
ಬೆಂಗಳೂರು, ಸೆಪ್ಟೆಂಬರ್ 12: ಸಚಿವ ಸತೀಶ್ ಜಾರಕಿಹೊಳಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ ಸೇರಿ ಬರೋಬ್ಬರಿ 18 ಕಡೆ ಸತತ 36 ಗಂಟೆಗಳ ಕಾಲ ಇ.ಡಿ ಮೆಗಾ ಆಪರೇಷನ್ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ದಾಳಿ ಬಳಿಕ ಲೋಕೋಪಯೋಗಿ ಇಲಾಖೆಯ ಅಕ್ರಮ, ಲಂಚ ಸಂಗ್ರಹದ ದಾಖಲೆ ಪತ್ತೆ ಬಗ್ಗೆ ಇ.ಡಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದೆ. ಇದೆಲ್ಲದರ ಮಧ್ಯೆ ‘ಇ.ಡಿ ಅಧಿಕಾರಿಗಳಿಗೆ ದೂರು ಕೊಟ್ಟವರ ಬಗ್ಗೆ ನನಗೆ ಗೊತ್ತಿದೆ. ಸಿಎಂ ಡಿಕೆ ಶಿವಕುಮಾರ್ಗೆ ದೂರು ಕೊಟ್ಟವರ ಬಗ್ಗೆ ಹೇಳಿದ್ದೇನೆ’ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇಡಿ ಪತ್ರಿಕಾ ಪ್ರಕಟಣೆ ಬೆನ್ನಲ್ಲೇ ಇಂದು ಕೂಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸತೀಶ್ ಜಾರಕಿಹೊಳಿ, ‘ದೂರು ಕೊಟ್ಟವರು ಯಾರು ಅಂತ ಗೊತ್ತಿದೆ, ಸಿಎಂ ಡಿಕೆ ಶಿವಕುಮಾರ್ ಗಮನಕ್ಕೆ ತಂದಿದ್ದೇನೆ. ಇಲ್ಲಿ ನಮ್ಮ ಪಕ್ಷದವರು ಇರಬಹುದು. ಯಾರೇ ಇದ್ದರೂ ಮುಖ್ಯಮಂತ್ರಿಗಳು ಗಮನವಹಿಸುತ್ತಾರೆ. ಬಿಜೆಪಿಯವರಿರಬಹುದು ಅಥವಾ ಅವರ ಸಂಬಂಧಿ ಇರಬಹುದು. 50:50 ಇದೆ, ಯಾರು ಅಂತಾ ಅವರಿಗೆ ಗೊತ್ತಿದೆ, ಹೇಳಿದ್ದೇವೆ’ ಅಂತ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.
‘ಇ.ಡಿ ಅಧಿಕಾರಿಗಳು ವಿಚಾರಣೆಗೆ ಕರೆದರೆ ದಾಖಲೆ ಕೊಡುತ್ತೇವೆ. ಹೂಡಿಕೆ ಅಂದರೆ ಅಧಿಕೃತವಾಗಿ ವರ್ಗಾವಣೆ ಆಗಬೇಕಲ್ಲವೇ? ಹೆಚ್ಚಿನ ತನಿಖೆ ಮಾಡಬೇಕೆಂದು ಇ.ಡಿ ಅಧಿಕಾರಿಗಳು ಹೇಳಿದ್ದಾರೆ. ನೋಟಿಸ್ ಕೊಟ್ಟು ಕರೆಸಿದರೆ ಸರಿಯಾದ ಉತ್ತರ ಕೊಡುತ್ತೇನೆ. ಇ.ಡಿ ಅಧಿಕಾರಿಗಳು ಕರೆಯಲಿ, ಉತ್ತರ ಕೊಡುತ್ತೇನೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಲೋಕೋಪಯೋಗಿ ಇಲಾಖೆಯ ಅಕ್ರಮ, ಲಂಚ ಸಂಗ್ರಹ ದಾಖಲೆ ಪತ್ತೆ: ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಇಡಿ
‘ಹೂಡಿಕೆ ಮಾಡಿಲ್ಲ ಅಂತಾ ಇಡಿ ಅಧಿಕಾರಿಗಳಿಗೆ ಹೇಳಿದ್ದೇನೆ. ಇನ್ನೂ ಬಹಳ ಪ್ರಕ್ರಿಯೆ ಇದೆ, 3-6 ತಿಂಗಳ ಅವಕಾಶ ಇದೆ. ಅನುಮಾನಾಸ್ಪದ ಅಂತಾ ಹೇಳಿದ್ದಾರೆ, ಇದೇ ಫೈನಲ್ ಅಲ್ಲ. ಇನ್ನೂ ಪ್ರಗತಿ ಹಂತದಲ್ಲಿದೆ ಅಂತಾ ಪ್ರೆಸ್ನೋಟ್ನಲ್ಲೇ ಇದೆ. ಮೇಲ್ನೋಟಕ್ಕೆ ಹೂಡಿಕೆ ಇದೆ ಅಂತಿದ್ದಾರೆ’ ಎಂದರು.
‘ಇನ್ನೂ 4-5 ಜನರ ಮೇಲೆ ಇಡಿ ದಾಳಿ ಆಗಬಹುದು ಅಂತ ಸಿಎಂ ಹೇಳಿದ್ದಾರೆ. ಇಡಿ ಹೆಚ್ಚಿನ ವಿಚಾರಣೆ ನಡೆಸಲಿ, ಆರೋಪ ಸಾಬೀತಾಗಲಿ. ಈ ಆರೋಪದ ಬಗ್ಗೆ ಯಾವುದೇ ನಿರ್ಧಾರಕ್ಕೆ ಬರಲ್ಲ. ಇಡಿ ಅಧಿಕಾರಿಗಳು ಕರೆದಾಗ ವಿಚಾರಣೆಗೆ ಹೋಗುತ್ತೇವೆ. ನಮ್ಮ ಸೇಫ್ಟಿಯಲ್ಲಿ ನಾವು ಇರಬೇಕು. ರಾಜಕಾರಣದಲ್ಲಿ ಇದೆಲ್ಲಾ ಸಾಮಾನ್ಯ, ಅವರಿಗೆ ಕೇಳೋ ಅಧಿಕಾರ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:41 pm, Sat, 12 September 26