AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿರತೆ ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಬೆಂಗಳೂರಿನ ಈ ಭಾಗದ ಜನರು!

ಬೆಂಗಳೂರಿನ ಅಂಜನಾಪುರದಲ್ಲಿ ಚಿರತೆ ಕಾಣಿಸಿಕೊಂಡಿರುವುದು ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಕಳೆದ ಒಂದು ವಾರದಿಂದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಚಿರತೆ ಓಡಾಟ ಸೆರೆಯಾಗಿದ್ದು, ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಚಿರತೆಯು ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಜನರಿಗೆ ಸುರಕ್ಷತೆ ಒದಗಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಚಿರತೆ ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಬೆಂಗಳೂರಿನ ಈ ಭಾಗದ ಜನರು!
ಚಿರತೆ ಭಯಕ್ಕೆ ಮನೆಯಿಂದ ಹೊರ ಬರಲೂ ಹೆದರುತ್ತಿದ್ದಾರೆ ಬೆಂಗಳೂರಿನ ಈ ಭಾಗದ ಜನರು!
ಭಾವನಾ ಹೆಗಡೆ
|

Updated on:Feb 07, 2026 | 10:07 AM

Share

ಬೆಂಗಳೂರು, ಫೆಬ್ರವರಿ 07: ಇತ್ತೀಚೆಗೆ ಚಾಮರಾಜನಗರ, ಮೈಸೂರು ಸೇರಿದಂತೆ ಕನಾರ್ಟಕದ ಹಲವು ಭಾಗಗಳಲ್ಲಿ ಹುಲಿ, ಚಿರತೆಯ ಹಾವಳಿ ಕಂಡುಬಂದಿತ್ತು. ಆದರೆ ಇದೀಗ ಸಿಲಿಕಾನ್ ಸಿಟಿಯಲ್ಲಿ(Cheetah in Bengaluru) ಚಿರತೆ ಪ್ರತ್ಯಕ್ಷವಾಗಿರುವುದು ಆತಂಕ ಮೂಡಿಸಿದೆ. ಜೆಪಿ ನಗರದ ಸಮೀಪದ ಅಂಜನಾಪುರದಲ್ಲಿ ಚಿರತೆ ಪ್ರತ್ಯಕ್ಷವಾಗಿರುವ ಹಿನ್ನೆಲೆ ಕಳೆದ ಒಂದು ವಾರದಿಂದ ನಿವಾಸಿಗಳು ಭಯಭೀತರಾಗಿದ್ದು, ಮನೆಯಿಂದ ಹೊರಬರಲೂ ಹೆದರುತ್ತಿದ್ದಾರೆ.

ಚಿರತೆಯ ಓಡಾಟ ಸಿಸಿಟಿವಿಲಿ ಸೆರೆ

ಜೆಪಿ ನಗರದ 9ನೇ ಫೇಸ್‌ನ ಅಂಜನಾಪುರ ಬಿಡಿಎ ಲೇಔಟ್‌ನಲ್ಲಿ ಕಳೆದ ಒಂದು ವಾರದಲ್ಲಿ ನಾಲ್ಕೈದು ಬಾರಿ ಚಿರತೆ ಕಾಣಿಸಿಕೊಂಡಿದ್ದು, ಅಲ್ಲಿನ ನಿವಾಸಿಗಳು ಮನೆಯ ಹೊರಗೆ ಹೆಜ್ಜೆ ಇಡುವುದಕ್ಕೂ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾತ್ರಿ–ಹಗಲು ಎನ್ನದೆ ಚಿರತೆ ಓಡಾಡುತ್ತಿರುವ ದೃಶ್ಯಗಳು ಮನೆಗಳ ಮುಂದೆ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ವೀಡಿಯೋ ಇಲ್ಲಿದೆ ನೋಡಿ

ಕೆಲ ನಿವಾಸಿಗಳು ಕಾರಿನಲ್ಲಿ ಹೊರಡುವ ವೇಳೆ ಚಿರತೆ ಅಡ್ಡ ಬಂದ ದೃಶ್ಯವನ್ನೂ ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಅಂಜನಾಪುರದ ಪಕ್ಕದಲ್ಲೇ ತುರಹಳ್ಳಿ ಹಾಗೂ ಬನ್ನೇರುಘಟ್ಟ ಅರಣ್ಯ ಪ್ರದೇಶಗಳಿದ್ದು, ಅಲ್ಲಿನ ಚಿರತೆಗಳು ನಾಡಿನತ್ತ ಬರುತ್ತಿರುವ ಶಂಕೆ ವ್ಯಕ್ತವಾಗಿದೆ. ಅದಲ್ಲದೆ ನಗರಕ್ಕೆ ಲಗ್ಗೆಯಿಟ್ಟಿರುವ ಚಿರತೆ ಈಗಾಗಲೇ ಒಂದು ನಾಯಿಯನ್ನು ಹೊತ್ತೊಯ್ದಿದೆ ಎಂಬ ಆರೋಪವೂ ಕೇಳಿಬಂದಿದೆ.ಇದರಿಂದ ಬೇಸತ್ತ ಸ್ಥಳೀಯರು ಚಿರತೆ ಓಡಾಟದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ನಿವಾಸಿಗಳಿಗೆ ಯಾವುದೇ ಅಪಾಯವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ.

ನಟರಾಜ್ ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:04 am, Sat, 7 February 26