ಔಟರ್ ರಿಂಗ್ ರಸ್ತೆಯಲ್ಲಿ ಶೀಘ್ರದಲ್ಲೇ ಆದ್ಯತಾ ಪಥ: ಟ್ರಾಫಿಕ್ ಕಿರಿಕಿರಿಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್
ಬೆಂಗಳೂರಿನ ಅತ್ಯಂತ ಬ್ಯುಸಿ ರಸ್ತೆಗಳಲ್ಲಿ ಒಂದಾದ ಹೊರವರ್ತುಲ ರಸ್ತೆಯ ಸಂಚಾರ ದಟ್ಟಣೆಗೆ ಬ್ರೇಕ್ ಹಾಕಲು ಬೆಂಗಳೂರು ಸಂಚಾರ ಪೊಲೀಸ್ ಮತ್ತು ಜಿಬಿಎ ಅಧಿಕಾರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಇದ್ದ ಬಸ್ ಪಥವನ್ನ ಹೊಸ ರೂಪದಲ್ಲಿ ಮತ್ತೆ ಅನುಷ್ಠಾನ ಮಾಡಲು ಮುಂದಾಗಿದ್ದಾರೆ.

ಬೆಂಗಳೂರು, ಮೇ 15: ಬೆಂಗಳೂರಿನ (Bangaluru) ಹೊರವರ್ತುಲ ರಸ್ತೆಯಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಬಸ್ ಪಥವನ್ನ ಹೊಸ ರೂಪದಲ್ಲಿ ಅಂದರೆ ಆದ್ಯತಾ ಪಥವನ್ನಾಗಿ ಮತ್ತೆ ಅನುಷ್ಠಾನ ಮಾಡಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಮೂಲಕ ಐಟಿಬಿಟಿ ಕಂಪನಿಗಳು ಹೆಚ್ಚಾಗಿರುವ ಪ್ರದೇಶದಲ್ಲಿ ಟ್ರಾಫಿಕ್ (traffic) ದಟ್ಟಣೆ ನಿಯಂತ್ರಣ ಮಾಡಲು ಬೆಂಗಳೂರು ಟ್ರಾಫಿಕ್ ಪೊಲೀಸರು ಸಿದ್ಥತೆ ನಡೆಸಿದ್ದಾರೆ.
ಮುಖ್ಯಾಂಶಗಳು
- ಹೊರವರ್ತುಲ ರಸ್ತೆಯಲ್ಲಿ ಹೆಚ್ಚಿದ ವಾಹನ ದಟ್ಟಣೆ
- ಬಿಎಂಟಿಸಿ ಆದ್ಯತಾ ಪಥ ಮರು ಅನುಷ್ಠಾನಕ್ಕೆ ಸಿದ್ಧತೆ
- ಐಟಿ ಕಾರಿಡಾರ್ಗಳಲ್ಲಿ ಸುಗಮ ಸಂಚಾರಕ್ಕೆ ಮಾಸ್ಟರ್ ಪ್ಲಾನ್
ಬೆಂಗಳೂರಿನ ಹೊರವರ್ತುಲ ರಸ್ತೆಯಲ್ಲಿ ಬಿಎಂಟಿಸಿ ಬಸ್ಗಳ ಸಂಚಾರಕ್ಕಾಗಿಯೇ ಬಸ್ ಲೇನ್ಗಳನ್ನ ಪರಿಚಯಿಸಲಾಗಿತ್ತು. ಈ ವೇಳೆ ಬಿಎಂಟಿಸಿ ಬಳಸುವವರ ಸಂಖ್ಯೆ ಕೂಡ ಈ ಭಾಗದಲ್ಲಿ ಹೆಚ್ಚಾಗಿತ್ತು. ಆದರೆ ಕಾರಣಾಂತರಗಳಿಂದ ಅದು ಸ್ಥಗಿತವಾಗಿತ್ತು. ಈಗ ಮತ್ತೆ ಬಸ್ ಪಥವನ್ನ ಆದ್ಯತಾ ಪಥವನ್ನಾಗಿ ಹೊಸ ರೂಪದಲ್ಲಿ ಪರಿಚಯಿಸಲು ಬೆಂಗಳೂರು ಟ್ರಾಫಿಕ್ ಪೊಲೀಸರು ಮತ್ತು ಜಿಬಿಎ ಅಧಿಕಾರಿಗಳು ಮುಂದಾಗಿದ್ದಾರೆ.
ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಳ
ಇಬ್ಬಲೂರು, ಬೆಳ್ಳಂದೂರು, ಮಾರತಹಳ್ಳಿ ಭಾಗದ ಔಟರ್ ರಿಂಗ್ ರಸ್ತೆಯ ಸಾಮರ್ಥ್ಯಕ್ಕಿಂತ 2.5 ಪಟ್ಟು ವಾಹನಗಳು ಹೆಚ್ಚಾಗಿದೆ. ಹೀಗಾಗಿ ಬಿಎಂಟಿಸಿ ಬಸ್ ಸೇರಿ ಸಮೂಹ ಸಾರಿಗೆ ವ್ಯವಸ್ಥೆಯ ವಾಹನಗಳಿಗೆ ಆದ್ಯತಾ ಪಥವನ್ನ ನಿರ್ಮಿಸುವ ಆಲೋಚನೆ ಇದೆ. ಈ ಕುರಿತಾಗಿ ಬಿಎಂಟಿಸಿ, ಜಿಬಿಎ ಅಧಿಕಾರಿಗಳ ಜೊತೆ ಟ್ರಾಫಿಕ್ ಪೊಲೀಸರು ಈಗಾಗಲೇ ಸಭೆ ಕೂಡ ಮಾಡಿದ್ದಾರೆ. ಇನ್ನು ಆದ್ಯತಾ ಪಥ ಮಾಡುವುದರ ಬಗ್ಗೆ ಪ್ರಯಾಣಿಕರು ಸಹಮತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ಒಟ್ಟಾರೆಯಾಗಿ, ಈ ಆದ್ಯತಾ ಪಥವು ಆದಷ್ಟು ಬೇಗ ನಿರ್ಮಾಣಗೊಂಡು, ಜನರು ಖಾಸಗಿ ವಾಹನಗಳ ವ್ಯಾಮೋಹ ಬಿಟ್ಟು ಬಿಎಂಟಿಸಿ ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸುವಂತಾಗಲಿ ಮತ್ತು ಹೊರವರ್ತುಲ ರಸ್ತೆಯ ಸಂಚಾರ ಸುಗಮವಾಗಲಿ ಎನ್ನುವುದೇ ಸಾರ್ವಜನಿಕರ ಆಶಯವಾಗಿದೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.





