
ಬೆಂಗಳೂರು, (ಸೆಪ್ಟೆಂಬರ್ 02): ಗ್ರೇಟರ್ ಬೆಂಗಳೂರು ಅಥಾರಿಟಿ (Greater Bengaluru Authority ) ಜಾರಿ ಮಾಡಿ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ನಾಳೆಯಿಂದ ಬಿಬಿಎಂಪಿ ಬದಲು ಜಿಬಿಎ ಅಸ್ತಿತ್ವಕ್ಕೆ ಬರಲಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಐದು ಹೊಸ ಪಾಲಿಕೆಗಳನ್ನು ಮಾಡಲಾಗಿದೆ. ಪೂರ್ವ ಪಾಲಿಕೆ, ಪಶ್ಚಿಮ ಪಾಲಿಕೆ, ಉತ್ತರ ಪಾಲಿಕೆ ಹಾಗೂ ದಕ್ಷಿಣ ಪಾಲಿಕೆ ಹಾಗೂ ಕೇಂದ್ರ ಪಾಲಿಕೆ ಎಂಬ ಐದು ಹೊಸ ನಗರ ಪಾಲಿಕೆಗಳು ಆಸ್ತಿತ್ವಕ್ಕೆ ಬರಲಿವೆ. ಇದರೊಂದಿಗೆ ಇನ್ಮುಂದೆ ಬಿಬಿಎಂಪಿಯ ಬದಲು ಗ್ರೇಟರ್ ಬೆಂಗಳೂರು ಅಥಾರಿಟಿ ರಾಜಧಾನಿಯ ಆಡಳಿತ ನೋಡಿಕೊಳ್ಳಲಿದೆ. ಸಿಎಂ ಸಿದ್ದರಾಮಯ್ಯ ಗ್ರೇಟರ್ ಬೆಂಗಳೂರು ಅಥಾರಿಟಿಯ ಅಧ್ಯಕ್ಷರಾಗಿದ್ದರೆ, ಡಿಸಿಎಂ ಡಿಕೆ ಶಿವಕುಮಾರ್ ಉಪಾಧ್ಯಕ್ಷರಾಗಿದ್ದಾರೆ.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬೆಂಗಳೂರಿನ ಮೂವರು ಸಂಸದರು, ಬೆಂಗಳೂರಿನ ಶಾಸಕರು ಸೇರಿ 73 ಪದನಿಮಿತ್ತ ಸದಸ್ಯರ ನೇಮಕ ಮಾಡಿರೋ ಸರ್ಕಾರ, ಸದ್ಯ ಇರೋ 198 ವಾರ್ಡ್ ಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆ. ಐದು ಭಾಗಗಳನ್ನ ಮಾಡಿ ಅಧಿಕಾರ ಹಂಚಿಕೆಯಾಗಲಿದ್ದು ಪ್ರತಿ ಪಾಲಿಕೆಗೆ 2 ವಲಯಗಳಂತೆ 10 ವಲಯಗಳ ರಚನೆಯಾಗಲಿದೆ. ಒಂದೇ ವಿಧಾನ ಸಭಾಕ್ಷೇತ್ರದ ವಾರ್ಡ್ಗಳು ಬೇರೆ ಬೇರೆ ಪಾಲಿಕೆ ವ್ಯಾಪ್ತಿಗೆ ಬರಲಿವೆ.
1.ಬೆಂಗಳೂರು ಕೇಂದ್ರ ನಗರ ಪಾಲಿಕೆ: ಸಿವಿರಾಮನ್ನಗರ, ಚಾಮರಾಜಪೇಟೆ, ಚಿಕ್ಕಪೇಟೆ, ಗಾಂಧಿನಗರ, ಶಾಂತಿನಗರ, ಶಿವಾಜಿನಗರ ಪುಲಕೇಶಿನಗರ ಜೊತೆಗೆ ಕೆಲವು ನಗರ ವಾರ್ಡ್ಗಳು ಬರಲಿವೆ.
ಬೆಂಗಳೂರು ಕೇಂದ್ರ ನಗರ ಪಾಲಿಕೆಯ ವಲಯ-1: ಎಂಜಿ ರಸ್ತೆಯಲ್ಲಿರುವ ಹಾಲಿ ಬಿಬಿಎಂಪಿ ಪೂರ್ವವಲಯ ಕಚೇರಿ ಹಾಗೂ ವಲಯ-2ಕ್ಕೆ ಕೇಂದ್ರ ಕಚೇರಿ ಆವರಣದ ಅನೆಕ್ಸ್ -3 ಕಟ್ಟಡ ನಿಗದಿ ಪಡಿಸಲಾಗಿದೆ.
2.ಬೆಂಗಳೂರು ಪೂರ್ವ ನಗರ ಪಾಲಿಕೆ: ಕೆಆರ್ ಪುರ, ಮಹದೇವಪುರ (ಬೆಳ್ಳಂದೂರು ವಾರ್ಡ್ ಹೊರತುಪಡಿಸಿ)ವಿಧಾನಸಭಾಕ್ಷೇತ್ರಗಳು ಬರಲಿವೆ.
ಪೂರ್ವನಗರಪಾಲಿಕೆಯ ವಲಯ-1: ಹಾಲಿ ಮಹದೇವಪುರ ವಲಯ ಕಚೇರಿ.
ಪೂರ್ವನಗರಪಾಲಿಕೆಯ ವಲಯ -2: ಹಾಲಿ ಕೆ.ಆರ್.ಪುರ ಮುಖ್ಯ ಎಂಜಿನಿಯರ್ ಕಚೇರಿಯನ್ನು ನಿಗದಿ ಪಡಿಸಲಾಗಿದೆ.
ಬಸವನಗುಡಿ, ದಾಸರಹಳ್ಳಿ (ಚಿಕ್ಕಸಂದ್ರ, ರಾಜಗೋಪಾಲನಗರ, ಹೆಗ್ಗನಹಳ್ಳಿ ವಾರ್ಡ್ಗಳು), ಗೋವಿಂದರಾಜನಗರ, ಮಹಾಲಕ್ಷ್ಮೀ ಲೇಔಟ್, ಮಲ್ಲೇಶ್ವರ, ಪದ್ಮನಾಭನಗರದ (ಹೊಸಕೆರೆಹಳ್ಳಿ, ಗಣೇಶ ಮಂದಿರ, ಕರಿಸಂದ್ರ, ಯಡಿಯೂರು ವಾರ್ಡ್ಗಳು), ರಾಜಾಜಿನಗರ, ರಾಜರಾಜೇಶ್ವರಿ ನಗರ – (ಎಚ್ ಎಂಟಿ, ಲಕ್ಷ್ಮೀದೇವಿನಗರ, ಲಗೆರೆ, ಕೊಟ್ಟಿಗೆಪಾಳ್ಯ, ಜ್ಞಾನಭಾರತಿ, ರಾಜರಾಜೇಶ್ವರಿನಗರ ವಾರ್ಡ್ಕೆಲಭಾಗ), ವಿಜಯನಗರ, ಯಶವಂತ ಪುರ – (ಹೆಮ್ಮಿಗೆಪುರ ವಾರ್ಡ್ ಹೊರತುಪಡಿಸಿ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಪಶ್ಚಿಮ ವಲಯಕ್ಕೆ ಸೇರ್ಪಡೆಯಾಗಲಿವೆ.
ಪಶ್ಚಿಮ ನಗರ ಪಾಲಿಕೆಯ ವಲಯ1: ಹಾಲಿ ಆರ್ ಆರ್ನಗರ ವಲಯ ಆಯುಕ್ತರ ಕಚೇರಿ
ಪಶ್ಚಿಮ ನಗರ ಪಾಲಿಕೆಯ ವಲಯ 2: ವಲಯ-2ಕ್ಕೆ ಹಾಲಿ ಚಂದ್ರಾಲೇಔಟ್ನ ಪಾಲಿಕೆ ಸೌಧ ಕಚೇರಿ ಕಟ್ಟಡ ನಿಗದಿ ಪಡಿಸಲಾಗಿದೆ.
ಬ್ಯಾಟರಾಯನಪುರ, ದಾಸರಹಳ್ಳಿ (ಶೆಟ್ಟಿಹಳ್ಳಿ, ಮಲ್ಲಸಂದ್ರ, ಬಗಲಗುಂಟೆ, ಟಿ.ದಾಸರಹಳ್ಳಿ ವಾರ್ಡ್ಗಳು), ಹೆಬ್ಬಾಳ, ರಾಜರಾಜೇಶ್ವರಿನಗರ (ಜಾಲಹಳ್ಳಿ, ಜೆಪಿ ಪಾರ್ಕ್, ಯಶವಂತಪುರ ವಾರ್ಡ್ಗಳು), ಸರ್ವಜ್ಞನಗರ, ಯಲಹಂಕ, ಪುಲಕೇಶಿನಗರ(ಕುಶಾಲನಗರ ವಾರ್ಡ್ ಹೊರತು ಪಡಿಸಿ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಲಿವೆ.
ಉತ್ತರ ನಗರ ಪಾಲಿಕೆಯ ವಲಯ-1: ಹಾಲಿ ಯಲಹಂಕ ವಲಯ ಆಯುಕ್ತರ ಕಚೇರಿ
ಉತ್ತರ ನಗರ ಪಾಲಿಕೆಯ ವಲಯ-2: ದಾಸರಹಳ್ಳಿ ವಲಯ ಆಯುಕ್ತರ ಕಚೇರಿ ಕಟ್ಟಡ ನಿಗದಿ ಪಡಿಸಲಾಗಿದೆ.
ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಜಯನಗರ, ಮಹದೇವಪುರ (ಬೆಳ್ಳಂದೂರುವಾರ್ಡ್ ಮಾತ್ರ), ಪದ್ಮನಾಭನಗರ (ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಚಿಕ್ಕಲ್ಲಸಂದ್ರ ವಾರ್ಡ್ಗಳು ಮಾತ್ರ), ರಾಜ ರಾಜೇಶ್ವರಿನಗರ (ರಾಜರಾಜೇಶ್ವರಿನಗರ ವಾರ್ಡ್ ಮಾತ್ರ), ಯಶವಂತಪುರ (ಹೆಮ್ಮಿಗೆಪುರ ವಾರ್ಡ್ ಮಾತ್ರ) ವಿಧಾನಸಭಾ ಕ್ಷೇತ್ರಗಳು ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಗೆ ಬರಲಿವೆ.
ದಕ್ಷಿಣ ನಗರ ಪಾಲಿಕೆಯ ವಲಯ-1: ದಕ್ಷಿಣ ವಲಯ ಆಯುಕ್ತರ ಕಚೇರಿ
ದಕ್ಷಿಣ ನಗರ ಪಾಲಿಕೆಯ ವಲಯ-2: ಬೊಮ್ಮನಹಳ್ಳಿಯ ವಲಯ ಕಚೇರಿ ನಿಗದಿಯಾಗಿದೆ.
ಬೆಂಗಳೂರಿನ ಬಿಬಿಎಂಪಿಯಲ್ಲಿದ್ದ ಅಧಿಕಾರಿಗಳನ್ನ ಕೂಡ ಮರುನಿಯೋಜನೆ ಮಾಡಿರೋ ಸರ್ಕಾರ, ಗ್ರೇಟರ್ ಬೆಂಗಳೂರು ಅಥಾರಿಟಿಯ ಐದು ಭಾಗಗಳಿಗೆ ಅಧಿಕಾರಿಗಳನ್ನ ನೇಮಕ ಮಾಡಿದೆ. ಸದ್ಯ ಹಿಂದೆ ವಿಪಕ್ಷ ನಾಯಕರು, ಸಾರ್ವಜನಿಕರ ಆಕ್ಷೇಪದ ಮಧ್ಯೆಯೂ ಗ್ರೇಟರ್ ಬೆಂಗಳೂರು ಅಥಾರಿಟಿಯನ್ನ ಜಾರಿಗೆ ತಂದಿರೋ ಸರ್ಕಾರ ಹಂತ ಹಂತವಾಗಿ ಬಿಬಿಎಂಪಿಯ ವೆಬ್ ಸೈಟ್ಗಳು, ದಾಖಲೆಗಳನ್ನ ಕೂಡ ಜಿಬಿಎಗೆ ಬದಲಾಯಿಸಲು ತಯಾರಿ ನಡೆಸಿದ್ದು, ಸದ್ಯ ರಾಜಧಾನಿಯ ಸಾಲು ಸಾಲು ಸಮಸ್ಯೆಗಳಿಗೆ ಜಿಬಿಎ ವರವಾಗುತ್ತ, ಶಾಪವಾಗುತ್ತ ಎನ್ನುವುದನ್ನು ಕಾದುನೋಡಬೇಕಿದೆ.
Published On - 5:46 pm, Tue, 2 September 25