ಯುದ್ಧದ ಎಫೆಕ್ಟ್: ಬೆಂಗಳೂರಿನ ಪಿಜಿಗಳಿಗೂ ಸಂಕಷ್ಟ; ಊಟದ ಮೆನುನೇ ಚೇಂಜ್
ಕಳೆದ 11 ದಿನಗಳಿಂದ ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಎಫೆಕ್ಟ್, ಭಾರತಕ್ಕೆ ತಟ್ಟಿದೆ. ದೇಶಾದ್ಯಂತ ಗ್ಯಾಸ್ ಸಮಸ್ಯೆ ಉಂಟಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ಮಧ್ಯೆ ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ. ಹೀಗಾಗಿ ಪಿಜಿಗಳಲ್ಲಿ ಊಟದ ಮೆನು ಚೇಂಜ್ ಮಾಡಲಾಗಿದೆ.

ಬೆಂಗಳೂರು, ಮಾರ್ಚ್ 10: ಮಧ್ಯಪ್ರಾಚ್ಯದಲ್ಲಿನ ಯುದ್ಧ (iran israel war) ಎಷ್ಟರಮಟ್ಟಿಗೆ ಎಫೆಕ್ಟ್ ತಟ್ಟಿದೆ ಅಂದರೆ ಸದ್ಯ ದೇಶಾದ್ಯಂತ ಗ್ಯಾಸ್ ಸಿಲಿಂಡರ್ಗೆ ಹಾಹಾಕರ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್ಗೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಇತ್ತ ಬೆಂಗಳೂರಿನ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇಡೀ ಹೋಟೆಲ್ ಉದ್ಯಮ ಸೇರಿದಂತೆ ಇದೀಗ (PG) ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ.
ಪಿಜಿ ಮಾಲೀಕರಿಗೂ ತಟ್ಟಿದ ಯುದ್ಧದ ಎಫೆಕ್ಟ್
ಸಿಲಿಕಾನ್ ಸಿಟಿ ಬೆಂಗಳೂರಿಗೆ ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ಹೀಗೆ ಆಗಮಿಸುವವರು ಹೆಚ್ಚಾಗಿ ಪಿಜಿಗಳನ್ನೇ ಅವಲಂಬಿಸುತ್ತಾರೆ. ಆದರೆ ಪ್ರಸ್ತುತ ನಗರದಲ್ಲಿ 15 ಸಾವಿರ ಪಿಜಿಗಳಲ್ಲಿದ್ದು, 10 ಲಕ್ಷಕ್ಕೂ ಹೆಚ್ಚರು ಜನರು ವಾಸಿಸುತ್ತಿದ್ದಾರೆ. ಇನ್ನು ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಪಿಜಿ ಮಾಲೀಕರು ಅಡುಗೆ ಮಾಡುವುದಕ್ಕೂ ಚಿಂತಿಸುವಂತಾಗಿದೆ.
ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿಕೆ ನೀಡಿದ್ದು, ಪಿಜಿಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ. ಸದ್ಯ ಇನ್ನೊಂದು ವಾರ ಇರುವ ಸಿಲಿಂಡರ್ನಲ್ಲೇ ಮ್ಯಾನೇಜ್ ಮಾಡುತ್ತೇವೆ. ಮುಂದೆ ಹೇಗೆ ಎಂಬ ಭೀತಿ ಎದುರಾಗಿದೆ ಎಂದು ಹೇಳಿದ್ದಾರೆ.
ಊಟದ ಮೆನು ಕೂಡ ಚೇಂಜ್
ಇದರಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ನೋಡಬೇಕಾಗುತ್ತೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ನಮ್ಮ ನೆರವಿಗೆ ಮುಂದಾಗಬೇಕಿದೆ ಎಂದು ಪಿ.ಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.