
ಬೆಳಗಾವಿ, ಸೆಪ್ಟೆಂಬರ್ 18: ದೇಶಾದ್ಯಂತ ಗಣೇಶೋತ್ಸವ ಸಂಭ್ರಮ ಮನೆಮಾಡಿದೆ. ಕೆಲವು ಕಡೆಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಘಟನೆಗಳು, ಮಸೀದಿ-ದರ್ಗಾಗಳ ಬಳಿ ಮೆರವಣಿಗೆಯ ವಿಚಾರವಾಗಿ ಗಲಾಟೆಗಳು ನಡೆಯುವ ಸಂದರ್ಭಗಳ ನಡುವೆ, ಗಡಿಭಾಗದ ಹಳ್ಳಿಯೊಂದು ಇಡೀ ದೇಶಕ್ಕೆ ಸೌಹಾರ್ದತೆಗೆ ಮಾದರಿಯಾಗಿದೆ. ಕಳೆದ ನಾಲ್ಕು ದಶಕಗಳಿಂದ ಯಾವುದೇ ಸಣ್ಣ ಗದ್ದಲವೂ ಇಲ್ಲದೆ, ಮುಸ್ಲಿಂ ಬಾಂಧವರೇ ಮುಂದೆ ನಿಂತು ದರ್ಗಾದ ಆವರಣದಲ್ಲಿ ಗಣೇಶನನ್ನು ಕೂರಿಸಿ ಪೂಜೆ ಸಲ್ಲಿಸುತ್ತಿರುವ ಅಪರೂಪದ ಪರಂಪರೆ ಮಹಾರಾಷ್ಟ್ರದ ಕುರಂದವಾಡ ಗ್ರಾಮದಲ್ಲಿ ಇಂದಿಗೂ ಮುಂದುವರಿದಿದೆ.
ಗಣೇಶೋತ್ಸವ ಅಂದರೆ ಭಕ್ತಿ, ಸಂಭ್ರಮ ಹಾಗೂ ಸಡಗರದ ಹಬ್ಬ. ಆದರೆ ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಕುರಂದವಾಡ ಗ್ರಾಮದಲ್ಲಿ ಮಾತ್ರ ಈ ಗಣೇಶೋತ್ಸವ ಹಿಂದೂ–ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ದರ್ಗಾದಲ್ಲೇ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಸೌಹಾರ್ದತೆಯ ಪರಂಪರೆ ಇದೀಗ ಮತ್ತೊಮ್ಮೆ ಗಮನ ಸೆಳೆದಿದೆ.
ಇದನ್ನೂ ಓದಿ: ಮಸೀದಿ ಮೇಲೆ ಕಲ್ಲುತೂರಾಟ ಕೇಸ್ಗೆ ಟ್ವಿಸ್ಟ್: ಗಣೇಶ ಮೆರವಣಿಗೆ ಮೇಲೂ ಕಲ್ಲು ಎಸೆತ; ಇಬ್ಬರು ವಶಕ್ಕೆ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಿಂದ ಕೇವಲ 25km ಅಂತರದಲ್ಲಿರುವ ಈ ಕುರಂದವಾಡ ಗ್ರಾಮದಲ್ಲಿ ಗಣೇಶೋತ್ಸವ ಎಂದರೆ ಕೇವಲ ಒಂದು ಸಮುದಾಯದ ಹಬ್ಬವಲ್ಲ. ಹಿಂದೂ–ಮುಸ್ಲಿಮರು ಒಗ್ಗಟ್ಟಾಗಿ ಆಚರಿಸುವ ಸೌಹಾರ್ದತೆಯ ಹಬ್ಬವಾಗಿದೆ. ದರ್ಗಾ ಆವರಣದಲ್ಲೇ ಗಣಪತಿ ಮೂರ್ತಿಯನ್ನ ಪ್ರತಿಷ್ಠಾಪಿಸಿ, ಭಕ್ತಿಯಿಂದ ಪೂಜೆ, ಅರ್ಚನೆ ನೆರವೇರಿಸಲಾಗುತ್ತಿದೆ.
ಇನ್ನು ದೇಶದಲ್ಲಿಯೇ ಕುರಂದವಾಡ ಗ್ರಾಮ ಮಾದರಿಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಈ ಭಾವೈಕ್ಯತೆಯ ಪರಂಪರೆ ಇಂದಿನದ್ದಲ್ಲ ಕಳೆದ ನಾಲ್ಕು ದಶಕಗಳಿಂದಲೂ ಹಿಂದೂ–ಮುಸ್ಲಿಮರು ಸಮುದಾಯದವರು ಸೌಹಾರ್ದತೆಯೊಂದಿಗೆ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಗ್ರಾಮದ ಐದಾರು ಕಡೆ ಇದೇ ರೀತಿ ಹಿಂದೂ- ಮುಸ್ಲಿಮರು ಒಗ್ಗಟ್ಟಿನೊಂದಿಗೆ ಗಣೇಶೋತ್ಸವ ನಡೆಸಿಕೊಂಡು ಬರುತ್ತಿರುವುದು ವಿಶೇಷ.
ಇಲ್ಲಿ ಒಟ್ಟಿಗೆ ಸೇರಿ ಹಬ್ಬ ಆಚರಿಸುವುದು ಒಂದು ಕಡೆಯಾದರೆ ದರ್ಗಾದಲ್ಲಿ ಗಣಪತಿ ಕೂರಿಸುವುದು ಮತ್ತು ಮುಸ್ಲಿಂ ಬಾಂಧವರೇ ಪೂಜೆ ಸಲ್ಲಿಸವುದು ವಿಶೇಷ. ಇಲ್ಲಿ ಗಣಪತಿ ಕೂಡಿಸುವುದಷ್ಟೇ ಅಲ್ಲದೇ ತಾವೇ ಎಲ್ಲರಿಗೂ ಕುಂಕುಮ ಹಚ್ಚಿ, ಪೂಜೆ ಮಾಡಿ ಭಕ್ತಿಭಾವ ಮೆರೆಯುತ್ತಾರೆ. ಗಣೇಶೋತ್ಸವದ ವೇಳೆ ಒಂದಾಗಿ ಸೇರಿರುವ ಎರಡು ಸಮುದಾಯಗಳ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಗಣೇಶೋತ್ಸವ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿರುವ ದೃಶ್ಯಗಳು ಗ್ರಾಮದಲ್ಲಿ ಸೌಹಾರ್ದತೆಯ ಸಂದೇಶ ಸಾರುತ್ತಿವೆ.
ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ನಿಯಮ ಮೀರಿ ಡಿಜೆ ಬಳಕೆ ಆರೋಪ: 6 ಮಂದಿ ಡಿಜೆ ಮಾಲೀಕರು, ಆಪರೇಟರ್ಗಳ ವಿರುದ್ಧ ಪ್ರಕರಣ
ಧರ್ಮದ ಗಡಿಗಳನ್ನು ಮೀರಿ ಹಬ್ಬವನ್ನು ಒಟ್ಟಾಗಿ ಆಚರಿಸುತ್ತಿರುವ ಕುರಂದವಾಡ ಗ್ರಾಮಸ್ಥರ ನಡೆ ಗಮನ ಸೆಳೆದಿದೆ. ಗಣೇಶೋತ್ಸವವನ್ನ ಭಾವೈಕ್ಯತೆಯಿಂದ ಹಲವು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಸೌಹಾರ್ದತೆಯ ಪರಂಪರೆ ಕುರಿತು ಗ್ರಾಮಸ್ಥರು ಹೆಮ್ಮೆ ಪಡುತ್ತಿದ್ದಾರೆ. ಹಬ್ಬಗಳು ಕೇವಲ ಆಚರಣೆಗೆ ಸೀಮಿತವಾಗದೇ ಜನರನ್ನ ಬೆಸೆಯುವ ವೇದಿಕೆಯಾಗಬೇಕು ಎಂಬ ಸಂದೇಶವನ್ನು ಕುರಂದವಾಡ ಗ್ರಾಮ ಸಾರುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.