ಸೈಡ್ ಪಿಕಪ್ ಹೆಸರಲ್ಲಿ ಟ್ಯಾಕ್ಸಿ ಚಾಲಕರಿಗೆ ಕಿರುಕುಳ: 20ಕ್ಕೂ ಹೆಚ್ಚು ಟ್ಯಾಕ್ಸಿ ವಶಕ್ಕೆ ಪಡೆದ ಪೊಲೀಸರು
ಶ್ರೀರಾಮನವಮಿ ಹಬ್ಬದಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ನಡುವೆ ಜಗಳ ಏರ್ಪಟ್ಟಿತ್ತು. ಹೆಚ್ಚುವರಿ ಆದಾಯಕ್ಕಾಗಿ ಓಲಾ, ಉಬರ್ ಬದಲು ಇತರ ಆ್ಯಪ್ಗಳನ್ನು ಬಳಸಿದ್ದಕ್ಕೆ 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನು ಸೀಜ್ ಮಾಡಲಾಗಿತ್ತು. ಪೊಲೀಸರ ಈ ನಡೆಗೆ ಚಾಲಕರಿಂದು ಭಾರೀ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿ, ಏಪ್ರಿಲ್ 07: ನಿನ್ನೆ ಹೇಳಿ ಕೇಳಿ ಶ್ರೀರಾಮ ನವಮಿ (Sri Rama Navami). ಹಿಂದೂಗಳ ಪವಿತ್ರ ಹಬ್ಬ ಸಹ ಹೌದು. ಹೀಗಾಗೆ ಚಾಲಕರೆಲ್ಲಾ ಒಂದೆರೆಡು ಬಾಡಿಗೆ ಜಾಸ್ತಿ ಸಿಗುತ್ತೆ ಅಂತ ಏರ್ಪೋಟ್ಗೆ ಬಂದಿದ್ದು ಪಿಕಪ್ ಮಾಡುವ ಭರದಲ್ಲಿದ್ದರು. ಆದರೆ ಅಷ್ಟರಲ್ಲೇ ಟ್ಯಾಕ್ಸಿ ಸಂಸ್ಥೆಗಳು ಮತ್ತು ಚಾಲಕರ ನಡುವೆ ಪಿಕಪ್ ವಿಚಾರಕ್ಕೆ ಕಿರಿಕ್ ಉಂಟಾಗಿದ್ದು, 20ಕ್ಕೂ ಅಧಿಕ ಟ್ಯಾಕ್ಸಿ ಚಾಲಕರು (Taxi drivers) ದಿನಪೂರ್ತಿ ಪೊಲೀಸ್ ಠಾಣೆ ಮುಂದೆ ಪರದಾಡಿರುವಂತಹ ಘಟನೆ ನಡೆದಿದೆ.
ಎರೆಡೆರಡು ಆ್ಯಪ್ಗಳಲ್ಲಿ ಕೆಲಸ?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ಥಾಣದಿಂದ ಶೇ 50 ಕ್ಕೂ ಅಧಿಕ ಪ್ರಯಾಣಿಕರು ಟ್ಯಾಕ್ಸಿಗಳಲ್ಲೇ ಪ್ರಯಾಣ ಮಾಡ್ತಿದ್ದು, ಹಬ್ಬ ಹರಿದಿನ ಸೇರಿದಂತೆ ವೀಕೆಂಡ್ ಬಂತ್ತು ಅಂದರೆ ಟ್ಯಾಕ್ಸಿಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಹೀಗಾಗಿ ನಿನ್ನೆ ಶ್ರೀರಾಮ ನವಮಿ ಹಬ್ಬ ಇದೆ ಅಂತ ಕೆಲ ಚಾಲಕರು ಓಲಾ, ಉಬರ್ ಬಿಟ್ಟು ನಮ್ಮ ಯಾತ್ರಿ ಮತ್ತು ರಾಪಿಡೋ ಆ್ಯಪ್ ಮೂಲಕ ಪ್ರಯಾಣಿಕರನ್ನ ಪಿಕಪ್ ಮಾಡಿಕೊಳ್ಳುವುದಕ್ಕೆ ಬಂದಿದ್ರಂತೆ. ಹೀಗಾಗೆ ಎರೆಡೆರಡು ಆ್ಯಪ್ಗಳಲ್ಲಿ ಕೆಲಸ ಮಾಡುತ್ತೀರಾ ಅಂತ ಕೆಎಸ್ಟಿಡಿಸಿ ಸೇರಿದಂತೆ ಕೆಲ ಚಾಲಕರು ಕಿರಿಕ್ ಮಾಡಿದ್ದು, ಪ್ರಯಾಣಿಕರ ಪಿಕಪ್ಗೆ ಬಂದ ಚಾಲಕರನ್ನ ಅಡ್ಡ ಹಾಕಿದ್ದರಂತೆ.
ಇದನ್ನೂ ಓದಿ: Karnataka Weather: ಏಪ್ರಿಲ್ 13ರವರೆಗೂ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ
ಅಲ್ಲದೆ ಅಡ್ಡ ಹಾಕಿದ ಟ್ಯಾಕ್ಸಿ ಚಾಲಕರ ಕೀ ಗಳನ್ನ ಕಿತ್ತುಕೊಂಡು ಬಳಿಕ ಆ ಕೀಗಳನ್ನ ಪೊಲೀಸರ ವಶಕ್ಕೆ ನೀಡಿದ್ದು, 20ಕ್ಕೂ ಹೆಚ್ಚು ಟ್ಯಾಕ್ಸಿಗಳನ್ನ ಮೊನ್ನೆ ರಾತ್ರಿಯಿಂದ ನಿನ್ನೆ ಸಂಜೆವರೆಗೂ ಕೆಂಪೇಗೌಡ ಏರ್ಪೋಟ್ ನಲ್ಲೆ ಪೊಲೀಸರು ಸೀಜ್ ಮಾಡಿ ನಿಲ್ಲಿಸಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.
ನಿನ್ನೆ ಸಂಜೆಯಿಂದ ನೀವು ಅಕ್ರಮವಾಗಿ ಸೈಡ್ ಪಿಕಪ್ ಮಾಡಲು ಬಂದಿದ್ದೀರಾ ಅಂತ ಚಾಲಕರಿಗೆ ದಂಡವನ್ನು ಹಾಕದೆ, ಟ್ಯಾಕ್ಸಿಯನ್ನು ಬಿಡದೆ ಪೊಲೀಸರು ಟ್ಯಾಕ್ಸಿಗಳನ್ನ ನಿಲ್ಲಿಸಿಕೊಂಡಿದ್ದು, ಹಬ್ಬಕ್ಕೆ ಒಂದೆರಡು ಕಾಸು ಮಾಡಿಕೊಳ್ಳೋಣ ಅಂತ ಬಂದ ನಮಗೆ ಕಿರುಕುಳ ನೀಡ್ತಿದ್ದಾರೆ ಅಂತ ಚಾಲಕರು ಆಕ್ರೋಶ ಹೊರ ಹಾಕಿದ್ದಾರೆ.
ಟಿವಿ9 ನಲ್ಲಿ ವರದಿ ಪ್ರಸಾರ ಬೆನ್ನಲ್ಲೇ ಟ್ಯಾಕ್ಸಿ ಬಿಟ್ಟ ಪೊಲೀಸರು
ಅಲ್ಲದೆ ಏರ್ಪೋಟ್ನ ಕೆಎಸ್ಟಿಡಿಸಿ ಚಾಲಕರು ಸೇರಿದಂತೆ ಬಿಐಎಎಲ್ ಸಿಬ್ಬಂದಿ ಮಾತು ಕೇಳಿಕೊಂಡು ಪೊಲೀಸರು ನಮಗೆ ಕಿರುಕುಳ ನೀಡುತ್ತಿದ್ದು, ನಮಗೆ ನ್ಯಾಯ ಕೊಡಿಸಿ ಅಂತ ಚಾಲಕರು ಒತ್ತಾಯಿಸಿದರು. ಇನ್ನೂ ಈ ಕುರಿತು ಟಿವಿ9 ನಲ್ಲಿ ವರದಿ ಪ್ರಸಾರವಾಗ್ತಿದ್ದಂತೆ ಎಚ್ಚೆತ್ತ ಕೆಂಪೇಗೌಡ ಏರ್ಪೋಟ್ ಠಾಣೆ ಪೊಲೀಸರು ನಿಲ್ಲಿಸಿದ್ದ 20ಕ್ಕೂ ಅಧಿಕ ಕ್ಯಾಬ್ಗಳನ್ನ ಬಿಟ್ಟು ಕಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಚಿಕೂನ್ ಗುನ್ಯಾ, ಡೆಂಗ್ಯೂ: ಒಂದೇ ವಾರದಲ್ಲಿ 100ಕ್ಕೂ ಹೆಚ್ಚು ಪ್ರಕರಣ
ಹಬ್ಬದಂದು ಒಂದೆರಡು ಟ್ರಿಪ್ ಹೆಚ್ಚು ಮಾಡಿಕೊಳ್ಳೋಣ ಅಂತ ಏರ್ಪೋಟ್ಗೆ ಬಂದ ಟ್ಯಾಕ್ಸಿ ಚಾಲಕರಿಗೆ ಕೆಲ ಚಾಲಕರು ಮಾಡಿದ ಎಡವಟ್ಟಿನಿಂದ ದಿನಪೂರ್ತಿ ಪರದಾಡುವಂತಾಗಿತ್ತು. ಇನ್ನೂ ಇತ್ತೀಚೆಗೆ ಕೆಂಪೇಗೌಡ ಏರ್ಪೋಟ್ನಲ್ಲಿ ಸೈಡ್ ಪಿಕಪ್ ಚಾಲಕರ ಹಾವಳಿಯು ಹೆಚ್ಚಾಗಿದ್ದು, ಏರ್ಪೋಟ್ ಸಿಬ್ಬಂದಿ ಮತ್ತು ಪೊಲೀಸರು ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:07 am, Mon, 7 April 25