ಪಟಾಕಿ ದುರಂತ ಕರಿ ನೆರಳು: ಅತ್ತಿಬೆಲೆಯಲ್ಲಿ ಪಟಾಕಿ ಮಾರಾಟ ಕುಸಿತ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಪಟಾಕಿ ಮಾರಾಟ ಜೋರಾಗಿದ್ದರೂ, ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿರುವ ಪಟಾಕಿ ಅಂಗಡಿಗಳು ಮಾತ್ರ ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಕಳೆದ ವರ್ಷದ ಪಟಾಕಿ ದುರಂತದ ನೆನಪಿನಿಂದ ಜನರು ಪಟಾಕಿ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ.

ಪಟಾಕಿ ದುರಂತ ಕರಿ ನೆರಳು: ಅತ್ತಿಬೆಲೆಯಲ್ಲಿ ಪಟಾಕಿ ಮಾರಾಟ ಕುಸಿತ
ಪಟಾಕಿ ಅಂಗಡಿ
Edited By: ವಿವೇಕ ಬಿರಾದಾರ

Updated on: Oct 30, 2024 | 4:16 PM

ಆನೇಕಲ್, ಅಕ್ಟೋಬರ್​ 30: ದೀಪಾವಳಿ (Deepavali) ಹಬ್ಬ ಹಿನ್ನೆಲೆಯಲ್ಲಿ ಪಟಾಕಿ (firecrackers) ಖರೀದಿ ಜೋರಾಗಿದೆ. ಆದರೆ, ಬೆಂಗಳೂರು (Bengaluru) ಹೊರವಲಯದ ಆನೇಕಲ್​ (Anekal) ತಾಲೂಕಿನಲ್ಲಿರುವ ಅತ್ತಿಬೆಲೆಯಲ್ಲಿನ ಪಟಾಕಿ ಅಂಗಡಿಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ. ಹೌದು, ಕಳೆದ ವರ್ಷ ಪಟಾಕಿ ದುರಂತದಲ್ಲಿ 13 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಇಲ್ಲಿ ಪಟಾಕಿ ಕೊಂಡುಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ.

ನ್ಯಾಯಾಲಯದ​ ಆದೇಶದಂತೆ ಸರ್ಕಾರ ಅತ್ತಿಬೆಲೆಯಲ್ಲಿ ಕೇವಲ 26 ಪಟಾಕಿ ಮಾರಾಟ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಿದೆ. ಕಂದಾಯ, ಪೊಲೀಸ್​ ಮತ್ತು ಅಗ್ನಿಶಾಮಕ ಇಲಾಖೆಗಳು ಜಂಟಿಯಾಗಿ ಪಟಾಕಿ ಮಳಿಗೆಗಳನ್ನು ತಪಾಸಣೆ ಮಾಡುತ್ತಿವೆ. ನಿಯಮಗಳನ್ನು ಮೀರಿ ಮಾರಾಟ ಮಾಡುವುದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳುತ್ತಿವೆ.

ಅತ್ತಿಬೇಲೆ ಪಟಾಕಿ ದುರಂತ

2023ರ ಅಕ್ಟೋಬರ್​​ 07 ರಂದು ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಪಟಾಕಿ ಅವಘಡ ಸಂಭವಿಸಿತ್ತು. ಲಾರಿಯಿಂದ ಪಟಾಕಿಗಳನ್ನು ಅನ್​ಲೋಡ್ ಮಾಡುವಾಗ ಆಕಸ್ಮಿಕ ಬೆಂಕಿ ತಗುಲಿ ಪಟಾಕಿ ಗೋಡೌನ್​ ಹೊತ್ತಿ ಉರಿದಿತ್ತು. 13 ಜನರು ಸಜೀವದಹನವಾಗಿದ್ದರು.

ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಖರೀದಿಸುತ್ತೀರಾ? ಬೆಂಗಳೂರು ಪೊಲಿಸ್ ಆಯುಕ್ತರು ಕೊಟ್ಟ ಈ ಸೂಚನೆ ತಪ್ಪದೇ ಗಮನಿಸಿ

ಅಗ್ನಿ ದುರಂತದಲ್ಲಿ ಕೋಟ್ಯಂತರ ಮೌಲ್ಯದ ಪಟಾಕಿ ಅಗ್ನಿಗಾಹುತಿಯಾಗಿತ್ತು. 1 ಕ್ಯಾಂಟ್ರೋ, 2 ಬೊಲೆರೋ, 7 ಬೈಕ್​ಗಳು ಸಹ ಬೆಂಕಿಗಾಹುತಿ ಆಗಿತ್ತು. ವಾಹನ ಸವಾರರಿಗೆ ಪಟಾಕಿ ಅಂಗಡಿ ದುರಂತ ಎಫೆಕ್ಟ್ ತಟ್ಟಿದ್ದು, ಅತ್ತಿಬೆಲೆ ಕಡೆ ತೆರಳುವ ಮಾರ್ಗದಲ್ಲಿ ಟ್ರಾಫಿಕ್​ ಜಾಮ್ ಉಂಟಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ಗೋಡೌನ್​ ಮಾಲೀಕ ರಾಮಸ್ವಾಮಿ ರೆಡ್ಡಿ, ಪುತ್ರ ನವೀನ್​ ಮತ್ತು ಕಟ್ಟಡದ ಮಾಲೀಕ ಅನಿಲ್​ನನ್ನು ಪೊಲೀಸರು ಬಂಧಿಸಿದ್ದರು.

ಮೃತ ಕುಟುಂಬಕ್ಕೆ 5 ಲಕ್ಷ ಪರಿಹಾರ

ಪಟಾಕಿ ದುರಂತದಲ್ಲಿ ಮೃತಪಟ್ಟಿದ್ದ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಐದು ಲಕ್ಷ ರೂ. ಪರಿಹಾರ ಘೋಷಣೆ ಮಾಡಿತ್ತು. ವೆಲ್ಲಾಕುಟ್ಟೈ ಗ್ರಾಮದ ರಾಜೇಶ್, ದಿನೇಶ್, ಸಂತೋಷ್ ಕುಮಾರ್, ನಿತೀಶ್​, ಅಮ್ಮಪೆಟೈ ಗ್ರಾಮದ ವೇದಪ್ಪನ್, ಆದಿಕೇಶವನ್, ವಿಜಯರಾಘವನ್​ ಆಕಾಶ್ ರಾಜ್, ಗಿರಿ, ಇಂಬರ್ತಿ, ಮುನಿವೇಲ್, ನೀಪತುರೈನ ಪ್ರಕಾಶರಾಜ್​, ಹೊಸೂರಿನ ಆಂಥೋನಿ ಪೌಲಾರಾಜ್ ಸೇರಿ 13 ಕಾರ್ಮಿಕರಿಗೆ ರಾಜ್ಯ ಸರ್ಕಾರದ ವತಿಯಿಂದ ಆನೇಕಲ್ ತಹಶೀಲ್ದಾರ್ ಶಿವಪ್ಪ ಲಮಾಣಿ ನೇತೃತ್ವದಲ್ಲಿ ತಲಾ 5 ಲಕ್ಷ ರೂ. ಪರಿಹಾರ ಚೆಕ್​ ವಿತರಿಸಲಾಗಿತ್ತು.

ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:14 pm, Wed, 30 October 24

Loading...
Unable to load recommendations.
Follow Us