AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿದ್ರಿಸಿದ್ದ ಬಾಲಕನ ಕ್ಯಾಬ್​​ನಲ್ಲೆ ಬಿಟ್ಟುಹೋದ ಪೋಷಕರು: 1 ಗಂಟೆಯಲ್ಲಿ ಆತನ ರಕ್ಷಣೆ ಮಾಡಿದ ಪೊಲೀಸರು

ಮಗುವನ್ನು ಕ್ಯಾಬ್​​ನಲ್ಲಿಯೇ ಮರೆತು ಪೋಷಕರು ಹೋಗಿದ್ದು, ಕೇವಲ ಒಂದು ಗಂಟೆಯ ಅವಧಿಯಲ್ಲಿ ಪೊಲೀಸರು ಬಾಲಕನ ರಕ್ಷಣೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕ್ಯಾಬ್​​ ಚಾಲಕನಿಗೂ ಹಿಂಬದಿ ಸೀಟ್​​ನಲ್ಲಿ ಬಾಲಕ ನಿದ್ರಿಸಿದ್ದ ಅರಿವಿರಲಿಲ್ಲ ಎನ್ನಲಾಗಿದ್ದು, ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (CCTNS) ಆಪ್ ಬಳಸಿ ಚಾಲಕನನ್ನು ಸಂಪರ್ಕಿಸಿ ಮಗುವನ್ನು ಮರಳಿ ಕುಟುಂಬಕ್ಕೆ ಸೇರಿಸಲಾಗಿದೆ.

ನಿದ್ರಿಸಿದ್ದ ಬಾಲಕನ ಕ್ಯಾಬ್​​ನಲ್ಲೆ ಬಿಟ್ಟುಹೋದ ಪೋಷಕರು: 1 ಗಂಟೆಯಲ್ಲಿ ಆತನ ರಕ್ಷಣೆ ಮಾಡಿದ ಪೊಲೀಸರು
ಸಾಂದರ್ಭಿಕ ಚಿತ್ರImage Credit source: Tv9 Kannada
ಪ್ರಸನ್ನ ಹೆಗಡೆ
|

Updated on: Feb 18, 2026 | 3:08 PM

Share

ಬೆಂಗಳೂರು, ಫೆಬ್ರವರಿ 18: ನಿದ್ರಿಸಿದ್ದ ಮಗುವನ್ನು ಮರೆತು ಕ್ಯಾಬ್​​ನಲ್ಲಿಯೇ ಪೋಷಕರು ಬಿಟ್ಟು ಹೋಗಿರುವ ಪ್ರಕರಣ ಬೆಂಗಳೂರಿನ ಹೆನ್ನೂರಲ್ಲಿ ನಡೆದಿದೆ. ಬಳಿಕ ಪೊಲೀಸರ ಸಹಾಯದಿಂದ ಕ್ಯಾಬ್​​ ಪತ್ತೆ ಮಾಡಿ ಮಗುವಿನ ರಕ್ಷಣೆ ಮಾಡಲಾಗಿದ್ದು ಪ್ರಕರಣ ಸುಖಾಂತ್ಯ ಕಂಡಿದೆ. ಪೊಲೀಸರು ತಲುಪುವ ಮೊದಲು ಅದಾಗಲೇ ಮತ್ತೆರಡು ಟ್ರಿಪ್​​ಗಳನ್ನು ಚಾಲಕ ಪೂರೈಸಿದ್ದರೂ ಆತನಿಗಾಗಲೀ ಅಥವಾ ಇತರ ಪ್ರಯಾಣಿಕರಿಗಾಗಲೀ ನಿದ್ರಿಸುತ್ತಿರುವ ಮಗು ಗಮನಕ್ಕೆ ಬಾರದೇ ಇರುವುದು ನಿಜಕ್ಕೂ ವಿಪರ್ಯಾಸ.

ಜಿಯಾನ್ ಚುಂಗಿ (4) ರಕ್ಷಿಸಲಾದ ಮಗುವಾಗಿದ್ದು,  ಈತನ ಕುಟುಂಬ ಮತ್ತು ಬಂಧುಗಳು ಒಟ್ಟಾಗಿ ಇಸ್ಕಾನ್ ದೇವಸ್ಥಾನಕ್ಕೆ ತೆರಳಿದ್ದರು. ದೇಗುಲದಿಂದ ಮರಳಿ ಬರುವ ವೇಳೆ ಜಿಯಾನ್ ಚುಂಗಿ ಕ್ಯಾಬ್​​ನ ಹಿಂಬದಿಯ ಆಸನದಲ್ಲಿ ನಿದ್ರೆಗೆ ಜಾರಿದ್ದು, ಅಪಾರ್ಟ್‌ಮೆಂಟ್‌ಗೆ ತಲುಪಿದ ಬಳಿಕ ಕುಟುಂಬಸ್ಥರು ತ್ವರಿತವಾಗಿ ವಾಹನದಿಂದ ಇಳಿದು ಮನೆಗೆ ತೆರಳಿದ್ದಾರೆ. ನಿದ್ರಿಸುತ್ತಿದ್ದ ಬಾಲಕನ ಬಗ್ಗೆ ಒಬ್ಬರಿಗೂ ಗಮನ ಇರಲಿಲ್ಲ. ಇತ್ತ ಕ್ಯಾಬ್​​ ಚಾಲಕನೂ ಬಾಲಕನ ಗಮನಿಸದೆ ಮುಂದಿನ ಟ್ರಿಪ್​​ಗೆಂದು ತೆರಳಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಫ್ರೀಯಾಗಿ ಮೂವಿ ಸಿಗುತ್ತೆ ಎಂದು ಡೌನ್ ಲೋಡ್ ಮಾಡ್ತಿದ್ದಿರಾ? ಡೌನ್ ಲೋಡ್ ಆಗುವ ಸಮಯವೇ ಆಗುತ್ತೆ ವಂಚಕರಿಗೆ ವರದಾನ, ಹೇಗೆ ಗೊತ್ತಾ?

ಮನೆ ತಲುಪುತ್ತಿದ್ದಂತೆ ಕುಟುಂಬಸ್ಥರಿಗೆ ಮಗು ನಾಪತ್ತೆ ಆಗಿರುವ ವಿಚಾರ ಗೊತ್ತಾಗಿದೆ. ಈ ವೇಳೆ ಆತ ಕ್ಯಾಬ್​​ನಲ್ಲಿ ನಿದ್ರಿಸುತ್ತಿದ್ದ ಎಂಬುದು ನೆನಪಾಗಿ ಕಾಲ್ ಸೆಂಟರ್ ಮೂಲಕ ಕ್ಯಾಬ್ ಸಂಪರ್ಕಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಅದು ವಿಫಲವಾದ ಕಾರಣ ರಾಜ್ಯದ ತುರ್ತು ಪ್ರತಿಕ್ರಿಯಾ ವ್ಯವಸ್ಥೆಯಾದ ‘ನಮ್ಮ 112’ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ತಕ್ಷಣವೇ ಹೋಯ್ಸಳ-51 ಪೇಟ್ರೋಲಿಂಗ್‌ನಲ್ಲಿ ಸಮೀಪದಲ್ಲಿದ್ದ ಎಎಸ್‌ಐ ಮಂಜಪ್ಪ ಕೊಪ್ಪಳ ಹಾಗೂ ಮುಖ್ಯ ಆರಕ್ಷಕ ಸತೀಶ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದು, ಅವರು ಎರಡು ನಿಮಿಷಗಳಲ್ಲೇ ಅಪಾರ್ಟ್‌ಮೆಂಟ್‌ ತಲುಪಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕ್ಯಾಬ್ ನೋಂದಣಿ ಸಂಖ್ಯೆ ಆಧಾರದಲ್ಲಿ ಮೊಬೈಲ್ ಕ್ರೈಂ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್ವರ್ಕ್ ಸಿಸ್ಟಮ್ (CCTNS) ಆಪ್ ಬಳಸಿ ಚಾಲಕನನ್ನು ಸಂಪರ್ಕಿಸಿದ್ದಾರೆ.

ವಾಹನ ಪರಿಶೀಲಿಸಿದಾಗ ಜಿಯಾನ್ ಸುರಕ್ಷಿತವಾಗಿ ನಿದ್ರಿಸುತ್ತಿರುವುದು ಕಂಡುಬಂದಿದ್ದು, ಬಾಲಕನನ್ನು ಎಚ್ಚರಿಸದೆ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಕ್ಯಾಬ್​​ ಚಾಲಕನಿಗೆ ನಿರ್ದೇಶಿಸಲಾಗಿದೆ. ಹುಡುಕಾಟ ಆರಂಭವಾದ ಒಂದು ಗಂಟೆಯೊಳಗೆ ಕ್ಯಾಬ್ ಅಪಾರ್ಟ್‌ಮೆಂಟ್‌ಗೆ ತಲುಪಿದ್ದು, ಬಾಲಕನನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ವಿಶೇಷವೆಂದರೆ ಇಡೀ ಘಟನೆಯ ಅವಧಿಯಲ್ಲಿ ಬಾಲಕ ನಿದ್ರೆಯಲ್ಲೇ ಇದ್ದು, ಮನೆ ತಲುಪಿದ ಬಳಿಕವೇ ಆತನಿಗೆ ಎಚ್ಚರವಾಗಿದೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.