ಜಿಲೇಬಿಯಲ್ಲಿ ಕೃತಕ ಬಣ್ಣ, ಶರಬತ್ನಲ್ಲಿ ಕಲುಷಿತ ನೀರು ಶಂಕೆ: ಮಾದರಿ ಸಂಗ್ರಹಕ್ಕೆ ಮುಂದಾದ ಆಹಾರ ಇಲಾಖೆ
ಪನೀರ್, ಕಬಾಬ್ ಬಳಿಕ ಈಗ ಜಿಲೇಬಿ ಮತ್ತು ಶರಬತ್ತಿನ ಸರದಿ. ಜಿಲೇಬಿ ಮತ್ತು ಶರಬತ್ತುಗಳಲ್ಲಿ ಕೃತಕ ಬಣ್ಣ ಮತ್ತು ಕಲುಷಿತ ನೀರು ಬಳಕೆಯಾಗುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಬಾಯಿ ಚಪ್ಪರಿಸಿ ತಿನ್ನುವ ಗರಿಗರಿಯಾದ ಜಿಲೇಬಿ ಸುರಕ್ಷಿತವಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಹೀಗಾಗಿ ಇದೀಗ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲು ಆರೋಗ್ಯ ಇಲಾಖೆ ಮುಂದಾಗಿದೆ.

ಬೆಂಗಳೂರು, ಮೇ 6: ಬಿರು ಬೇಸಿಗೆಯಲ್ಲಿ ದಣಿವು ನೀಗಿಸಲು ಜನ ಶರಬತ್ತು ಕುಡಿಯುವುದು ಸಾಮಾನ್ಯ. ಜಾಗೆಯೇ ಸಿಹಿ ತಿಂಡಿ ಪ್ರಿಯರು ಬಿಸಿ ಬಿಸಿ ಜಿಲೇಬಿ (Jilebi) ತಿನ್ನಲು ಹಾತೊರೆಯುತ್ತಾರೆ. ಆದರೆ ಈಗ ಶರಬತ್ತು (Sharbat) ಹಾಗೂ ಜಿಲೇಬಿ ಪ್ರಿಯರಿಗೆ ಆಘಾತ ಎದುರಾಗುವಂಥ ಆರೋಪಗಳು ಕೇಳಿಬಂದಿವೆ. ಬಾಯಲ್ಲಿ ನೀರೂರಿಸುವ ಜಿಲೇಬಿ ಆರೋಗ್ಯಕ್ಕೆ ಎಷ್ಟು ಸುರಕ್ಷಿತ ಎಂಬ ಚರ್ಚೆ ಶುರುವಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ಜಿಲೇಬಿಗೆ ಕೃತಕ ಬಣ್ಣ ಬಳಸುತ್ತಿರುವುದು ಆಹಾರ ಗುಣಮಟ್ಟ ಇಲಾಖೆಯ ಗಮನಕ್ಕೆ ಬಂದಿದೆ.
ಮತ್ತೊಂದೆಡೆ, ಪ್ಯಾಕೆಟ್ಗಳಲ್ಲಿ, ಬಾಟಲ್ಗಗಳಲ್ಲಿ ಶರಬತ್ತು ಮಾರಾಟವೂ ಜೋರಾಗಿದೆ. ಆದರೆ, ಈ ಶರಬತ್ತು ತಯಾರಿಸಲು ಕಲುಷಿತ ನೀರಿನ ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸಕ್ಕರೆ ಮಿಶ್ರಿತ ನೀರನ್ನು ಮುಚ್ಚಿದ ಡಬ್ಬಿಯಲ್ಲಿ ಇಡುವುದರಿಂದ ನೀರು ಕಲುಷಿತವಾಗುತ್ತದೆ. ಹೀಗಾಗಿ ಜಿಲೇಬಿ ಮತ್ತು ಶರಬತ್ ಗುಣಮಟ್ಟ ತಪಾಸಣೆಗೆ ವಿಶೇಷ ಕಾರ್ಯಾಚರಣೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ. ಮುಂದಿನ 3 ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲಿ ತಲಾ 5 ಮಾದರಿ ಸಂಗ್ರಹ ಮಾಡಲಾಗುತ್ತದೆ.
ಆಹಾರ ತಜ್ಞರಿಂದ ಎಚ್ಚರಿಕೆಯ ಮಾತು
ಇಂಥಾ ತಿನಿಸುಗಳನ್ನು ಸೇವಿಸುವ ಮುನ್ನ ಎಚ್ಚರ ಅಗತ್ಯ ಎಂದು ಕೆಸಿ ಜನರಲ್ ಆಸ್ಪತ್ರೆ ಆಹಾರ ತಜ್ಞ ಕೀರ್ತಿ ಹಿರಿಸಾವೆ ಕೂಡ ಎಚ್ಚರಿಕೆ ನೀಡಿದ್ದಾರೆ.
ಜಿಲೇಬಿ ಮಾರಟಗಾರರು ಹೇಳುವುದೇನು?
ಈ ಮಧ್ಯೆ, ನಾವು ಯಾವುದೇ ಕೃತಕ ಬಣ್ಣ ಬಳಕೆ ಮಾಡುವುದಿಲ್ಲ. ಆಹಾರ ಇಲಾಖೆ ಬಳಿ ತರಬೇತಿ ತಗೆದುಕೊಂಡಿದ್ದೇವೆ ಎಂದು ಜಿಲೇಬಿ ಮಾರಟಗಾರರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಬೆಲ್ಲವೂ ಅಪಾಯಕಾರಿ: ಸಲ್ಫರ್ ಡೈಆಕ್ಸೈಡ್, ಕೃತಕ ಬಣ್ಣ ಪತ್ತೆ
ಇಡ್ಲಿ ಕವರ್, ಹಸಿರು ಬಟಾಣಿ, ಪನ್ನೀರ್ ಸೇರಿ ಅನೇಕ ವಸ್ತುಗಳ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ, ಅವುಗಳ ಸುರಕ್ಷತೆ ಬಗ್ಗೆ ಈಗಾಗಲೇ ಆಘಾತಕಾರಿ ವರದಿಗಳು ಬಂದಿವೆ. ಇದೀಗ, ಜಿಲೇಬಿ ಮತ್ತು ಶರಬತ್ ಸುರಕ್ಷತೆ ಮಟ್ಟ ಪರೀಕ್ಷೆಗೆ ಆಹಾರ ಇಲಾಖೆ ಮುಂದಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:07 am, Tue, 6 May 25