ನಮ್ಮ ಕ್ಲಿನಿಕ್ನಲ್ಲಿ ಇಲಿ, ಹೆಗ್ಗಣಗಳಿಗೂ ಸಿಗುತ್ತೆ ಔಷಧ! ಅರ್ಧ ಮೂಟೆ ಐವಿ ಫ್ಲೂಯಿಡ್ ಖಾಲಿ ಮಾಡಿದ ಹೆಗ್ಗಣಗಳು
ಬಿಜೆಪಿ ಅಧಿಕಾರದಲ್ಲಿದ್ದಾಗ ಇಂದಿರಾ ಕ್ಯಾಂಟೀನ್ ಬಗ್ಗೆ ಅಸಡ್ಡೆ ತೋರಿತ್ತು ಎಂಬ ಆರೋಪವಿತ್ತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಬಡವರಿಗೆಂದು ಆರಂಭಿಸಲಾಗಿರುವ ನಮ್ಮ ಕ್ಲಿನಿಕ್ಗಳು ಮೂಲೆಗುಂಪಾಗುತ್ತಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನಲೆ ಬೆಂಗಳೂರಿನ ನಮ್ಮ ಕ್ಲಿನಿಕ್ಗಳ ಸ್ಥಿತಿಗತಿ ಬಗ್ಗೆ ‘ಟಿವಿ9’ ರಿಯಾಲಿಟಿ ಚೆಕ್ ನಡೆಸಿದ್ದು, ಆಘಾತಕಾರಿ ಅಂಶಗಳು ಬಯಲಾಗಿವೆ.

ಬೆಂಗಳೂರು, ಸೆಪ್ಟೆಂಬರ್ 26: ಬೆಂಗಳೂರಿನಲ್ಲಿ (Bengaluru) ನಮ್ಮ ಕ್ಲಿನಿಕ್ಗಳಲ್ಲಿ (Namma Clinic) ಸಮಸ್ಯೆಗಳ ಆಗರವೇ ಇದೆ ಬಗ್ಗೆ ಆರೋಪಗಳು ಕೇಳಿಬರುತ್ತಿದ್ದಂತೆಯೇ ‘ಟಿವಿ9’ ಹಲವಡೆ ರಿಯಾಲಿಟಿ ಚೆಕ್ (Tv9 Reality Check) ನಡೆಸಿದೆ. ಈ ವೇಳೆ ಹಲವು ಕಡೆಗಳಲ್ಲಿ ನಮ್ಮ ಕ್ಲಿನಿಕ್ಗಳಲ್ಲಿ ಔಷಧಗಳ ಕೊರತೆ, ಸಿಬ್ಬಂದಿಗೆ ವೇತನ ಪಾವತಿ ಆಗದೇ ಇರುವುದು ಸೇರಿ ನಾನಾ ಸಮಸ್ಯೆಗಳು ಗಮನಕ್ಕೆ ಬಂದಿವೆ. ಮತ್ತಿಕೆರೆ ನಮ್ಮ ಕ್ಲಿನಿಕ್ನಲ್ಲಿ ಇಲಿ ಹಾಗೂ ಹೆಗ್ಗಣಗಳ ಹಾವಳಿ ಕಂಡು ಬಂದಿದ್ದು ಅವ್ಯವಸ್ಥೆಗಳ ಆಗಾರವಾಗಿತ್ತು. ಅರ್ಧ ಮೂಟೆಯಷ್ಟು ಐವಿ ಫ್ಲೂಯಿಡ್, ಆರ್ಎಲ್ಗಳನ್ನು ಇಲಿಗಳು ಹಾಳು ಮಾಡಿರುವುದು ಕಂಡುಬಂದಿದೆ.
ಗಾಂಧಿನಗರ ಕ್ಷೇತ್ರದ ಓಕಳಿಪುರಂನಲ್ಲಿ ಎರಡು ದಿನಗಳ ಹಿಂದಷ್ಟೇ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನಮ್ಮ ಕ್ಲಿನಿಕ್ಗೆ ಚಾಲನೆ ನೀಡಿದ್ದರು. ಅದಾದ ಎರಡು ದಿನಗಳ ಬಳಿಕ ಕ್ಲಿನಿಕ್ ಹೋಗಿ ಪರಿಶೀಲಿಸಿದಾಗ, ಸಮಯಕ್ಕೆ ಸರಿಯಾಗಿ ವೈದ್ಯರೇ ಬರದಿರುವುದು ಗೊತ್ತಾಗಿದೆ. ಕ್ಲಿನಿಕ್ 9 ಗಂಟೆಗೆ ಆರಂಭವಾದರೂ 9:30 ರವರೆಗೆ ವೈದ್ಯರು ಹಾಗೂ ಸಿಬ್ಬಂದಿಯೇ ಬಂದಿಲ್ಲ. ರೋಗಿಗಳು ಕ್ಲಿನಿಕ್ಗೆ ಬಂದು ಕಾಯುತ್ತಿದ್ದರೂ ವೈದ್ಯರೇ ಕಂಡು ಬರಲಿಲ್ಲ. ವೈದ್ಯರು, ಸ್ಟಾಫ್ ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಇಲ್ಲ ಎನ್ನುವುದು ಒಂದೆಡೆಯಾದರೆ, ಔಷಧ ಕೂಡ ಅಷ್ಟಕಷ್ಟೇ ಲಭ್ಯ ಇರುವುದು ಕಂಡುಬಂತು.
ಮಲ್ಲೇಶ್ವರಂನಲ್ಲಿರುವ ಗಾಯತ್ರಿನಗರದ ನಮ್ಮ ಕ್ಲಿನಿಕ್ ರಿಯಾಲಿಟಿ ಚೆಕ್ ವೇಳೆ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ಗಳೇ ಇರಲಿಲ್ಲ. ಶೇ 40 ರಷ್ಟು ಔಷಧ ಕೊರತೆಯೂ ಕಂಡುಬಂತು.
ಜೆಪಿ ಪಾರ್ಕ್ 35 ರ ನಮ್ಮ ಕ್ಲಿನಿಕ್ನಲ್ಲಿ ಔಷಧಿಗಳೇ ಇರಲಿಲ್ಲ. ಶೇ 40 ರಷ್ಟು ಔಷಧಗಳ ಕೊರತೆ ಇರುವುದನ್ನು ವೈದ್ಯರೇ ಒಪ್ಪಿಕೊಂಡಿದ್ದು, ಮಲೇರಿಯಾ , ಡೆಂಘಿ ಜ್ವರದ ಟೆಸ್ಟ್ ಕಿಟ್ ಇಲ್ಲ. ಬಿಪಿ, ಶುಗರ್ಗೆ ಬೇಕಾದ ಔಷಧ ಇಲ್ಲ. ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ ಎಂದು ವೈದ್ಯರೇ ಸಮಸ್ಯೆಗಳ ಬಗ್ಗೆ ಅಲವತ್ತುಕೊಂಡಿದ್ದಾರೆ.
ಲ್ಯಾಬ್ ಟೆಕ್ನೀಷಿಯನ್ಗಳಿಗೆ ಪಾವತಿಯಾಗ್ತಿಲ್ಲ ವೇತನ!
ನಮ್ಮ ಕ್ಲಿನಿಕ್ಗಳ ಲ್ಯಾಬ್ ಟೆಕ್ನೀಷಿಯನ್ಗಳಿಗೆ ಕಳೆದ ಮೂರು ತಿಂಗಳಿನಿಂದ ವೇತನವಾಗಿಲ್ಲ. ಕೆಲವೆಡೆ ಲ್ಯಾಬ್ ಟೆಕ್ನೀಷಿಯನ್ ಎಂದು ನೇಮಕ ಮಾಡಿ ಲೋವರ್ ಡಿವಿಷನ್ ಕ್ಲರ್ಕ್ ಕೆಲಸ ಮಾಡಿಸುತ್ತಿರುವುದೂ ತಿಳಿದುಬಂದಿದೆ. ನೇಮಕವಾದ ಹುದ್ದೆಯ ಕೆಲಸವೂ ಇಲ್ಲ, ವೇತನವೂ ಕಡಿಮೆ, ಅದೂ ಸಮಯಕ್ಕೆ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೈಕ್ ಟ್ಯಾಕ್ಸಿ ನಿರ್ಬಂಧ: ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ
ಒಟ್ಟಿನಲ್ಲಿ ನಮ್ಮ ಕ್ಲಿನಿಕ್ಗಳ ಅಭಿವೃದ್ಧಿ ಬಗ್ಗೆ ಆರೋಗ್ಯ ಇಲಾಖೆ ಯಾಕೋ ತಲೆ ಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಸಮರ್ಪಕ ನಿರ್ವಹಣೆ ಕೊರತೆ ‘ಟಿವಿ9’ ರಿಯಾಲಿಟಿ ಚೆಕ್ನಲ್ಲಿ ಬಯಲಾಗಿದೆ. ಇನ್ನಾದರೂ ಸರ್ಕಾರ ಕೊಂಚ ಇತ್ತ ಗಮನಹರಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:33 am, Fri, 26 September 25



