ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!
ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ 4 ಚೀತಾಗಳು ಆಗಮಿಸಿದ್ದು, ಸಚಿವ ಈಶ್ವರ ಖಂಡ್ರೆ ಅವುಗಳನ್ನು ಸ್ವಾಗತಿಸಿದ್ದಾರೆ. ಬನ್ನೇರುಘಟ್ಟದಲ್ಲಿ ಅವುಗಳ ಸಂರಕ್ಷಣೆಗೆ ಖಂಡ್ರೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಹಿಂದಿನ ವೈಫಲ್ಯಗಳಿಂದ ಪಾಠ ಕಲಿತು, ಕ್ವಾರಂಟೈನ್, ವಿಶೇಷ ಆಹಾರ ಮತ್ತು ಆರೋಗ್ಯ ತಪಾಸಣೆ ಸೇರಿದಂತೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದ್ದಾರೆ.

ಬೆಂಗಳೂರು, ಏಪ್ರಿಲ್ 18: ಕರ್ನಾಟಕ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಧ್ಯರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ನಾಲ್ಕು ಚೀತಾಗಳನ್ನು (Cheetah) ಸ್ವಾಗತಿಸಿದ್ದಾರೆ. ಕಲ್ಬುರ್ಗಿ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ಸಚಿವರು, ನೇರವಾಗಿ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗಿರುವ ಈ ವಿದೇಶಿ ಅತಿಥಿಗಳನ್ನು ಬರಮಾಡಿಕೊಂಡಿದ್ದಾರೆ.
ಚೀತಾಗಳಿಗೆ ಹಾನಿಯಾಗದಂತೆ ವಿಶೇಷ ಕಾಳಜಿ
ಚೀತಾಗಳಿಗೆ ಹವಾಮಾನ ಮತ್ತು ಪರಿಸರ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ವಿಶೇಷ ಕಾಳಜಿ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವ ಖಂಡ್ರೆ, ಕ್ವಾರಂಟೈನ್ ವ್ಯವಸ್ಥೆ, 30 ದಿನಗಳ ನಿಯೋಜಿತ ಆಹಾರ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪ್ರಾಣಿಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಜೀವ ವೈವಿಧ್ಯ ಉದ್ಯಾನಕ್ಕೆ ಸಾಗಿಸುವ ವ್ಯವಸ್ಥೆಯನ್ನೂ ಸಚಿವರು ಪರಿಶೀಲಿಸಿದ್ದಾರೆ.
ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಕಾಣಿಸಿಕೊಂಡಿದ್ದ ಚೀತಾಗಳು ಈಗ ಸಂಪೂರ್ಣವಾಗಿ ಅಳಿದು ಹೋಗಿವೆ. ಕನಿಷ್ಠ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ವನ್ಯಜೀವಿಗಳನ್ನು ನೋಡುವ ಅವಕಾಶ ದೊರಕಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಮ್ಮ ಫೆಸ್ಬುಕ್ ಖಾತೆಯಲ್ಲಿ ಸಚಿವರು ಪೋಸ್ಟ್ ಮಾಡಿಕೊಂಡಿದ್ದಾರೆ. ಚೀತಾಗಳ ಸಂರಕ್ಷಣೆ ಮತ್ತು ಸುರಕ್ಷತೆಗೆ ಅತ್ಯಂತ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
‘ಪ್ರಾಜೆಕ್ಟ್ ಚೀತಾ’
ಭಾರತಕ್ಕೆ ಆಫ್ರಿಕನ್ ಚೀತಾಗಳನ್ನು ತರುವುದು ಇದೇ ಮೊದಲಲ್ಲ. 2022ರಲ್ಲಿ ಕೇಂದ್ರ ಸರ್ಕಾರದ ‘ಪ್ರಾಜೆಕ್ಟ್ ಚೀತಾ’ ಅಡಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ 20 ಚೀತಾಗಳನ್ನು ಮಧ್ಯಪ್ರದೇಶದ ಕುನೋ ನ್ಯಾಷನಲ್ ಪಾರ್ಕ್ಗೆ ತರಲಾಗಿತ್ತು. ಆದರೆ, ರೇಡಿಯೋ ಕಾಲರ್ಗಳಿಂದಾದ ಚರ್ಮದ ಸೋಂಕು (Septicemia), ತೀವ್ರ ಉಷ್ಣಾಂಶ ಮತ್ತು ಹವಾಮಾನ ವೈಪರೀತ್ಯ ಹಾಗೂ ಪರಸ್ಪರ ಕಾಳಗಗಳಿಂದಾಗಿ ಮರಿಗಳೂ ಸೇರಿದಂತೆ ಸುಮಾರು 10ಕ್ಕೂ ಹೆಚ್ಚು ಚೀತಾಗಳು ಮೃತಪಟ್ಟಿದ್ದವು. ಈ ಹಿನ್ನೆಲೆಯಲ್ಲಿಯೇ ವೈಫಲ್ಯಗಳಿಂದ ಪಾಠ ಕಲಿತಿರುವ ಕರ್ನಾಟಕ ಅರಣ್ಯ ಇಲಾಖೆ, ಬನ್ನೇರುಘಟ್ಟದಲ್ಲಿ ಚೀತಾಗಳ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




