AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್​ರಿಂದ ಕಾಂಗ್ರೆಸ್​ನ ಸಿದ್ದರಾಮಯ್ಯ ಭೇಟಿ: ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ನಡೆ

ಸುಮಾರು 15 ನಿಮಿಷಗಳ ಕಾಲ ಇಬ್ಬರೂ ಮಾತುಕತೆ ನಡೆಸಿದರು. ರಾಜ್ಯಸಭೆಗೆ ನಾಳೆ (ಜೂನ್ 10) ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ.

ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್​ರಿಂದ ಕಾಂಗ್ರೆಸ್​ನ ಸಿದ್ದರಾಮಯ್ಯ ಭೇಟಿ: ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ ನಡೆ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್
TV9 Web
| Edited By: |

Updated on:Jun 09, 2022 | 9:13 PM

Share

ಬೆಂಗಳೂರು: ತುಮಕೂರು ಜಿಲ್ಲೆ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಗುರುವಾರ ನಗರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಸುಮಾರು 15 ನಿಮಿಷಗಳ ಕಾಲ ಇಬ್ಬರೂ ಮಾತುಕತೆ ನಡೆಸಿದರು. ರಾಜ್ಯಸಭೆಗೆ ನಾಳೆ (ಜೂನ್ 10) ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದೆ. ಭೇಟಿಯ ಕುರಿತು ಗುಬ್ಬಿ ಶಾಸಕ ಶ್ರೀನಿವಾಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಿದ್ದರಾಮಯ್ಯ ಮಾತ್ರ, ‘ಇದೊಂದು ಸೌಜನ್ಯದ ಭೇಟಿ. ಕರ್ಟಸಿ ಕಾಲ್’ ಎಂದಷ್ಟೇ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

ಶ್ರೀನಿವಾಸ್-ಸಿದ್ದರಾಮಯ್ಯ ಭೇಟಿ ಕುರಿತು ಪ್ರತಿಕ್ರಿಯಿಸಿದ ಜೆಡಿಎಸ್​ನ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ನಾನೂ ಸಹ ಈ ಹಿಂದೆ ಹಲವು ಬಾರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಅವರೊಂದಿಗೆ ಮಾತನಾಡಿದ ಮಾತ್ರಕ್ಕೆ ನಾವು ಕಾಂಗ್ರೆಸ್​ನಲ್ಲಿದ್ದೇವೆ ಎಂದು ಅರ್ಥವೇ ಎಂದು ಪ್ರಶ್ನಿಸಿದರು. ನಿನ್ನೆ ಲೆಹರ್ ಸಿಂಗ್ ಜೊತೆ ನಾನು ಕಾಫಿ ಕುಡಿದೆವು. ಹಾಗಂತ ಅವ್ರು ಜೊತೆ ನಾವು ಇದ್ದೀವಿ ಅಂತ ಹೇಳಲು ಆಗುವುದೇ ಎಂದು ಕೇಳಿದರು.

ಗುಬ್ಬಿ ಶ್ರೀನಿವಾಸ್ ಆತ್ಮಸಾಕ್ಷಿಯಾಗಿ ಜೆಡಿಎಸ್​ಗೆ ಮತ ಹಾಕುತ್ತೇನೆ ಎಂದಿದ್ದಾರೆ. ಅವರಿನ್ನೂ ಜೆಡಿಎಸ್ ಪಕ್ಷ ತೊರೆದಿಲ್ಲ. 32 ಶಾಸಕರು, ಬಂಡಾಯ ಶಾಸಕರು ನಮಗೆ ಮತ ಹಾಕ್ತಾರೆ. ಜೆಡಿಎಸ್ ಬಳಿ ಕಾಂಗ್ರೆಸ್​ಗಿಂತಲೂ ಹೆಚ್ಚಿನ ಮತಗಳಿವೆ ಎಂದು ಹೇಳಿದರು.

ಯಾರೂ ಸಂಪರ್ಕಿಸಿಲ್ಲ: ಶ್ರೀನಿವಾಸ್

ಗುಬ್ಬಿ ಕ್ಷೇತ್ರದ ರಾಜಕೀಯ ಬೆಳವಣಿಗೆಗಳೂ ಸೇರಿದಂತೆ ಹಲವು ಕಾರಣಗಳಿಗೆ ಎಚ್​.ಡಿ.ಕುಮಾರಸ್ವಾಮಿ ಜೊತೆಗೆ ಮುನಿಸಿಕೊಂಡಿರುವ ಶಾಸಕ ಎಸ್.ಆರ್.ಶ್ರೀನಿವಾಸ್, ‘ನನ್ನನ್ನು ಕುಮಾರಸ್ವಾಮಿ ಸೇರಿದಂತೆ ಯಾರೂ ಸಂಪರ್ಕಿಸಿಲ್ಲ. ಆದರೆ ಕುಪೇಂದ್ರ ರೆಡ್ಡಿ ಅವರು ಮತ ಕೇಳಿದ್ದಾರೆ. ಅವರಿಗೆ ಮತ ನೀಡುತ್ತೇನೆ’ ಎಂದು ಹೇಳಿದ್ದರು.

ಗೌರಿಶಂಕರ್ ವಿದೇಶ ಪ್ರವಾಸ

ತುಮಕೂರು ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕ ಡಿ.ಸಿ.ಗೌರಿಶಂಕರ್ ಅವರು ಜೂನ್ 10ರಂದು ಮತ ಚಲಾಯಿಸುವುದು ಅನುಮಾನ ಎಂದು ಹೇಳಲಾಗುತ್ತಿತ್ತು. ದೇವೇಗೌಡ ಕುಟುಂಬದ ಅತ್ಯಾಪ್ತರಾಗಿದ್ದ ದಿವಂಗತ ಚೆನ್ನಿಗಪ್ಪ ಅವರ ಮಗ ಗೌರಿಶಂಕರ್ ಅವರ ಮುಂದಿನ ನಡೆಯ ಬಗ್ಗೆ ಕುತೂಹಲ ವ್ಯಕ್ತವಾಗಿತ್ತು. ‘ಶುಕ್ರವಾರ ಮತ ಹಾಕುತ್ತೇನೆ’ ಎಂದು ಗೌರಿಶಂಕರ್ ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಅವರು ಪಾಲ್ಗೊಂಡಿದ್ದರು.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:01 pm, Thu, 9 June 22