ದೀನ್ ಮನೆ ಮೇಲೆ ಯಾವುದೇ ಅಟ್ಯಾಕ್ ಆಗಿಲ್ಲ. ಸುರಕ್ಷತಾ ಕ್ರಮವಾಗಿ ಸೋಫಿಯಾ ಮನೆಗೆ ಗೋಕಾಕ್ ಪೊಲೀಸರಿಂದ ಭದ್ರತೆ ನೀಡಲಾಗಿದೆ. ಜೊತೆಗೆ ಸುಳ್ಳು ಸುದ್ದಿ ಪೋಸ್ಟ್ ಕೂಡ ಡಿಲೀಟ್ ಮಾಡಲಾಗಿದೆ. ಸುಳ್ಳು ಸುದ್ದಿ ನಂಬದಂತೆ ಎಸ್ಪಿ ಭೀಮಾಶಂಕರ್ ಗುಳೇದ್ ಮನವಿ ಮಾಡಿದ್ದಾರೆ.
ಎಸ್ಪಿ ಡಾ.ಭೀಮಾಶಂಕರ್ ಗುಳೇದ್ ಹೇಳಿದ್ದಿಷ್ಟು
ಈ ಕುರಿತಾಗಿ ಮಾತನಾಡಿರುವ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ್, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರ ಗ್ರಾಮದ ಖುರೇಷಿ ಮಾವನ ಮನೆ ಇದೆ. ಅಲ್ಲಿ ಆರ್ಎಸ್ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ ಮನೆ ಧ್ವಂಸ ಮಾಡಿದ್ದಾರೆ ಅಂತಾ, ಅವರ ಕುಟುಂಬ ಬೇರೆ ಕಡೆ ಶಿಫ್ಟ್ ಆಗಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ಅನಿಸ್ ಉದ್ದೀನ್ ಹಂಚಿಕೊಂಡಿದ್ದ. ಕೂಡಲೇ ಪೋಸ್ಟ್ ಗಮನಕ್ಕೆ ಬರುತ್ತಿದ್ದಂತೆ ಸುಳ್ಳು ಸುದ್ದಿ ಅಂತಾ ನಾನು ಕಮೆಂಟ್ ಮಾಡಿದೆ. ಕೂಡಲೇ ಆತ ಪೋಸ್ಟ್ನ ಡಿಲೀಟ್ ಮಾಡಿದ್ದಾನೆ ಎಂದು ಹೇಳಿದ್ದಾರೆ.
ನಮ್ಮ ಪೊಲೀಸರನ್ನ ಅವರ ಮನೆಗೆ ಕಳುಹಿಸಿ ಕುಟುಂಬಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿ ಹೇಳಿದ್ದೇವೆ. ಪೋಸ್ಟ್ ಹರಿಬಿಟ್ಟ ವ್ಯಕ್ತಿ ಕೆನಡಾದಲ್ಲಿ ಇರುವುದು ಎಂಬುದು ಗೊತ್ತಾಗಿದೆ. ತನಿಖೆ ನಡೆಯುತ್ತಿದೆ ಆತ ಭಾರತೀಯ ಮೂಲದವನಾಗಿದ್ದರೆ, ಕೂಡಲೇ ಆತನ ವಿರುದ್ಧ ಎಫ್ಐಆರ್ ಮಾಡುತ್ತೇವೆ. ಆತ ವಿದೇಶದವನಾಗಿದ್ದರಿಂದ ಈವರೆಗೂ ಎಫ್ಐಆರ್ ದಾಖಲು ಮಾಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್ರ ಮಾವ ಹೇಳಿದ್ದೇನು ನೋಡಿ
ಸುಳ್ಳು ಸುದ್ದಿ ಹರಡಿದರೆ ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ. ಎಲ್ಲಾ ರೀತಿಯ ಕ್ರಮಗಳನ್ನ ಪೊಲೀಸ್ ಇಲಾಖೆ ತೆಗೆದುಕೊಳ್ಳುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೇಲೆ ಸೈಬರ್ ಪೊಲೀಸರು ಕಣ್ಣಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಕರ್ನಲ್ ಸೋಫಿಯಾ ಖುರೇಷಿ ಗುಜರಾತ್ನ ವಡೋದರಾದಲ್ಲಿ ಜನಿಸಿದರು. ಮುಂದೆ ಅವರು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿರುವ ತಾಜಾದ್ದೀನ್ ಬಾಗೇವಾಡಿ ಎಂಬುವವರನ್ನು ಮದುವೆಯಾದರು. ಸೋಫಿಯಾ ಅವರ ಅತ್ತೆ ಮತ್ತು ಮಾವ ಇದೇ ಬೆಳಗಾವಿಯ ಮನೆಯಲ್ಲಿ ವಾಸವಿರುತ್ತಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರ್: ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು? ಇಲ್ಲಿದೆ ಮಾಹಿತಿ
ಭಾರತೀಯ ಸೇನೆಯು ನಡೆಸಿದ ‘‘ಆಪರೇಷನ್ ಸಿಂದೂರ’’ ಜಂಟಿ ದಾಳಿಯ ವಿವರವನ್ನು ಕರ್ನಲ್ ಸೋಫಿಯಾ ಖುರೇಷಿ ಅವರು ಇತ್ತೀಚೆಗೆ ನೀಡಿದ್ದರು. ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿದ್ದ ಮಾವ ಗೌಸ್ ಬಾಗೇವಾಡಿ ಸೊಸೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:32 am, Wed, 14 May 25







