Bengaluru Stampede: ಕೆಎಸ್ಸಿಎ ಅಧಿಕಾರಿಗಳಿಗೆ ಬಿಗ್ ರಿಲೀಫ್ ನೀಡಿದ ಹೈಕೋರ್ಟ್
Bengaluru RCB Victory Celebrations Stampede: ಆರ್ಸಿಬಿ ಗೆಲುವನ್ನು ಸಂಭ್ರಮಿಸಲು ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಜಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಕ್ರೀಡಾಂಗಣಕ್ಕೆ ಲಕ್ಷಾಂತರ ಅಭಿಮಾನಿಗಳು ಆಗಮಿಸಿದ್ದರು. ಈ ವೇಳ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಟ್ಟಿದ್ದರು. ಈ ಸಂಬಂಧ ಕೆಎಸ್ಸಿಎ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದ ಕೆಎಸ್ಸಿಎ ಅಧಿಕಾರಿಗಳಿಗೆ ಹೈಕೋರ್ಟ್ ಷರತ್ತುಬದ್ಧ ರಿಲಿಫ್ ನೀಡಿದೆ.

ಬೆಂಗಳೂರು, ಜೂನ್ 06: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy stadium) ಹೊರಗೆ ನಡೆದ ಕಾಲ್ತುತಿಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸಂಭ್ರಮಾಚರಣೆಗೆ ಸೂತಕ ಅಂಟಿಕೊಂಡಿದೆ. ಈ ಪ್ರಕರಣ ಸಂಬಂಧ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ರದ್ದು ಕೋರಿ ಕೆಎಸ್ಸಿಎ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಷರತ್ತುಬದ್ಧ ರಿಲೀಫ್ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಕೆಎಸ್ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ. ಆದರೆ, ವಿಚಾರಣೆಗೆ ಸಹಕರಿಸುವಂತೆ ಅರ್ಜಿದಾರರಿಗೆ ಷರತ್ತು ವಿಧಿಸಿದೆ. ಈ ಮೂಲಕ ಕೆಎಸ್ಸಿಎ ಅಧ್ಯಕ್ಷ ರಘುರಾಮ್ ಭಟ್, ಕಾರ್ಯದರ್ಶಿ ಎ.ಶಂಕರ್, ಖಜಾಂಚಿ ಇ.ಎಸ್.ಜೈರಾಮ್ ಅವರಿಗೆ ರಿಲೀಫ್ ಸಿಕ್ಕಿದೆ.
ಹೈಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದವೇನು?
ಅರ್ಜಿದಾರರ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ಮತ್ತು ಕೆಎಸ್ಸಿಎ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ: ವಾದ ಮಂಡಿಸಿದರು. ಸರ್ಕಾರದ ಪರವಾಗಿ ಎಜಿ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿದರು.
ಎಜಿ ಶಶಿಕಿರಣ್ ಶೆಟ್ಟಿ: ತೀರ್ಪು ಕೊಡುವುದು ಬೇಡ, ವಾದ ಮಾಡಲಿ.
ಜಡ್ಜ್: ಮೂರು ಎಫ್ಐಆರ್ಗಳಲ್ಲೂ ಅದೇ ಆರೋಪಿಗಳಿದ್ದಾರಾ?
ಎಜಿ ಶಶಿಕಿರಣ್ ಶೆಟ್ಟಿ: ಹೌದು
ಜಡ್ಜ್: ಮ್ಯಾಜಿಸ್ಟೀರಿಯಲ್, ನ್ಯಾಯಾಂಗ ತನಿಖೆ, ಸಿಐಡಿ ತನಿಖೆಯೂ ನಡೆಯುತ್ತಿದೆಯೇ?
ಎಜಿ ಶಶಿಕಿರಣ್ ಶೆಟ್ಟಿ: ಪ್ರತ್ಯೇಕ ವಿಚಾರಣೆ ನಡೆಯುತ್ತಿದೆ. 24 ಗಂಟೆ ಒಳಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಜಡ್ಜ್: ನಾನು ತನಿಖೆಗೆ ತಡೆ ಕೊಡುವುದಿಲ್ಲ. ಯಾವ ರಕ್ಷಣೆ ಅಗತ್ಯವಿದೆ ನೋಡೋಣ. ನಾಲ್ವರನ್ನು ಬಂಧಿಸಿದ್ದಾರೆಂದು ವಕೀಲರ ವಾದ
ಹಿರಿಯ ವಕೀಲ ಶ್ಯಾಮ್ ಸುಂದರ್: ನಾಲ್ವರನ್ನು ಬಂಧಿಸಿದ್ದಾರೆ. ಮುಂಜಾನೆ 4.30ಕ್ಕೆ ನಿಖಿಲ್ ಅವರನ್ನು ಬಂಧಿಸಿದ್ದಾರೆ.
ಎಜಿ ಶಶಿಕಿರಣ್ ಶೆಟ್ಟಿ: ಅಗತ್ಯವಿದ್ದವರನ್ನು ಮಾತ್ರ ಬಂಧಿಸಲಾಗುವುದು.
ಜಡ್ಜ್: ವಿನಾಕಾರಣ ಬಂಧಿಸಿ ಆರೋಪಕ್ಕೆ ಸಾಕ್ಷಿ ಸಿಗದಿದ್ದರೆ ಸಮಸ್ಯೆ ಅಲ್ಲವೆ?
ಕೆಎಸ್ಸಿಎ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ: ಬಂಧಿಸುವಂತೆ ಸಿಎಂ ಸಿದ್ದರಾಮಯ್ಯ ಖುದ್ದು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಆರ್ಸಿಬಿ, ಕೆಎಸ್ಸಿಎ ಅಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಪೀಠಕ್ಕೆ ಹೇಳಿದರು.
ಇದನ್ನೂ ಓದಿ: ಎಚ್ಡಿಕೆ ಗಂಭೀರ ಆರೋಪ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಗೋವಿಂದ!
ಹಿರಿಯ ವಕೀಲ ಶ್ಯಾಮ್ ಸುಂದರ್: ಕೆಎಸ್ಸಿಎ ವಿರುದ್ಧ ಹೊಸ ಹೊಸ ಎಫ್ಐಆರ್ ದಾಖಲಿಸುತ್ತಿದ್ದಾರೆ. ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ರಕ್ಷಣೆ ಬೇಕು. ನ್ಯಾ. ಮೈಕಲ್ ಕುನ್ಹಾ ಅವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಮ್ಯಾಜಿಸ್ಟೀರಿಯಲ್ ತನಿಖೆ ಕೂಡಾ ನಡೆಯುತ್ತಿದೆ. ಇದಲ್ಲದೇ ಎಫ್ಐಆರ್ ದಾಖಲಿಸಿ ಸಿಐಡಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.ಈ ವೇಳೆ, ಅರ್ಜಿದಾರರ ವಾದಕ್ಕೆ ಎಜಿ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಕೆಎಸ್ಸಿಎ ಅಧಿಕಾರಿಗಳ ವಿರುದ್ಧ ಬಲವಂತದ ಕ್ರಮ ಬೇಡ ಎಂದು ಮಧ್ಯಂತರ ಆದೇಶ ನೀಡಿದೆ.
ಕೆಎಸ್ಸಿಎ, ಆರ್ಸಿಬಿ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಾಗಿದ್ದವು. ಸಿಎಂ ಸಿದ್ದರಾಮಯ್ಯ ಅವರು ಬಂಧಿಸಿ ಅಂತ ಸೂಚನೆ ನೀಡಿದ ಮೇಲೆ ತನಿಖೆ ಮಾಡಲಾಗುತ್ತಿದೆ. ಕೆಎಸ್ಸಿಎ ಪದಾಧಿಕಾರಿಗಳ ವಿರುದ್ಧ ಆರೋಪ ಮಾಡಲು ಬರಲ್ಲ. ಗೇಟ್ಗಳಲ್ಲಿ ನಡೆದ ದುರ್ಘಟನೆಗೆ ಕೆಎಸ್ಸಿಎ ವಿರುದ್ಧ ಕ್ರಮ ತೆಗೆದುಕೊಳ್ಳಲು ಬರಲ್ಲ ಎಂದು ವಾದ ಮಂಡಿಸಿದ್ವಿ ಎಂದು ವಕೀಲ ಶ್ಯಾಮ್ ಸುಂದರ್ ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Fri, 6 June 25



