
ದೇವನಹಳ್ಳಿ, ಆಗಸ್ಟ್ 30: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮುತ್ತೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ (firecracker) ಸಿಡಿದು ಬಾಲಕ ಸಾವು (death) ಪ್ರಕರಣಕ್ಕೆ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಣೇಶ ವಿಸರ್ಜನೆ ವೇಳೆ ಪಟಾಕಿ ನಿಷೇಧಿಸಿ ಡಿಸಿ ಬಸವರಾಜ್ ಆದೇಶ ಹೊರಡಿಸಿದ್ದಾರೆ.
ಪ್ರಕರಣ ಹಿನ್ನಲೆ ಸಾರ್ವಜನಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಟಾಕಿ ಬಳಕೆ ನಿಷೇಧಿಸಿ ಬೆಂಗಳೂರು ಗ್ರಾಮಾಂತರ ಡಿಸಿ ಬಸವರಾಜ್ ಆದೇಶಿಸಿದ್ದಾರೆ. ಒಂದು ವೇಳೆ ಪಟಾಕಿ ಬಳಕೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಘೋರ ದುರಂತ: ಗಣೇಶ ಮೆರವಣಿಗೆ ವೇಳೆ ಪಟಾಕಿ ಬಾಕ್ಸ್ ಸ್ಫೋಟಗೊಂಡು ಬಾಲಕ ಸಾವು, 6 ಜನರಿಗೆ ಗಾಯ
ಇನ್ನು ಘಟನೆ ಸಂಬಂಧ ಆಯೋಜಕರ ವಿರುದ್ಧ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 105, 125 (A)ರಡಿಯಲ್ಲಿ ಎಫ್ಐಆರ್ ದಾಖಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಿವಿ9ಗೆ ಬೆಂಗಳೂರು ಗ್ರಾಮಾಂತರ ಡಿಸಿ ಬಸವರಾಜ್ ಹೇಳಿಕೆ ನೀಡಿದ್ದು, ವಿಸರ್ಜನೆಗೆ ಪಟಾಕಿ ತಂದವರ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಲಾಗಿದೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಜಿಲ್ಲಾಡಳಿತ ನೋಡಿಕೊಳ್ಳುತ್ತೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚ ಭರಿಸಲಿದೆ. ಮೃತ ಬಾಲಕನ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪತ್ರ ಬರೆಯುವುದಾಗಿ ಹೇಳಿದ್ದಾರೆ.
ದೊಡ್ಡಬಳ್ಳಾಪುರ ಹೊರವಲಯದ ಮುತ್ತೂರು ಗ್ರಾಮದಲ್ಲಿ ನಿನ್ನೆ ಸಂಜೆ ದುರಂತ ಸಂಭವಿಸಿದೆ. ಪಟಾಕಿ ಸಿಡಿಯುವ ವಿಡಿಯೋ ಸ್ಥಳಿಯರ ಮೊಬೈಲ್ನಲ್ಲಿ ಸೆರೆ ಆಗಿದೆ. ಪಟಾಕಿ ಸಿಡಿಯುವ ಮುನ್ನ ಪಟಾಕಿ ಬಾಕ್ಸ್ ಪಕ್ಕದಲ್ಲೇ ಬಾಲಕ ಕುಳಿತುಕೊಂಡಿದ್ದ.
ಇದನ್ನೂ ಓದಿ: ಶೋಕಿ ಜೀವನಕ್ಕಾಗಿ ಕಳ್ಳತನ: ಬರೋಬ್ಬರಿ 32 ಬೈಕ್ ಕದ್ದಿದ್ದ ಆಸಾಮಿ ಸಿಕ್ಕಿಬಿದ್ದ
ಚೀಲವೊಂದರಲ್ಲಿ ಪಟಾಕಿಗಳನ್ನ ಹಾಕಿ ವಾಹನದಲ್ಲಿ ಇಡಲಾಗಿತ್ತು. ಗಣೇಶನನ್ನ ಕೂರಿಸಿದ್ದ ಸ್ಥಳದಿಂದ ನೂರು ಮೀಟರ್ ಮುಂದೆ ಸಾಗುತ್ತಿದ್ದಂತೆ ಪಟಾಕಿ ಸಿಡಿದಿತ್ತು. ಎಲ್ಲಾ ಪಟಾಕಿ ಒಂದೇ ಚೀಲದಲ್ಲಿ ಹಾಕಿದ್ದ ಕಾರಣ ಹೆಚ್ಚು ಬೆಂಕಿಯಿಂದ ಪಟಾಕಿ ಸಿಡಿದಿದೆ. ಪಟಾಕಿ ಸಿಡಿದ ಪರಿಣಾಮ ಪಕ್ಕದಲ್ಲೇ ಕುಳಿತಿದ್ದ ಬಾಲಕ, ಚಾಲಕ ಮತ್ತು ಪೊಲೀಸ್ ಪೇದೆಗೆ ಗಂಭೀರ ಗಾಯಗಳಾಗಿವೆ. ಕೊನೆ ಕ್ಷಣದ ವಿಡಿಯೋದಲ್ಲಿ ಯುವಕ ಕುಳಿತಿದ್ದ ದೃಶ್ಯ ಸೆರೆ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.