ಪ್ರಯಾಣಿಕರ ಗಮನಕ್ಕೆ: ಮೇ 17ರಂದು ಈ ಮಾರ್ಗದ ನಮ್ಮ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಈ ದಿನದಂದು ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಈ ಮಾರ್ಗದ ನಡುವೆ ಮೆಟ್ರೋ ಸಂಚಾರ ಇರುವುದಿಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿದೆ. ಹಾಗಾದರೆ ಯಾವ ದಿನ ಮತ್ತು ಯಾವ ಮಾರ್ಗದಲ್ಲಿ ಮೆಟ್ರೋ ಸಂಚಾರ ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಮೇ 15: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ (Purple Line) ಪ್ರಯಾಣಿಸುವ ಸಾರ್ವಜನಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಪ್ರಮುಖ ಪ್ರಕಟಣೆಯೊಂದನ್ನು ಹೊರಡಿಸಿದೆ. ಅಗತ್ಯ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆ ಮೇ 17ರಂದು ಅಂದರೆ ಭಾನುವಾರ ನೇರಳೆ ಮಾರ್ಗದ ಕೆಲವು ನಿಲ್ದಾಣಗಳ ನಡುವೆ ಬೆಳಗ್ಗೆ 2 ಗಂಟೆಗಳ ಕಾಲ ಮೆಟ್ರೋ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ.
ಮುಖ್ಯಾಂಶಗಳು
- ಮೈಸೂರು ರಸ್ತೆಯಲ್ಲಿ ಪ್ರಯಾಣ ಮಾಡುವವರಿಗೆ ಸಂಡೇ ಶಾಕ್
- 17ರಂದು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ
- ಅಗತ್ಯ ನಿರ್ವಹಣೆ ಕಾಮಗಾರಿ ಹಿನ್ನೆಲೆ ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ
ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್) ಮತ್ತು ಸರ್. ಎಂ. ವಿಶ್ವೇಶ್ವರಯ್ಯ ಮೆಟ್ರೋ ನಿಲ್ದಾಣಗಳ (ಸೆಂಟ್ರಲ್ ಕಾಲೇಜ್) ನಡುವೆ ಅತ್ಯಗತ್ಯ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಕಾರಣದಿಂದಾಗಿ, ಭಾನುವಾರ ಬೆಳಗ್ಗೆ 07 ಗಂಟೆಯಿಂದ 09 ಗಂಟೆಯವರೆಗೆ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರ ಇರುವುದಿಲ್ಲ.
ನಮ್ಮ ಮೆಟ್ರೋ ಟ್ವೀಟ್
Temporary Suspension of Metro Services on Purple Line for 2 hours on 17.05.2026
ದಿನಾಂಕ 17.05.2026 ರಂದು ನೇರಳೆ ಮಾರ್ಗ ಮೆಟ್ರೋ ಸೇವೆ 2 ರಡು ಗಂಟೆ ಅವಧಿಗೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ@srivasrbmrccoi1 @Secretary_MoHUA @mlkhattar @officeofmlk pic.twitter.com/EypWaXblqy
— ನಮ್ಮ ಮೆಟ್ರೋ (@OfficialBMRCL) May 15, 2026
ಎಲ್ಲೆಲ್ಲಿ ಮೆಟ್ರೋ ಲಭ್ಯವಿರಲಿದೆ?
ಸಾರ್ವಜನಿಕರ ಅನುಕೂಲಕ್ಕಾಗಿ ಬೆಳಗ್ಗೆ 07 ಗಂಟೆಯಿಂದ 09 ಗಂಟೆ ಅವಧಿಯಲ್ಲಿ ಕೆಳಕಂಡ ಮಾರ್ಗಗಳಲ್ಲಿ ಎಂದಿನಂತೆ ಮೆಟ್ರೋ ರೈಲುಗಳು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.
- ಚಲ್ಲಘಟ್ಟ – ವಿಜಯನಗರ
- ಎಂ.ಜಿ. ರಸ್ತೆ – ವೈಟ್ ಫೀಲ್ಡ್, ಕಾಡುಗೋಡಿ
- ಮಾದಾವರ – ಸಿಲ್ಕ್ ಇನ್ಸ್ಟಿಟ್ಯೂಟ್
- ಆರ್.ವಿ. ರಸ್ತೆ – ಬೊಮ್ಮಸಂದ್ರ
ಇದನ್ನೂ ಓದಿ: ಬೆಂಗಳೂರಿನ ಕನಸಿನ ಯೋಜನೆಗೆ ಸಿಕ್ತು ವೇಗ: 153 ಮೆಟ್ರೋ ಕೋಚ್ ಖರೀದಿಗೆ ಐಸಿಎಫ್ ಜೊತೆ ಒಪ್ಪಂದ
ಭಾನುವಾರ ಬೆಳಗ್ಗೆ 09 ಗಂಟೆಯ ನಂತರ ಹೊಸಹಳ್ಳಿ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಹಾಗೂ ಸಂಪೂರ್ಣ ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆಗಳು ಎಂದಿನಂತೆ ಪುನಃ ಆರಂಭಗೊಳ್ಳಲಿವೆ. ಪ್ರಯಾಣಿಕರು ಈ ತಾತ್ಕಾಲಿಕ ಸೇವಾ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಪ್ರಯಾಣವನ್ನು ಮುಂಚಿತವಾಗಿಯೇ ಯೋಜಿಸಿಕೊಳ್ಳುವಂತೆ ಬಿಎಂಆರ್ಸಿಎಲ್ ಮನವಿ ಮಾಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Fri, 15 May 26





