ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್​ ಆರಂಭ: ಗೃಹ ಸಚಿವ ಅಧಿಕೃತ ಘೋಷಣೆ

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರವಾಗಿ ಟೋಯಿಂಗ್ ವ್ಯವಸ್ಥೆಯನ್ನು ಮತ್ತೆ ಜಾರಿಗೆ ತರಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ 9000 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. "ಮನೆ ಮನೆಗೆ ಪೊಲೀಸ್" ಕಾರ್ಯಕ್ರಮ, ಸೈಬರ್ ಅಪರಾಧ ವಿರೋಧಿ ಹೊಸ ಇಲಾಖೆ ಮತ್ತು ಡ್ರಗ್ಸ್ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ ಪರಮೇಶ್ವರ್​ ಹೇಳಿದರು.

ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್​ ಆರಂಭ: ಗೃಹ ಸಚಿವ ಅಧಿಕೃತ ಘೋಷಣೆ
ಜಿ ಪರಮೇಶ್ವರ್​
ವಿವೇಕ ಬಿರಾದಾರ

Updated on: May 27, 2025 | 4:08 PM

ಬೆಂಗಳೂರು, ಮೇ 26: ಇತ್ತೀಚಿಗಷ್ಟೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಬೆಂಗಳೂರು ನಗರದಲ್ಲಿ ಮತ್ತೆ ಟೋಯಿಂಗ್​ (Towing) ಆರಂಭಿಸುವುದಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಗೃಹ ಸಚಿವ ಜಿ. ಪರಮೇಶ್ವರ್​ (G. Parameshwara), ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಈ ಟ್ರಾಫಿಕ್​ ಸಮಸ್ಯೆಗೆ ಕಡಿವಾಣ ಹಾಕಲು ಮತ್ತೆ ಟೋಯಿಂಗ್​ ಪ್ರಾರಂಭಿಸುತ್ತೇವೆ ಎಂದು ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದೆ ಟ್ರಾಫಿಕ್ ಸಮಸ್ಯೆಗೆ ಟೋಯಿಂಗ್ ಮಾಡುತ್ತಿದ್ವಿ. ಮತ್ತೆ ಅದನ್ನು ಜಾರಿಗೆ ತರುತಿದ್ದೇವೆ. ಪೊಲೀಸ್ ಸಿಬ್ಬಂದಿ ಮತ್ತು ಹೋಮ್​ ಗಾರ್ಡ್ಸ್​ಗಳನ್ನು ಬಳಸಿಕೊಂಡು ಟೋಯಿಂಗ್ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ತೆಗೆದುಕೊಂಡಿದ್ದೇನೆ. ಬಿಬಿಎಂಪಿ ಮತ್ತು ಪೊಲೀಸರು ಒಟ್ಟಾಗಿ ಕಾರ್ಯಚರಣೆ ಮಾಡಿದರೆ ಟ್ರಾಫಿಕ್​ ಸಮಸ್ಯೆ ಬಗೆಹರಿಯುತ್ತದೆ. ಬೆಂಗಳೂರಿನ 19 ಕಡೆ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದಕ್ಕೆ ಕಾರಣವನ್ನು ಎಂದು ಟ್ರಾಫಿಕ್​ ಪೊಲೀಸರು ಗುರುತಿಸಿದ್ದಾರೆ. ಒಂದು ವಾರದ ಒಳಗೆ ವರದಿ ನೀಡುವಂತೆ ಸೂಚನೆ ನೀಡಿದ್ದೇನೆ. ಟ್ರಾಫಿಕ್​ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲು ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

9 ಸಾವಿರ ಸಿಸಿ ಕ್ಯಾಮೆರಾ ಅಳವಡಿಕೆ

ಮಹಿಳಾ ಮತ್ತು ಮಕ್ಕಳ ಸುರಕ್ಷತೆ ಬಗ್ಗೆ ಸಾಕಷ್ಟು ಕ್ರಮ ತಡಗೆದುಕೊಂಡಿದ್ದೇವೆ. ಮಹಿಳೆಯರ ಸುರಕ್ಷತೆ ಸಲುವಾಗಿ ಬೆಂಗಳೂರು ನಗರದಲ್ಲಿ 9 ಸಾವಿರ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ನಗರದಲ್ಲಿ 30 ಸೇಫ್ಟಿ ಐಲ್ಯಾಂಡ್ ಸ್ಥಾಪಿಸಿದ್ದೇವೆ. ರಾತ್ರಿ ವೇಳೆ ಮಹಿಳೆಯರು ಓಡಾಡುವ ಡಾರ್ಕ್ ಏರಿಯಾಗಳಲ್ಲಿ ಹೆಚ್ಚು ಗಮನ ಹರಿಸುತ್ತೇವೆ. ನಿರ್ಭಯ ಯೋಜನೆಯಡಿ ಕೇಂದ್ರ ಸರ್ಕಾರ 667 ಕೋಟಿ ರೂ. ನೀಡಿದೆ. ಈ ಹಣವನ್ನು ಮಹಿಳೆಯರ ಸುರಕ್ಷತೆಗಾಗಿ ಖರ್ಚು ಮಾಡಿದ್ದೇವೆ. ಬೆಂಗಳೂರು ಸುರಕ್ಷಿತ ನಗರಗಳಲ್ಲಿ ಒಂದು ಎಂದು ಹೈದರಾಬಾದ್​ನ ಸಂಸ್ಥೆಯೊಂದು ವರದಿ ನೀಡಿದೆ. ಇನ್ನೂ ಹೆಚ್ಚಿನ ಪರಿಣಾಮಕಾರಿ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಿದ್ದೇವೆ. ಇನ್ನೂ ಅನೇಕ‌ ಕಡೆ ಡ್ರಗ್ಸ್ ಸಿಗುತ್ತಿದೆ. ಈ ಬಗ್ಗೆ ಮಾಹಿತಿ ಇದೆ. ಡ್ರಗ್ಸ್ ಮಾರಾಟ ಸಂಬಂಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಯಾ ಇನ್ಸ್​​ಪೆಕ್ಟರ್​ಗಳು ಜವಾಬ್ದಾರಿಯಾಗಿರುತ್ತಾರೆ. ಡ್ರಗ್ಸ್​ ಮಾರಾಟ ಮತ್ತು ಸೇವನೆಯನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಕೆಲವು ಸೂಚನೆ ನೀಡಿದ್ದೇನೆ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಟೋಯಿಂಗ್: ವಾಹನ ಸವಾರರಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ

“ಮನೆ ಮನೆಗೆ ಪೊಲೀಸ್”

ಪೊಲೀಸರು ಜನಸ್ನೇಹಿಯಾಗಿರಬೇಕು ಎಂದು ಮನೆ ಮನೆಗೆ ಪೊಲೀಸ್ ಎಂಬ ಹೊಸ ಕಾರ್ಯಕ್ರಮ ಆರಂಭಿಸುತ್ತಿದ್ದೇವೆ. ದೂರು‌ ಕೊಡಲು ಹೆದರುವವರಿಗೆ ಈ ಕಾರ್ಯಕ್ರಮ ಸಹಾಯಕವಾಗಲಿದೆ. ರಾಜ್ಯ ವ್ಯಾಪ್ತಿ ಇದನ್ನು ಜಾರಿಗೆ ತರುತ್ತೇವೆ. ಪೊಲೀಸರು ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಕಾನೂನು, ಟ್ರಾಫಿಕ್​ ನಿಯಮ ಮತ್ತು ಡ್ರಗ್ಸ್​ದಿಂದಾಗುವ ಮಾರಕದ ಬಗ್ಗೆ ತಿಳಿಸುತ್ತಾರೆ. ಶಾಲಾ-ಕಾಲೇಜುಗಳಲ್ಲಿ ನಡೆಯುವ ಪಾಲಕರ ಸಭೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಇರಬೇಕು. ರಿಯಲ್ ಎಸ್ಟೇಟ್​ ದಂಧೆಗೆ ಕಡಿವಾಣ ಹಾಕುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಸಿದ್ದಾರೆ.

ಪೊಲೀಸರ ಭ್ರಷ್ಟಾಚಾರ ಬಗ್ಗೆ ಸಾಕಷ್ಟು ಮಾತಿದೆ. ಅದರ ಬಗ್ಗೆಯೂ ಕಠಿಣ ಸೂಚನೆ ಕೊಟ್ಟಿದ್ದೇನೆ. ಸೈಬರ್ ಕ್ರೈಂ ವಿಭಾಗಕ್ಕೆ ಹೊಸ ನಿಯಮ ಜಾರಿಗೆ ತರುತ್ತೇವೆ. ಸೈಬರ್ ಕ್ರೈಂ ತಡೆಗಟ್ಟಲು ಹೊಸ ಇಲಾಖೆ, ಹೊಸ ಡಿಜಿಪಿ ಹುದ್ದೆ ಸೃಷ್ಟಿಸಲಾಗುತ್ತದೆ. ದೇಶದಲ್ಲೇ ಮೊದಲ ಬಾರಿಗೆ ಹೊಸ ಇಲಾಖೆ ಆರಂಭಿಸುತ್ತಿದ್ದೇವೆ ಎಂದರು.

ವರದಿ: ಪ್ರದೀಪ್​ ಚಿಕ್ಕಾಟಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:07 pm, Tue, 27 May 25

Loading...
Unable to load recommendations.
Follow Us