ನೀಟ್ ಅಭ್ಯರ್ಥಿ ತಡವಾಗಿ ಬಂದಿದ್ದಕ್ಕೆ ಟ್ರಾಫಿಕ್ ಕಾರಣವಲ್ಲ: ಬೆಂಗಳೂರು ಪೊಲೀಸರಿಂದ ಫ್ಯಾಕ್ಟ್ ಚೆಕ್
NEET Rexam News: ಬೆಂಗಳೂರಿನಲ್ಲಿ ನೀಟ್ ಮರುಪರೀಕ್ಷೆಗೆ ವಿದ್ಯಾರ್ಥಿ 3 ನಿಮಿಷ ತಡವಾಗಿ ಬಂದಿದ್ದಕ್ಕೆ ಪ್ರವೇಶ ನಿರಾಕರಿಸಿದ ವಿಡಿಯೋ ವೈರಲ್ ಆಗಿತ್ತು. ಬಿಕೆ ಹರಿಪ್ರಸಾದ್ ಅಧಿಕಾರ ಸ್ವೀಕಾರ ಕಾರ್ಯಕ್ರಮದದಿಂದ ಟ್ರಾಫಿಕ್ ಜಾಮ್ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಟ್ರಾಫಿಕ್ ಕಾರಣದಿಂದಲೇ ಪರೀಕ್ಷಗೆ ತಡವಾಯ್ತು ಎಂದು ಜೆಡಿಎಸ್ ಹಾಗೂ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಆದರೆ, ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಸಂಚಾರಿ ಪೊಲೀಸರು, ವಿದ್ಯಾರ್ಥಿಗಳು ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ತಪ್ಪು ಮಾರ್ಗವನ್ನು ಆಯ್ಕೆ ಮಾಡಿದ್ದೇ ವಿಳಂಬಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು, (ಜೂನ್ 23): ಬೆಂಗಳೂರಿನಲ್ಲಿ ವಿದ್ಯಾರ್ಥಿ ನೀಟ್ (NEET) ಮರು ಪರೀಕ್ಷೆ ಬರೆಯಲು ಕೇಂದ್ರಕ್ಕೆ ತಡವಾಗಿ ತಲುಪಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದ್ದ ವದಂತಿಗಳಿಗೆ ಬೆಂಗಳೂರು ನಗರ ಪೊಲೀಸ್ (Bengaluru City Police) ಹಾಗೂ ಬೆಂಗಳೂರು ಸಂಚಾರ ಪೊಲೀಸ್ (BTP) ಜಂಟಿಯಾಗಿ ಸ್ಪಷ್ಟನೆ ನೀಡಿವೆ. ಬಿಕೆ ಹರಿಪ್ರಸಾದ್ (BK Hariprasad) ಕಾರ್ಯಕ್ರಮದಿಂದ ಉಂಟಾದ ಟ್ರಾಫಿಕ್ ಜಾಮ್ನಿಂದ ತಡವಾಗಿದೆ ಎಂಬ ಆರೋಪವನ್ನು ಪೊಲೀಸರು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳು, ಅಭ್ಯರ್ಥಿ ಮತ್ತು ಪೋಷಕರೊಂದಿಗಿನ ಸಂಭಾಷಣೆ ಹಾಗೂ ಮಾರ್ಗ ವಿಶ್ಲೇಷಣೆಯ ಆಧಾರದ ಮೇಲೆ ಪೊಲೀಸರು ಅಧಿಕೃತ ಫ್ಯಾಕ್ಟ್ ಚೆಕ್ (Fact Check) ವರದಿಯನ್ನು ಬಿಡುಗಡೆ ಮಾಡಿದ್ದಾರೆ.
ಫ್ಯಾಕ್ಟ್ ಚೆಕ್ನಲ್ಲೇನಿದೆ?
ಎಲ್ಲಾ ಆರೋಪಗಳಿಗೆ ಬೆಂಗಳೂರು ಸಂಚಾರಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಿಂದ ಹೊರಗುಳಿಯಲು ಟ್ರಾಫಿಕ್ ಕಾರಣ ಅಲ್ಲ. ಸಿಸಿಟಿವಿ ಪರಿಶೀಲನೆ ವೇಳೆ ಪರೀಕ್ಷೆಗೆ ಹೊರಡುವ ಸಮಯದಲ್ಲಿ ಟ್ರಾಫಿಕ್ ಸಾಮನ್ಯವಾಗಿತ್ತು. ಪೊಲೀಸ್ ಸಿಬ್ಬಂದಿ ಅಗತ್ಯವಿರುವ ಕಡೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮನೆಯಿಂದ ತಡವಾಗಿ ಹೊರಟಿದ್ದು ಮತ್ತು ಪರೀಕ್ಷಾ ಕೇಂದ್ರಕ್ಕೆ ಹೊರಡಲು ಆಯ್ಕೆ ಮಾಡಿಕೊಂಡ ಮಾರ್ಗದಿಂದ ವಿಳಂಬವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ನೀಟ್ ಪರೀಕ್ಷೆಯಿಂದ ಮತ್ತೆ ವಂಚಿತರಾದ ಹಲವು ವಿದ್ಯಾರ್ಥಿಗಳು: ಒಬ್ಬೊಬ್ಬರದು ಒಂದೊಂದು ಕಥೆ
ಸಿಸಿಟಿವಿಯ ದೃಶ್ಯಗಳ ಪ್ರಕಾರ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ 1:30ಕ್ಕೆ ಕಟ್ ಆಫ್ ಟೈಮ್ ಇತ್ತು. ಆದ್ರೆ, ಈ ವಿದ್ಯಾರ್ಥಿನಿ ತನ್ನ ಆರ್ ಟಿ ನಗರದ ಮನೆಯಿಂದ 12:57ಕ್ಕೆ ಹೊರಟಿದ್ದು, ಪರೀಕ್ಷಾ ಕೇಂದ್ರದ ಬಳಿ 1:33ಕ್ಕೆ ಆಗಮಿಸಿದ್ದಾರೆ ಎನ್ನುವುದು ಪೊಲೀಸರ ಫ್ಯಾಕ್ಟ್ಚೆಕ್ ಮೂಲಕ ತಿಳಿದುಬಂದಿದೆ.
ಸಿಸಿಟಿವಿ ದೃಶ್ಯಗಳ ಪ್ರಕಾರ, ಪರೀಕ್ಷೆಯಿಂದ ವಂಚಿತ ವಿದ್ಯಾರ್ಥಿ, 12:57 PMಕ್ಕೆ ಮನೆಯಿಂದ ಹೊರಟಿದ್ದಾರೆ. 1.30PMಕ್ಕೆ ಪರೀಕ್ಷಾ ಕೇಂದ್ರಕ್ಕೆ ತಲುಪಬೇಕಿತ್ತು. ಆದ್ರೆ ವಿದ್ಯಾರ್ಥಿ 1:33 PMಕ್ಕೆ ಪರೀಕ್ಷಾಕೇಂದ್ರ ತಲುಪಿದ್ದಾರೆ. ಆರ್ಟಿ ನಗರದಿಂದ ಪರೀಕ್ಷಾ ಕೇಂದ್ರಕ್ಕೆ ಹೋಗಲು ಶಾರ್ಟ್ಕಟ್ ಇದ್ರೂ, ವಿದ್ಯಾರ್ಥಿ ಲಾಂಗ್ರೂಟ್ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
CCTV analysis and route verification have established that the NEET candidate reached the examination centre after the stipulated cutoff time. Traffic conditions were found to be normal, and traffic police personnel facilitated movement wherever required. The delay was primarily… pic.twitter.com/1bxQ7jgiKM
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) June 23, 2026
ಇನ್ನು ಈ ಬಗ್ಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ಮೂವರು ಮಾತ್ರ ನೀಟ್ ಬರೆದಿಲ್ಲ, ಆರ್.ಟಿ.ನಗರದಿಂದ ಬಂದವರು ಮಧ್ಯಾಹ್ನ 12.57ಕ್ಕೆ ಬಂದಿದ್ದಾರೆ. ಒಬ್ಬರು ಮಾಗಡಿಯಿಂದ ಬಂದವರು ಹಳೇ ಹಾಲ್ ಟಿಕೆಟ್ ತಂದಿದ್ರು. ಇದರಲ್ಲಿ ರಾಜ್ಯ ಸರ್ಕಾರದ ತಪ್ಪೇನಿದೆ? ಯಾವಾಗ ಮನೆ ಬಿಟ್ಟರು, ಯಾವಾಗ ಬಂದ್ರು ಸಿಸಿಟಿವಿ ಫೂಟೇಜ್ ಇದೆ. ಹಳೆಯ ಹಾಲ್ಟಿಕೆಟ್ ತಂದರೆ ಅದಕ್ಕೆ ಹರಿಪ್ರಸಾದ್ ಕಾರಣನಾ? ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಳಿ ದಾಖಲೆ ಇದ್ರೆ ಕೊಡಲಿ ಎಂದು ಸವಾಲು ಹಾಕಿದರು.
ರಾಜಕೀಯ ನಾಯಕರ ವಾಕ್ಸಮರ
ನೀಟ್ ಮರು ಪರೀಕ್ಷೆ ನೀಟ್ ಆಗಿ ಮುಗಿದಿದೆ. ಆದ್ರೆ, ಬೆಂಗಳೂರಿನಲ್ಲಿ ತಡವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದವರಿಗೆ ಪ್ರವೇಶ ಸಿಕ್ಕಿಲ್ಲ ಅನ್ನೋದನ್ನ ಹೊರತುಪಡಿಸಿದ್ರೆ. ಯಾವುದೇ ಅಡೆತಡೆ, ಲೋಪದೋಷವಿಲ್ಲದೇ ಪರೀಕ್ಷೆ ಸುಗಮವಾಗಿ ಮುಗಿದೆ. ಆದ್ರೆ ರಾಜ್ಯ ರಾಜಕಾರಣದಲ್ಲಿ ಬಿಕೆ ಹರಿಪ್ರಸಾದ್ ಅವರ ಪದಗ್ರಹಣದ ಸುತ್ತ ವಿದ್ಯಾರ್ಥಿಗಳಿಗೆ ಸಮಸ್ಯೆ ಅನ್ನೋ ಸಮರ ಶುರುವಾಗಿದೆ.
ಬೆಂಗಳೂರಿನ ಪರೀಕ್ಷಾ ಕೇಂದ್ರಗಳಿಗೆ ಕೆಲ ವಿದ್ಯಾರ್ಥಿಗಳು ತಡವಾಗಿ ಬಂದು ಪರೀಕ್ಷೆಯಿಂದ ವಂಚಿತರಾಗಿ ಗೋಳಾಡಿದ್ದಾರೆ.ಅಷ್ಟಕ್ಕೂ ಯಾಕೆ ಲೇಟ್ ಆಯ್ತು ಅಂತಾ ವಿದ್ಯಾರ್ಥಿಗಳ ಪೋಷಕರನ್ನ ಕೇಳಿದಾಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ ಹರಿಪ್ರಸಾದ್ ಪದಗ್ರಹಣ ಕಾರ್ಯಕ್ರಮ ಇತ್ತು. ಇದರಿಂದ ಮೇಕ್ರಿ ಸರ್ಕಲ್ ಸುತ್ತ ಮುತ್ತ ಫುಲ್ ಜಾಮ್ ಆಗಿತ್ತು. ಹೀಗಾಗಿ ಲೇಟ್ ಆಗಿ ಬಂದ್ವಿ ಅಂತಾ ಪೋಷಕರು ಹೇಳಿದ್ರು.
ಪರೀಕ್ಷೆ ಇದೆ ಅಂತಾ ಮೊದಲೇ ಗೊತ್ತಿತ್ತು. ಬೇರೆ ದಿನ ಪದಗ್ರಹಣ ಕಾರ್ಯಕ್ರಮ ಇಟ್ಟುಕೊಳ್ಳಬಹುದಿತ್ತಲ್ವಾ ಎಂದು ಪ್ರಶ್ನಿಸಿದ್ರು. ಇದಕ್ಕೆ ಬಿಜೆಪಿ ನಾಯಕರು ಸಹ ಧ್ವನಿಗೂಡಿಸಿದ್ದು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಸಾಲು ಸಾಲು ಆರೋಪ ಕೇಳಿಬಂದ ಬೆನ್ನಲ್ಲೇ ಬೆಂಗಳೂರು ಟ್ರಾಫಿಕ್ ಪೊಲೀಸರು, ವಿದ್ಯಾರ್ಥಿನಿ ತಡವಾಗಿ ಬಂದಿದ್ಯಾಕೆ ಎನ್ನುವುದನ್ನು ಪತ್ತೆ ಮಾಡಿದ್ದು, ತಡವಾಗಿದ್ದಕ್ಕೆ ಟ್ರಾಫಿಕ್ ಕಾರಣವನ್ನು ಎನ್ನುವುದನ್ನು ಫ್ಯಾಕ್ಟ್ಚೆಕ್ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:41 pm, Tue, 23 June 26




