
ಬೆಂಗಳೂರು, ಸೆಪ್ಟೆಂಬರ್ 17: ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ 4,500 ಎಲೆಕ್ಟ್ರಿಕ್ ಬಸ್ಗಳನ್ನು ಸೇರ್ಪಡೆಗೊಳಿಸಲು ರಾಜ್ಯ ಸಚಿವ ಸಂಪುಟ ಕೊನೆಗೂ ಅನುಮೋದನೆ ನೀಡಿದೆ. ಈ ಹಿಂದೆ ಇವಿ ಬಸ್ಗಳನ್ನು ಪಡೆಯಲು ಹಿಂದೇಟು ಹಾಕಿದ್ದ ಸರ್ಕಾರ ಇದೀಗ ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ, ಈ ಎಲ್ಲಾ ಹೊಸ ಬಸ್ಗಳಿಗೆ ಬಿಎಂಟಿಸಿಯ ನೌಕರರನ್ನೇ ಚಾಲಕರನ್ನಾಗಿ ನಿಯೋಜಿಸಬೇಕು, ಇಲ್ಲವಾದಲ್ಲಿ ಬೃಹತ್ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಎಚ್ಚರಿಕೆ ನೀಡಿದೆ.
ಹೊಸ ಇವಿ ಬಸ್ಗಳಿಗೆ ಖಾಸಗಿ ಚಾಲಕರನ್ನು ನೇಮಕ ಮಾಡಿಕೊಳ್ಳಬಾರದು ಹಾಗೂ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಹುನ್ನಾರವನ್ನು ಕೈಬಿಡಬೇಕು ಎಂದು ಆಗ್ರಹಿಸಿ ಸಾರಿಗೆ ನೌಕರರ ಕೂಟದ ರಾಜ್ಯಾಧ್ಯಕ್ಷ ಆರ್. ಚಂದ್ರಶೇಖರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 18 ತಿಂಗಳಲ್ಲಿ ರಸ್ತೆಗಿಳಿಯಲಿವೆ 4,500 ಪರಿಸರ ಸ್ನೇಹಿ ಇ-ಬಸ್ಗಳು!
ಇವಿ ಬಸ್ಗಳನ್ನು ಖಾಸಗಿ ಕಂಪನಿಗಳು ಸರಿಯಾಗಿ ನಿರ್ವಹಣೆ ಮಾಡದೆ ಹಲವು ಮಾರ್ಗಗಳು ರದ್ದಾಗುತ್ತಿವೆ. ಅಲ್ಲದೆ, ಖಾಸಗಿ ಚಾಲಕರಿಂದ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಹೆಚ್ಚುತ್ತಿದ್ದು, ಸಾರಿಗೆ ಸಂಸ್ಥೆಯ ಘನತೆಗೆ ಧಕ್ಕೆಯಾಗುತ್ತಿದೆ. ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದರ್ಜೆಯ ಸುಧಾರಿತ ವಾಹನಗಳನ್ನು ಓಡಿಸಿ ಅನುಭವವಿರುವ ಸಂಸ್ಥೆಯ ನುರಿತ ಸಿಬ್ಬಂದಿಗೇ ಈ ಬಸ್ಗಳ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಕೇಂದ್ರ ಸರ್ಕಾರವು ಜಿಸಿಸಿ ಮಾದರಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ಬಸ್ ನೀಡುವುದರಿಂದ ಮುಂದಿನ ದಿನಗಳಲ್ಲಿ ಸಾರಿಗೆ ನೌಕರರು ಉದ್ಯೋಗ ಕಳೆದುಕೊಂಡು ಅವರ ಕುಟುಂಬಗಳು ಬೀದಿಗೆ ಬೀಳುವ ಆತಂಕವಿದೆ. ಆದ್ದರಿಂದ ಕೇಂದ್ರ ಸರ್ಕಾರ ನಿಯಮಗಳಲ್ಲಿ ಬದಲಾವಣೆ ತಂದು, ಸಬ್ಸಿಡಿ ಆಧಾರದ ಮೇಲೆ ಬಸ್ಗಳನ್ನು ನೇರವಾಗಿ ಸಾರಿಗೆ ನಿಗಮಗಳಿಗೇ ಒದಗಿಸಬೇಕು ಹಾಗೂ ಸಂಪೂರ್ಣ ನಿರ್ವಹಣೆಯ ಹೊಣೆಯನ್ನು ನಿಗಮವೇ ವಹಿಸಿಕೊಳ್ಳಬೇಕು ಎಂದು ನೌಕರರು ಮನವಿ ಮಾಡಿದ್ದಾರೆ.
ಇನ್ನೊಂದೆಡೆ ಸಾರ್ವಜನಿಕ ಪ್ರಯಾಣಿಕರೂ ಇವಿ ಬಸ್ಗಳ ಸಂಚಾರದ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಎಲೆಕ್ಟ್ರಿಕ್ ಬಸ್ಗಳು ಚಲಿಸುವಾಗ ಸದ್ದು ಬಾರದಿರುವುದರಿಂದ ಪಕ್ಕದಲ್ಲೇ ಬಂದರೂ ತಿಳಿಯುವುದಿಲ್ಲ. ಜೊತೆಗೆ ಖಾಸಗಿ ಚಾಲಕರಿಗೆ ಅಗತ್ಯ ಅನುಭವವಿಲ್ಲದಿರುವುದರಿಂದ ಅಪಘಾತಗಳು ಹೆಚ್ಚುತ್ತಿವೆ. ಹೀಗಾಗಿ ನಗರಕ್ಕೆ ಡೀಸೆಲ್ ಬಸ್ಗಳೇ ಸೂಕ್ತ ಎಂಬ ಅಭಿಪ್ರಾಯಗಳೂ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.
ಇದನ್ನೂ ಓದಿ: ಕೇಂದ್ರದ 4,500 ಎಲೆಕ್ಟ್ರಿಕ್ ಬಸ್ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ
ಒಟ್ಟಿನಲ್ಲಿ 4,500 ಇವಿ ಬಸ್ಗಳ ಸೇರ್ಪಡೆಗೆ ಅನುಮೋದನೆ ದೊರೆತಿದ್ದರೂ, ಚಾಲಕರ ನೇಮಕಾತಿ ವಿಚಾರದಲ್ಲಿ ಸಾರಿಗೆ ನೌಕರರ ಬೇಡಿಕೆಗೆ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.