ಬೆಂಗಳೂರಿನ ಮಳೆಗೆ ಮೊದಲ ಬಲಿ: ಮರ ಬಿದ್ದು 3 ವರ್ಷದ ಕಂದಮ್ಮ ದುರಂತ ಸಾವು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ (ಮಾರ್ಚ್ 22) ಸಂಜೆ ಸುರಿದ ಭಾರೀ ಮಳೆಗೆ ಮೊದಲ ಬಲಿಯಾಗಿದೆ.ಸಣ್ಣ ಮಳೆ ಬಂದ್ರೇ ಸಾಕು ಒಂದಿಲ್ಲೊಂದು ದುರ್ಘಟನೆ ನಡೆಯುತ್ತಲೇ ಇದೆ. ನಿನ್ನೆ ಸಂಜೆ ಕೂಡ ರಸ್ತೆಯಲ್ಲಿ ಬೈಕ್ ನಲ್ಲಿ ತಂದೆ ಜೊತೆ ತೆರಳುತ್ತಿದ್ದ ಮೂರು ವರ್ಷದ ಕಂದಮ್ಮನ ಮೇಲೆ ಮರ ಬಿದ್ದಿದೆ. ಪರಿಣಾಮ ಮಗು ಮೃತಟ್ಟಿದ್ದು, ತಂದೆಗೆ ಗಂಭೀರ ಗಾಯವಾಗಿದೆ. ಇನ್ನು ಮೃತ ಮಗುವಿನ ಮಾವ ಘಟನೆ ವಿವರ ಬಿಚ್ಚಿಟ್ಟಿದ್ದಾರೆ.

ಬೆಂಗಳೂರು, (ಮಾರ್ಚ್ 23): ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದ ಪರಿಣಾಮ ರಕ್ಷಾ ಎಂಬ ಮೂರು ವರ್ಷದ ಹೆಣ್ಣು ಸಾವನ್ನಪ್ಪಿರುವ ಘಟನೆ ನಿನ್ನೆ (ಮಾರ್ಚ್ 22) ಬೆಂಗಳೂರಿನ ರಾತ್ರಿ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೀವನಹಳ್ಳಿಯಲ್ಲಿ ನಡೆದಿದೆ. ಮೂರು ವರ್ಷದ ರಕ್ಷಾ ತನ್ನ ತಂದೆ ಸತ್ಯ ಜೊತೆಗೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಗಾಳಿ ಮಳೆಗೆ ರಸ್ತೆ ಬದಿ ಮರ ಬಿದ್ದಿದೆ. ಪರಿಣಾಮ ಬೈಕ್ ನಲ್ಲಿ ಮುಂಭಾಗದಲ್ಲಿ ಕುಳಿತ್ತಿದ್ದ ರಕ್ಷಾ ತಲೆ ಮೇಲೆಯೇ ಮರದ ತುಂಡು ಬಿದ್ದು ತೀವ್ರ ರಕ್ತಸ್ರಾವವಾಗಿ ಕೊನೆಯುಸಿರೆಳೆದಿದ್ದಾಳೆ. ಕಮ್ಮನಹಳ್ಳಿ ಬಳಿಯ ಕುಳ್ಳಪ್ಪ ಸರ್ಕಲ್ ನಿವಾಸಿಗಳಾದ ಶಕ್ತಿ ಮತ್ತು ಸತ್ಯ ದಂಪತಿಯ 3ವರ್ಷದ ಮಗು ರಕ್ಷಾ ಪ್ರಾಣಕಳೆದುಕೊಂಡ ಬಾಲಕಿ.
ತಂದೆ ಜೊತೆಗೆ ಮಾವ ಮುರುಳಿ ಮನೆಗೆ ಬೈಕ್ ನಲ್ಲಿ ಬಂದಿದ್ದ ಮಗು ವಾಪಸ್ ಮನೆಗೆ ಹೊಗ್ತಿದ್ದಾಗ ಜೀವನಹಳ್ಳಿ ರಸ್ತೆಯಲ್ಲಿದ್ದ ಹೊಂಗೆ ಮರ ಬುಡಸಮೇತ ಬೈಕ್ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ರಕ್ಷಾಗೆ ತಲೆಗೆ ಗಂಭೀರ ಗಾಯಗಳಾಗಿ, ತೀವ್ರ ರಕ್ತ ಸ್ರಾವವಾಗಿದೆ. ಕೂಡಲೇ ರಕ್ಷಾಳನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಬಳಿಕ ಬೌರಿಂಗ್ ಆಸ್ಪತ್ರೆಗೆ ಕರೆದುಕೊಂಡು ಹೋಗಿಲಾಗಿದೆ. ಅದ್ರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆ ಅಬ್ಬರ: ಕೆರೆಯಂತಾದ ರಸ್ತೆಗಳು, ಹಲವೆಡೆ ಸಂಚಾರ ಅಸ್ತವ್ಯಸ್ತ
ಇನ್ನೂ ಬೌರಿಂಗ್ ಆಸ್ಪತ್ರೆಯ ಬಳಿ ಮಗುವನ್ನ ಕಳೆದು ಕೊಂಡ ತಂದೆ ತಾಯಿಯ ಆಕ್ರಂದನ ಮುಗಿಲು ಮುಟ್ಡಿದೆ. ಇನ್ನು ಆಸ್ಪತ್ರೆಗೆ ಬಿಬಿಎಂಪಿ ಪೂರ್ವವಲಯದ ಜಂಟಿ ಆಯುಕ್ತೆ ಸರೋಜಾದೇವಿ, ಬಿಬಿಎಂಪಿ ಅರಣ್ಯ ಘಟಕದ ಮುಖ್ಯಸ್ಥರಾರ ಸ್ವಾಮಿ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿದರು. ಇನ್ನು ಈ ಬಗ್ಗೆ ಪುಲಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿದೆ.
ಇನ್ನು ಈ ಬಗ್ಗೆ ಮೃತ ರಕ್ಷಳಾ ಮಾವ ವಿಜಯ್ ಪ್ರತಿಕ್ರಿಯಿಸಿ, ರಾತ್ರಿ 8.30 ರ ಸುಮಾರಿಗೆ ಮರ ಬಿದ್ದ ವಿಷಯ ತಿಳಿತು. ಆಸ್ಪತ್ರೆಯಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಮಗು ಉಳಿಯಲಿಲ್ಲ. ತಲೆಗೆ ಏಟು ಬಿದ್ದಿದ್ದರಿಂದ ಮಗು ರಕ್ತಸ್ರಾವ ಆಗಿ ಮೃತಪಟ್ಟಿದೆ. ಮಗು ತಂದೆಗೂ ಬೆನ್ನುಮೂಳೆ ಮುರಿದಿದೆ ಅಂತಿದ್ದಾರೆ. ಬಿಬಿಎಂಪಿಯವರು ಮರಗಳನ್ನ ತೆರವು ಮಾಡಬೇಕು. ಮಳೆ ಬಂದಾಗ ಪದೇ ಪದೇ ಇಂತ ಘಟನೆಗಳು ನಡೆಯುತ್ತಲೇ ಇವೆ. ರಾತ್ರಿ ಬಂದು ಪರಿಹಾರ ಕೊಡುತ್ತೇವೆ ಎಂದಿದ್ದಾರೆ ಎಂದರು.
Published On - 10:39 am, Sun, 23 March 25