ಇನ್ಮುಂದೆ ಮನೆ ಕಟ್ಟಬೇಕಾದ್ರೆ ಬೇಸ್ಮೆಂಟ್ ಮಾಡಬಾರದು: ಈ ಬಗ್ಗೆ ಪ್ರತ್ಯೇಕ ಕಾನೂನು ತರುತ್ತೇವೆ ಎಂದ ಡಿಕೆಶಿ
ಬೆಂಗಳೂರಿನಲ್ಲಿ ಕಳೆದ 2 ದಿನಗಳಿಂದ ವರುಣನ ಅಬ್ಬರ ಮುಂದುವರಿದಿದ್ದು, ನಗರದ ಹಲವು ಏರಿಯಾಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಎಲ್ಲೊಂದರಲ್ಲಿ ಮಳೆ ನೀರು ನುಗ್ಗಿ ಭಾರೀ ಅವಾಂತರಗಳೇ ಸೃಷ್ಟಿಯಾಗಿವೆ. ಬೆಂಗಳೂರು ರಸ್ತೆಗಳು ನದಿಯಂತೆ ಭೋರ್ಗರೆದರೆ, ಫ್ಲೈಓವರ್ಗಳು ಜಲಪಾತದಂತೆ ಧುಮ್ಮಿಕ್ಕುತ್ತಿವೆ. ಇನ್ನು ಅಂಡರ್ಪಾಸ್ಗಳು ತುಂಬಿದ ಬಾವಿಯಂತಾಗಿವೆ. ಇನ್ನು ಮನೆ ಅಂಗಳ ಕೆರೆಯಂತಾಗಿವೆ. ಹೀಗೆ ನಾನಾ ಅವಾಂತರ ಸೃಷ್ಟಿಸಿದ್ದರಿಂದ ಇದೀಗ ಬೇಸ್ಮೆಂಟ್ ಬಗ್ಗೆ ಹೊಸ ಕಾನೂನು ತರಲು ಡಿಕೆ ಶಿವಕುಮಾರ್ ಮುಂದಾಗಿದ್ದಾರೆ.

ಬೆಂಗಳೂರು, (ಮೇ 20): ನಗರದ ಬಿಟಿಎಂ ಲೇಔಟ್ ಮಧುವನ ಅಪಾರ್ಟ್ಮೆಂಟ್ನಲ್ಲಿ ತುಂಬಿದ್ದ ಮಳೆ(Bengaluru Rains) ನೀರು ಹೊರಹಾಕುವ ವೇಳೆ ವಿದ್ಯುತ್ ಶಾಕ್ನಿಂದ ಇಬ್ಬರು ಸಾವನ್ನಪ್ಪಿದ್ದು, ಇದೀಗ ಮೃತರ ಕುಟುಂಬಕ್ಕೆ ಬೆಂಗಳೂರು ಉಸ್ತುವಾರಿ ಸಚಿವ ಡಿಕೆ ಶಿವಕುಮಾರ್ (DK Shivakumar) ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಬೆಂಗಳೂರಿನ ಹಲವೆಡೆ ಕೆರೆಯ ಅಕ್ಕಪಕ್ಕದಲ್ಲಿ ಮನೆ ಕಟ್ಟಿದ್ದಾರೆ. ಕೆರೆ ಪಕ್ಕದಲ್ಲಿ ಮನೆ ನಿರ್ಮಿಸಿರುವುದರಿಂದ ಸಮಸ್ಯೆಯಾಗುತ್ತಿದೆ. ಮುಂದೆ ಇಂತಹ ಘಟನೆ ಆಗದಂತೆ ಹೊಸ ಕಾನೂನು ತರುತ್ತೇವೆ. ಇನ್ಮುಂದೆ ಮನೆ ಕಟ್ಟಬೇಕಾದರೆ ಬೇಸ್ಮೆಂಟ್ (basement) ಮಾಡಬಾರದು. ಬೇಸ್ಮೆಂಟ್ ಬಗ್ಗೆ ಹೊಸ ಕಾನೂನು ತರುತ್ತೇವೆ ಎಂದಿದ್ದಾರೆ.
ಬೇಸ್ಮೆಂಟ್ನಿಂದ ಸಾಕಷ್ಟು ಅನಾಹುತವಾಗುತ್ತಿದೆ. ಹೀಗಾಗಿ ಬೇಸ್ಮೆಂಟ್ ಬಗ್ಗೆ ಪ್ರತ್ಯೇಕ ಕಾನೂನು ತರುತ್ತೇವೆ. ಇನ್ಮುಂದೆ ಮನೆ ಕಟ್ಟಬೇಕಾದರೆ ಬೇಸ್ಮೆಂಟ್ ಮಾಡಬಾರದು. ಇನ್ಮುಂದೆ ಗ್ರೌಂಡ್ಫ್ಲೋರ್ನಲ್ಲೇ ಪಾರ್ಕಿಂಗ್ ಇರಬೇಕು. ಬೇಸ್ಮೆಂಟ್ ಬಗ್ಗೆ ಹೊಸ ಕಾನೂನು ತರುತ್ತೇವೆ. ಬೇಸ್ಮೆಂಟ್ನಲ್ಲಿ ಪಾರ್ಕಿಂಗ್ ಮಾಡುವಂತಿಲ್ಲ, ಕಟ್ಟುವಂತಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರಿನ 200 ಪ್ರದೇಶಗಳಿಗೆ ಪ್ರವಾಹ ಭೀತಿ: ತಿಂಗಳ ಹಿಂದೆಯೇ ಎಚ್ಚರಿಕೆ ನೀಡಿದ್ದ ವಿಪತ್ತು ನಿರ್ವಹಣಾ ಇಲಾಖೆ
ಕೆರೆಗಳ ಹತ್ತಿರ ಹಾಗೂ ತಗ್ಗು ಪ್ರದೇಶಗಳಲ್ಲಿ ಅಂಡರ್ ಗ್ರೌಮಡ್ ನಿರ್ಮಾಣ ಮಾಡಿ ವಾಹನ ನಿಲ್ದಾಣಕ್ಕೆ ಅವಕಾಶ ನೀಡದಂತೆ ಭವಿಷ್ಯದಲ್ಲಿ ಕಾನೂನು ತರಲಾಗುವುದು. ಅಂಡರ್ ಗ್ರೌಂಡ್ ಹೊರತುಪಡಿಸಿ ನೆಲ ಮಹಡಿಯಲ್ಲಿ ವಾಹನಗಳನ್ನು ನಿಲ್ಲಿಸುವ ರೀತಿ ಯೋಜನೆ ರೂಪಿಸುವ ಆಲೋಚನೆ ಇದೆ. ಅದರ ಮೇಲೆ ಜನರು ವಾಸಕ್ಕೆ ಮನೆ ನಿರ್ಮಾಣ ಮಾಡಿಕೊಳ್ಳಲಿ. ಮಳೆ ಕಡಿಮೆಯಾದ ನಂತರ ಇದರ ಬಗ್ಗೆ ಕಾರ್ಯಸೂಚಿ ಬಿಡುಗಡೆ ಮಾಡಲಾಗುವುದು ಎಂದರು.
ವಾಹನಗಳ ಪಾರ್ಕಿಂಗ್ ಸಲುವಾಗಿ ಮನೆ ಅಥವಾ ಆಫೀಸ್, ಅಪಾರ್ಟ್ಮೆಂಟ್ನಲ್ಲಿ ಬೇಸ್ಮೆಂಟ್ ನಿರ್ಮಿಸಲಾಗುತ್ತಿದೆ. ಆದ್ರೆ, ಇದೀಗ ಮಳೆಯಿಂದಾಗಿ ನೀರು ಮೊದಲು ಬೇಸ್ಮೆಂಟ್ಗಳಿಗೆ ನುಗ್ಗಿ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಹೀಗಾಗಿ ಇನ್ಮುಂದೆ ಬೇಸ್ಮೆಂಟ್ ಮಾಡುವಂತಿಲ್ಲ. ವಾಹನ ಪಾರ್ಕಿಂಗ್ ಗ್ರೌಂಡ್ಫ್ಲೋರ್ನಲ್ಲೇ ಮಾಡಿಕೊಳ್ಳಬೇಕು ಎನ್ನುವುದು ಡಿಕೆ ಶಿವಕುಮಾರ್ ಅವರ ಮಾತು.







