ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಗೆ ಮುಕ್ತಿ: 5 ಬೃಹತ್ ಫ್ಲೈಓವರ್ಗಳ ನಿರ್ಮಾಣಕ್ಕೆ ಜಿಬಿಎ ಅಧಿಕೃತ ಟೆಂಡರ್ ಆಹ್ವಾನ
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಮಿನರ್ವಾ ಸರ್ಕಲ್, ಯಲಹಂಕ ಮತ್ತು ಓಲ್ಡ್ ಮದ್ರಾಸ್ ರಸ್ತೆ ಸೇರಿದಂತೆ ನಗರದ 5 ಪ್ರಮುಖ ಜಂಕ್ಷನ್ಗಳಲ್ಲಿ ಹೊಸ ಫ್ಲೈಓವರ್ಗಳ ನಿರ್ಮಾಣಕ್ಕಾಗಿ ಅಧಿಕೃತ ಟೆಂಡರ್ ಆಹ್ವಾನಿಸಿದೆ. ಟೆಂಡರ್ ಪ್ರಕ್ರಿಯೆ ಬೆನ್ನಲ್ಲೇ ಹಂತ ಹಂತವಾಗಿ ಕಾಮಗಾರಿ ಆರಂಭವಾಗಲಿದೆ.

ಬೆಂಗಳೂರು, ಮೇ 28: ಸಿಲಿಕಾನ್ ಸಿಟಿ ಬೆಂಗಳೂರಿನ ದೈನಂದಿನ ಟ್ರಾಫಿಕ್ ಕಿರಿಕಿರಿ ಕಡಿಮೆ ಮಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕೊನೆಗೂ ಅಧಿಕೃತವಾಗಿ ಅಖಾಡಕ್ಕಿಳಿದಿದೆ. ಹಲವು ವರ್ಷಗಳಿಂದ ಕಾಗದದ ಮೇಲೆಯೇ ನೆನಗುದಿಗೆ ಬಿದ್ದಿದ್ದ ಪ್ರಮುಖ ಮೇಲ್ಸೇತುವೆ ಯೋಜನೆಗಳಿಗೆ ಜಿಬಿಎ ಈಗ ಮರುಜೀವ ನೀಡಿದೆ. ನಗರದ ಅತ್ಯಂತ ದಟ್ಟಣೆಯ ಮತ್ತು ಪ್ರಮುಖ 5 ಭಾಗಗಳಲ್ಲಿ ಹೊಸ ಫ್ಲೈಓವರ್ಗಳನ್ನು ನಿರ್ಮಾಣ ಮಾಡಲು ಪ್ರಾಧಿಕಾರವು ಭರ್ಜರಿ ತಯಾರಿ ನಡೆಸಿದ್ದು, ಇದಕ್ಕಾಗಿ ಅಧಿಕೃತವಾಗಿ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಿದೆ.
ಮುಖ್ಯಾಂಶಗಳು
- ಬೆಂಗಳೂರಿನ ಪ್ರಮುಖ ಜಂಕ್ಷನ್ಗಳಲ್ಲಿ ಸಿಗ್ನಲ್ ಮುಕ್ತ ಸಂಚಾರ ಕಲ್ಪಿಸುವ ಉದ್ದೇಶ.
- ಜಿಬಿಎಯಿಂದ 5 ಹೊಸ ಫ್ಲೈಓವರ್ಗಳಿಗೆ ಟೆಂಡರ್ ಆಹ್ವಾನ.
- ಮಿನರ್ವ ಸರ್ಕಲ್, ಕೆ.ಆರ್. ಮಾರ್ಕೆಟ್, ಓಲ್ಡ್ ಮದ್ರಾಸ್ ರಸ್ತೆ ಹಾಗೂ ಯಲಹಂಕ ಮಾರ್ಗಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್.
ಯಾವೆಲ್ಲಾ ಭಾಗಗಳಲ್ಲಿ ಹೊಸ ಫ್ಲೈಓವರ್?
- ನಗರದ ಹೃದಯಭಾಗ ಮತ್ತು ಹೊರವಲಯಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖ 5 ಮಾರ್ಗಗಳನ್ನು ಗುರುತಿಸಿ ಈ ಬೃಹತ್ ಯೋಜನೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ.
- ಮಿನರ್ವ ಸರ್ಕಲ್ನಿಂದ ಹಡ್ಸನ್ ಸರ್ಕಲ್ವರೆಗೆ: ಕೇಂದ್ರ ವಾಣಿಜ್ಯ ವಲಯದ ಸಂಚಾರ ದಟ್ಟಣೆ ಕಡಿಮೆ ಮಾಡಲು ಬೃಹತ್ ಮೇಲ್ಸೇತುವೆ.
- ಕೆ.ಆರ್. ಮಾರ್ಕೆಟ್ ಟು ಟೌನ್ ಹಾಲ್ ಲೂಪ್: ಪ್ರಸ್ತುತ ಇರುವ ಕೆ.ಆರ್. ಮಾರ್ಕೆಟ್ ಫ್ಲೈಓವರ್ಗೆ ಟೌನ್ ಹಾಲ್ ಭಾಗದಿಂದ ಹೊಸದಾಗಿ ಲೂಪ್ ಸಂಪರ್ಕ ಕಲ್ಪಿಸುವುದು.
- ಓಲ್ಡ್ ಮದ್ರಾಸ್ ರಸ್ತೆಯಿಂದ ಎಲೆಕ್ಟ್ರಾನಿಕ್ ಸಿಟಿ: ಐಟಿ ಉದ್ಯೋಗಿಗಳಿಗೆ ಸುಗಮ ಸಂಚಾರ ಕಲ್ಪಿಸಲು ಈ ಪ್ರಮುಖ ಸಂಪರ್ಕ ಮೇಲ್ಸೇತುವೆ ನೆರವಾಗಲಿದೆ.
- ಶೋಲೆ ಸರ್ಕಲ್ನಿಂದ ಸೈಂಟ್ ಜಾನ್ಸ್ ಆಸ್ಪತ್ರೆ: ನಿರಂತರ ವಾಹನ ದಟ್ಟಣೆ ಇರುವ ಈ ಜಂಕ್ಷನ್ನಲ್ಲಿ ಸಿಗ್ನಲ್ ಮುಕ್ತ ರಸ್ತೆ ನಿರ್ಮಾಣ.
ಯಲಹಂಕ ಪೊಲೀಸ್ ಸ್ಟೇಷನ್ನಿಂದ ಕೋಗಿಲು ಕ್ರಾಸ್ವರೆಗೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಯಲಹಂಕ ಭಾಗದ ಟ್ರಾಫಿಕ್ ಸುಧಾರಣೆಗೆ ಈ ಮೇಲ್ಸೇತುವೆ ಸಹಕಾರಿಯಾಗಲಿದೆ.
ಸಾರ್ವಜನಿಕ ವಲಯದಿಂದ ವ್ಯಕ್ತವಾದ ಮೆಚ್ಚುಗೆ
ಈ ಐದು ಬೃಹತ್ ಯೋಜನೆಗಳು ಜಾರಿಗೆ ಬಂದರೆ ನಗರದ ಪ್ರಮುಖ ಜಂಕ್ಷನ್ಗಳಲ್ಲಿ ವಾಹನ ಸವಾರರು ಗಂಟೆಗಟ್ಟಲೆ ಕಾಯುವುದು ತಪ್ಪಲಿದೆ ಎಂದು ಜಿಬಿಎ ಮುಖ್ಯಸ್ಥರಾದ ಮಹೇಶ್ವರ್ ರಾವ್ ತಿಳಿಸಿದ್ದಾರೆ. ವಿಶೇಷವಾಗಿ ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾರುಕಟ್ಟೆ ಮತ್ತು ಯಲಹಂಕ ಭಾಗದಲ್ಲಿ ಇನ್ಮುಂದೆ ಸಂಚಾರ ಸುಗಮವಾಗಲಿದೆ.
ಇದನ್ನೂ ಓದಿ: ಬೆಂಗ್ಳೂರಿನಲ್ಲಿ 3BHK ಅಪಾರ್ಟ್ಮೆಂಟ್ನ ತಿಂಗಳ ಬಾಡಿಗೆ 1.1 ಲಕ್ಷ ರೂ, ವೈರಲ್ ಆಯ್ತು ಪೋಸ್ಟ್
ಟೆಂಡರ್ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಹಂತ ಹಂತವಾಗಿ ಕಾಮಗಾರಿಗಳು ಆರಂಭವಾಗಲಿದ್ದು, ಜಿಬಿಎ ತೆಗೆದುಕೊಂಡಿರುವ ಈ ತ್ವರಿತ ನಿರ್ಧಾರಕ್ಕೆ ಬೆಂಗಳೂರಿಗರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಯೋಜನೆಗಳಿಗೆ ಈಗ ಟೆಂಡರ್ ಭಾಗ್ಯ ಸಿಕ್ಕಿದ್ದು, ಕಾಮಗಾರಿಗಳು ಕಾಲಮಿತಿಯಲ್ಲಿ ಮುಗಿದು ಟ್ರಾಫಿಕ್ ಕಷ್ಟದಿಂದ ಮುಕ್ತಿ ಸಿಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





