ಬೆಂಗಳೂರಿನ ಕಂಠೀರವ ಸ್ಟುಡಿಯೋ ರಸ್ತೆಯಲ್ಲಿ ಗುಂಡಿಗಳ ದರ್ಬಾರ್: ಕಿತ್ತೋದ ರಸ್ತೆಗೆ ಸವಾರರು ಕಂಗಾಲು
ಕಂಠೀರವ ಸ್ಟುಡಿಯೋದ ಹದಗೆಟ್ಟ ರಸ್ತೆಗಳಿಂದಾಗಿ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಬಿಎಂಪಿ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಗುಂಡಿಗಳು, ಕಿತ್ತುಹೋದ ರಸ್ತೆಗಳು ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ಧೂಳು ಮತ್ತು ಗುಂಡಿಗಳಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಸ್ತೆ ಸುಧಾರಣೆಗಾಗಿ ಜನರು ಆಗ್ರಹಿಸುತ್ತಿದ್ದಾರೆ.

ಬೆಂಗಳೂರು, ಮಾರ್ಚ್ 01: ಬಿಬಿಎಂಪಿ ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಜನರು ನಿತ್ಯ ಗುಂಡಿ (potholes) ಬಿದ್ದ ರಸ್ತೆಯಲ್ಲಿ ಹೆಣಗಾಡುವ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಕಿತ್ತೋದ ರಸ್ತೆ ಒಂದೆಡೆಯಾದರೆ, ಗುಂಡಿ ಬಿದ್ದ ರಸ್ತೆಯಲ್ಲಿ ಚರಂಡಿ ನೀರು ತುಂಬಿ ಪ್ರಯಾಣಿಕರ ಜೀವಕ್ಕೆ ಕಂಟಕ ತಂದಿಡುತ್ತಿದೆ. ಧೂಳು, ಗುಂಡಿ ತುಂಬಿದ ರಸ್ತೆಯಲ್ಲಿ ಓಡಾಡಿ ಸುಸ್ತಾದ ಜನರು ಇದೇನಾ ಸ್ವಾಮಿ ನಮ್ಮ ಹೆಮ್ಮೆಯ ರಸ್ತೆ ಅಂತಾ ಛೀಮಾರಿ ಹಾಕುತ್ತಿದ್ದಾರೆ.
ಬೆಂಗಳೂರಿನ ರಸ್ತೆಗಳನ್ನ ಹೈಟೆಕ್ ಮಾಡುತ್ತೇವೆ, ಹೈಫೈ ಮಾಡುತ್ತೇವೆ ಅಂತಾ ಬರೀ ಮಾತಿನ ಶೂರತ್ವ ಪ್ರದರ್ಶಿಸಿಸುವ ಪಾಲಿಕೆ ನಡೆಗೆ ಇದೀಗ ಸಿಟಿಮಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಪೀಣ್ಯ ಟು ಕಂಠೀರವ ಸ್ಟುಡಿಯೋಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಗುಂಡಿಗಳ ಕಾಟ ಶುರುವಾಗಿದ್ದು, ವಾಹನ ಸವಾರರಿಗೆ ನಿತ್ಯ ನರಕ ದರ್ಶನವಾಗುತ್ತಿದೆ. ಕಿತ್ತೋದ ರಸ್ತೆಯ ಕಾಟಕ್ಕೆ ಬೇಸತ್ತ ಸಿಟಿಮಂದಿ ನಿತ್ಯ ಅದೇ ರಸ್ತೆಯಲ್ಲೇ ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿದೆ.
ಇದನ್ನೂ ಓದಿ: ರಾಜಧಾನಿ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಗಂಡಾಂತರ: ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ
ಇನ್ನು ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಜಲ್ಲಿಕಲ್ಲುಗಳು ಮೇಲೆದ್ದು ಬಂದಿದ್ದು, ನಿತ್ಯ ದ್ವಿಚಕ್ರ ವಾಹನ ಸವಾರರು ಸ್ಕಿಡ್ ಆಗಿ ಬೀಳುವ ಘಟನೆ ಹೆಚ್ಚಾಗುತ್ತಿವೆ. ಇತ್ತ ಚರಂಡಿ, ಫುಟ್ ಪಾತ್ ಕೂಡ ಗಬ್ಬೆದ್ದು ನಾರುತ್ತಿದ್ದು, ರಾಜಧಾನಿಯ ರಸ್ತೆಗಳನ್ನ ನಿರ್ವಹಣೆ ಮಾಡಬೇಕಿದ್ದ ಪಾಲಿಕೆ ನಿದ್ದೆಗೆ ಜಾರಿರುವುದು ಸಿಟಿಜನರನ್ನ ಕೆರಳಿಸಿದೆ. ಕಿತ್ತೋದ ರಸ್ತೆಯಿಂದ ಸುಸ್ತಾದ ಸಿಟಿಮಂದಿ ಬಿಬಿಎಂಪಿ ಹಾಗೂ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಗಡುವು ಇಂದು ಅಂತ್ಯ: ರಜಾ ದಿನವಾದ ಭಾನುವಾರವೂ ಮುಂದುವರಿದ ಕಾಮಗಾರಿ!
ಸದ್ಯ ಬೆಂಗಳೂರಿನ ರಸ್ತೆಗಳನ್ನ ಗುಂಡಿಮುಕ್ತ ಮಾಡುತ್ತೇವೆ, ರಸ್ತೆಗಳನ್ನ ಹೈಫೈ ಮಾಡುತ್ತೇವೆ ಅಂತಾ ಕಾರ್ಯಕ್ರಮಗಳಲ್ಲಿ ಬರೀ ಭಾಷಣ ಮಾಡುತ್ತಿರುವ ಸರ್ಕಾರ ಹಾಗೂ ಪಾಲಿಕೆಯ ನಡೆ ಇದೀಗ ಸಿಟಿಜನರಿಗೆ ಸಂಕಷ್ಟ ತಂದಿಟ್ಟಿದೆ. ಸದ್ಯ ಧೂಳು ತುಂಬಿದ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಸಂಚಾರ ಮಾಡುತ್ತಿರುವ ಜನರು ಇನ್ನಾದ್ರೂ ರಸ್ತೆ ಸರಿಯಾಗುತ್ತ ಅಂತಾ ಕಾದುಕುಳಿತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







