
ದೇವನಹಳ್ಳಿ, ಆಗಸ್ಟ್ 22: ಹುಬ್ಬಳ್ಳಿ ಹಾಗೂ ಜಿಗಣಿ ಪ್ರಕರಣಗಳ ಬೆನ್ನಲ್ಲೇ, ಬೆಂಗಳೂರು ಹೊರವಲಯದಲ್ಲಿ ದೇಶವಿರೋಧಿ ಹಾಗೂ ಉಗ್ರ ಚಟುವಟಿಕೆಗಳಿಗೆ (Terrorist activity) ತರಬೇತಿ ಪಡೆಯುತ್ತಿದ್ದ ಆರೋಪದ ಮೇಲೆ ಶಂಕಿತನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ ಇಸ್ಲಾಂಪುರ ನಿವಾಸಿ ಸೈಯದ್ ಅಬೂಬಕರ್ (28) ಬಂಧಿತ ಆರೋಪಿ. ಈತ ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಎಂಬ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಕೇಂದ್ರ ಗುಪ್ತಚರ ಇಲಾಖೆ ಹಾಗೂ ಕೌಂಟರ್ ಇಂಟಲಿಜೆನ್ಸ್ ಸೆಲ್ ನೀಡಿದ ಖಚಿತ ಮಾಹಿತಿ ಮೇರೆಗೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಆತನ ಮನೆ ಮೇಲೆ ದಾಳಿ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
ವೃತ್ತಿಯಲ್ಲಿ ಎಸಿ ಮೆಕ್ಯಾನಿಕ್ ಆಗಿದ್ದ ಸೈಯದ್ ಅಬೂಬಕರ್, ಬೆಂಗಳೂರಿನ ಮಸೀದಿಯೊಂದರಲ್ಲಿ ಮಕ್ಕಳಿಗೆ ಪಾಠವನ್ನೂ ಮಾಡುತ್ತಿದ್ದ. ಆದರೆ ಈ ಮುಗ್ಧ ಮುಖವಾಡದ ಹಿಂದೆ ಪಾಕಿಸ್ತಾನದ ಕುಖ್ಯಾತ ಶಾಜದ್ ಬುಟ್ಟಿ ನೆಟ್ವರ್ಕ್ನ ಗ್ಯಾಂಗ್ ಜೊತೆ ಕಳೆದ ಎರಡು ವರ್ಷಗಳಿಂದ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಗಣ್ಯ ವ್ಯಕ್ತಿಗಳು ಮತ್ತು ಉದ್ಯಮಿಗಳಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಜಾಲದ ‘Hammadmemon333’ ಹೆಸರಿನ ಇನ್ಸ್ಟಾಗ್ರಾಂ ಖಾತೆಯನ್ನು ಈತ ಬಳಸುತ್ತಿದ್ದ. ಅಷ್ಟೇ ಅಲ್ಲದೆ, ತನ್ನ ಸ್ವಂತ ಆಧಾರ್ ಕಾರ್ಡ್ ಸೇರಿದಂತೆ ಪ್ರಮುಖ ವೈಯಕ್ತಿಕ ದಾಖಲೆಗಳನ್ನು ನೀಡಿ ಆ ಖಾತೆಗೆ ಲಾಗಿನ್ ಆಗಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪಾಕಿಸ್ತಾನಿ ಗ್ಯಾಂಗ್ ಸೂಚನೆಯಂತೆ ಭಾರತದಲ್ಲಿ ಕಾರ್ಯಾಚರಣೆ ನಡೆಸಲು ಈತನನ್ನು ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಗ್ಯಾಂಗ್ ಆದೇಶದ ಮೇರೆಗೆ ಈತ ಕೇರಳ ಮತ್ತು ದೆಹಲಿಗೆ ತೆರಳಿ ರಹಸ್ಯ ತರಬೇತಿಯನ್ನೂ ಪಡೆದುಕೊಂಡು ಬಂದಿದ್ದಾನೆ. ಈ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಯುವಕರನ್ನು ಸೆಳೆದು ದೇಶವಿರೋಧಿ ಕೃತ್ಯಗಳಿಗೆ ತರಬೇತಿ ನೀಡಲಾಗುತ್ತಿದೆಯೇ ಎಂಬ ಅನುಮಾನ ಮೂಡಿದ್ದು, ಈ ಜಾಲದ ಮೂಲವನ್ನು ಪತ್ತೆಹಚ್ಚಲು ತನಿಖಾ ಸಂಸ್ಥೆಗಳು ತೀವ್ರ ವಿಚಾರಣೆ ನಡೆಸುತ್ತಿವೆ.
ಇದನ್ನೂ ಓದಿ: ಪಾಕಿಸ್ತಾನ, ಐಸಿಸ್ ಜತೆ ನಂಟು: ಕಲಬುರಗಿಯಲ್ಲಿ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ
ಬಂಧಿತ ಸೈಯದ್ ಅಬೂಬಕರ್ ವಿರುದ್ಧ ಬಿಎನ್ಎಸ್ 113(3) ಹಾಗೂ 197(2) ಸೆಕ್ಷನ್ಗಳ ಅಡಿಯಲ್ಲಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಾಕಿಸ್ತಾನಿ ಗ್ಯಾಂಗ್ ಜೊತೆ ಹಣಕಾಸಿನ ವಹಿವಾಟು ಹೇಗೆ ನಡೆಯುತ್ತಿತ್ತು? ಸ್ಥಳೀಯವಾಗಿ ಇವನಿಗೆ ಬೇರೆ ಯಾರಾದರೂ ಸಾಥ್ ನೀಡುತ್ತಿದ್ದಾರಾ? ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:42 pm, Sat, 22 August 26