ಹೆಣ್ಮಕ್ಕಳಿಗೆ ಕೊಡಲೆಂದು ಮನೆಯಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ 10 ರಿಂದ 12 ಲಕ್ಷ ರೂಪಾಯಿ ಮೌಲ್ಯದ 130 ಗ್ರಾಂ ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಮನೆ ಮಾಲೀಕ ಶಂಭುಲಿಂಗ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಅಕ್ಕಪಕ್ಕದವರು ಮತ್ತು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ, ಬೇರೆ ಕಡೆಗಳಲ್ಲೂ ಚಿನ್ನ ಮತ್ತು ಬೈಕ್ ಕಳ್ಳತನ ಪ್ರಕರಣಗಳು ವರದಿಯಾಗಿವೆ.

ನೆಲಮಂಗಲ, ಜುಲೈ 01: ಬೆಂಗಳೂರು (Bengaluru) ನಗರ ಜಿಲ್ಲೆಯ ಮಾದನಾಯಕನಹಳ್ಳಿಯ ಚಿಕ್ಕಗೊಲ್ಲರಹಟ್ಟಿಯಲ್ಲಿನ ಮನೆಯೊಂದರ ಬೀಗ ತೆಗೆದು ಒಳ ನುಗ್ಗಿದ ಕಳ್ಳರು 10 ರಿಂದ 12 ಲಕ್ಷ ರೂ. ಮೌಲ್ಯದ 130 ಗ್ರಾಂ ಚಿನ್ನಾಭರಣ (Gold) ಕದ್ದು ಪರಾರಿಯಾಗಿದ್ದಾರೆ. ಮನೆ ಮಾಲೀಕ ಶಂಭುಲಿಂಗ ಅವರು ಅಕ್ಕಪಕ್ಕದ ಮನೆಯುವರು ಮತ್ತು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಶಂಭುಲಿಂಗ ಮೂಲತಃ ಉತ್ತರ ಕರ್ನಾಟಕದವರಾಗಿದ್ದು, ಕಳೆದ 10 ವರ್ಷದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಶಂಭುಲಿಂಗ ಅವರು ಎರಡು ವರ್ಷಗಳ ಹಿಂದೆ ಕುಟಂಬ ಸಮೇತ ಮಾದನಾಯಕನಹಳ್ಳಿಯ ಚಿಕ್ಕಗೊಲ್ಲರಹಟ್ಟಿಗೆ ಶಿಫ್ಟ್ ಆಗಿದ್ದಾರೆ. ಶಂಭುಲಿಂಗ ಅವರು ಚಿಕ್ಕಗೊಲ್ಲರಹಟ್ಟಿಯಲ್ಲಿ ಅಪ್ಪಾಜಿ ಹೋಟೆಲ್ ನಡೆಸುತ್ತಿದ್ದಾರೆ. ಶಂಭುಲಿಂಗ ಅವರದ್ದು ಎರಡು ಹೋಟೆಲ್ಗಳ ಇದ್ದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಹೋಟೆಲ್ಗೆ ಹೋಗುತ್ತಾರೆ.
ಎಂದಿನಂತೆ ಇಂದೂ (ಜು.01) ಕೂಡ ಶಂಭುಲಿಂಗ ಮತ್ತು ಇವರ ಕುಟುಂಬದ ಸದಸ್ಯರು ಮನೆಗೆ ಬೀಗ ಹಾಕಿ ಕೀ ಅನ್ನು ಕಿಟಕಿಯಲ್ಲಿ ಇಟ್ಟು ಹೋಟೆಲ್ಗೆ ಹೋಗಿದ್ದಾರೆ. ಎಲ್ಲರೂ ಹೋಟೆಲ್ಗೆ ಹೋಗುತ್ತಿದ್ದಂತೆ ಇತ್ತ, ಮನೆಯ ಬೀಗ ತೆಗೆದು ಒಳ ನುಗ್ಗಿದ ಕಳ್ಳರು 10 ರಿಂದ 12 ಲಕ್ಷ ರೂ. ಬೆಲೆಬಾಳುವ 130 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಈ ಒಡವೆಗಳನ್ನು ಶಂಭುಲಿಂಗ ಅವರು ಇಬ್ಬರು ಹೆಣ್ಣು ಮಕ್ಕಳಿಗೆ ಕೊಡಲೆಂದು ಇಟ್ಟಿದ್ದರು.
ಮನೆಯಲ್ಲಿನ ಒಡವೆಗಳು ಕಳ್ಳತನವಾಗಿರುವ ವಿಚಾರ ತಿಳಿಯುತ್ತಿದ್ದಂತೆ ಶಂಭುಲಿಂಗ ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಮನೆಯ ಅಕ್ಕಪಕ್ಕದವರ ಮೇಲೆ ಮತ್ತು ಕೆಲಸಗಾರರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಚಿನ್ನಾಭರಣ ಕದ್ದವನ ಬಂಧನ
ಬೆಂಗಳೂರು: ಹಾಡುಹಗಲೆ ಮನೆ ಬೀಗ ಮುರಿದು ಚಿನ್ನಾಭರಣ ಕದ್ದವನನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ. ತುಮಕೂರು ನಿವಾಸಿ ಸೈಯದ್ (40) ಬಂಧಿತ ಆರೋಪಿ. ಆರೋಪಿ ಬಳಿಯಿದ್ದ 29 ಲಕ್ಷ ಮೌಲ್ಯದ 305 ಗ್ರಾಂ ಚಿನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಒಟ್ಟು 6 ಕಡೆ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಗೋವಿಂದರಾಜನಗರ, ಕಾಮಾಕ್ಷಿಪಾಳ್ಯ, ಶ್ರೀರಂಗಪಟ್ಟಣ ಮತ್ತು ಮೇಲುಕೋಟೆಯಲ್ಲಿ ಆರೋಪಿ ಕಳ್ಳತನ ಮಾಡಿದ್ದನು. ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬನ್ನೇರುಘಟ್ಟ ಅರಣ್ಯ ವಲಯದಲ್ಲಿ ಜಿಂಕೆ ಮಾಂಸ ಕಟ್ ಮಾಡುತ್ತಿದ್ದವ ಅರೆಸ್ಟ್
ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದವ ಅರೆಸ್ಟ್
ಬೆಂಗಳೂರು: ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್ಗಳನ್ನು ಕದ್ದು ಅರ್ಧ ಬೆಲೆಗೆ ಮಾರಾಟ ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದಾರೆ. ಹೆಚ್ಎಎಲ್, ವಿಭೂತಿಪುರ, ಹೊಸಕೋಟೆ, ವಿಜಯಪುರ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಕಳ್ಳತನ ಮಾಡಿದ್ದನು. 40 ಲಕ್ಷ ರೂ. ಮೌಲ್ಯದ 32 ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಹೆಚ್ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








