
ಬೆಂಗಳೂರು, ಜುಲೈ 01: ಗೃಹ ಜ್ಯೋತಿ ಯೋಜನೆ ಗೆ ಹೊಸ ಷರತ್ತು ವಿಚಾರ ಸಂಬಂಧ ರಾಜ್ಯ ಸರ್ಕಾರದ ವಿರುದ್ಧ ಜಾತ್ಯಾತೀತ ಜನತಾದಳ (ಸೆಕ್ಯೂಲರ್) ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಬಗ್ಗೆ ಎಕ್ಸ್ ಪೋಸ್ಟ್ ಮಾಡಿರುವ ಜೆಡಿಎಸ್, ಎಲ್ಲರಿಗೂ ಫ್ರೀ, ಯಾವುದೇ ಷರತ್ತುಗಳಿಲ್ಲ ಎಂದು ಭಾಷಣ ಬಿಗಿದು ಜನರ ಕಿವಿಗೆ ಹೂವಿಟ್ಟು ಅಧಿಕಾರ ಹಿಡಿದ ಕಾಂಗ್ರೆಸ್, ಈಗ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡಿದೆ. ಆರ್ಥಿಕ ದಿವಾಳಿತನವನ್ನು ಮುಚ್ಚಿಕೊಳ್ಳಲು ಜನಸಾಮಾನ್ಯರನ್ನು ‘ಗೃಹಜ್ಯೋತಿ’ ಯೋಜನೆಯಿಂದ ಹೊರಹಾಕಲು ಕುತಂತ್ರ ಹೆಣೆದಿದೆ ಎಂದು ಗಂಭೀರ ಆರೋಪ ಮಾಡಿದೆ.
ಮನೆ-ಮನೆ ಪರಿಶೀಲನೆ ನೆಪದಲ್ಲಿ ಎಸ್ಕಾಂ ಅಧಿಕಾರಿಗಳನ್ನು ಬಿಟ್ಟು, ಜನಸಾಮಾನ್ಯರನ್ನು ದಾಖಲೆಗಳ ಹೆಸರಿನಲ್ಲಿ ಬೆದರಿಸುವ ಕೆಲಸ ಶುರುವಾಗಿದೆ. ಉಚಿತ ವಿದ್ಯುತ್ ಪಡೆಯಲು ಪಾನ್ ಕಾರ್ಡ್ (PAN Card) ಯಾಕೆ ಬೇಕು? ವಿದ್ಯುತ್ ಸಂಪರ್ಕಕ್ಕೂ ಜಾತಿ ಪ್ರಮಾಣ ಪತ್ರಕ್ಕೂ ಏನು ಸಂಬಂಧ? ಕರ್ನಾಟಕದ ನಿವಾಸಿ ಎಂದು ದೃಢೀಕರಿಸಲು ಆಧಾರ್ ಕಾರ್ಡ್ ಅಥವಾ ವೋಟರ್ ಐಡಿ ಸಾಲದೇ? ಎಂದು ಪ್ರಶ್ನಿಸಿರುವ ಜೆಡಿಎಸ್, ಕಳ್ಳ ಮಾರ್ಗದಲ್ಲಿ ಷರತ್ತುಗಳನ್ನು ವಿಧಿಸಿ ಫಲಾನುಭವಿಗಳ ಸಂಖ್ಯೆ ಕಡಿತಗೊಳಿಸಿ ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ನಾಮ ಹಾಕುವ ನಿಮ್ಮ ಉದ್ದೇಶ ಸ್ಪಷ್ಟವಾಗಿದೆ. ಬಡವರು, ರೈತರು ಮತ್ತು ಮಧ್ಯಮ ವರ್ಗದವರನ್ನು ದಿನಕ್ಕೊಂದು ದಾಖಲೆ ಕೇಳಿ ಕಚೇರಿಗಳಿಗೆ ಅಲೆದಾಡಿಸಿ, ಸತಾಯಿಸಿ, ಸೌಲಭ್ಯಗಳಿಂದ ವಂಚಿಸುವುದೇ ನಿಮ್ಮ ಸಾಧನೆಯೇ ಎಂದು ಪ್ರಶ್ನಿಸಿದೆ.
ಇದನ್ನೂ ಓದಿ: ಜು. 1ರಿಂದ ಗೃಹ ಜ್ಯೋತಿ ಯೋಜನೆ ಪರಿಶೀಲನೆ; ನಿಮ್ಮ ಮನೆಗೆ ಬರುವ ಸಿಬ್ಬಂದಿಗೆ ಯಾವೆಲ್ಲಾ ದಾಖಲೆ ತೋರಿಸ್ಬೇಕು?
ವಿಪಕ್ಷಗಳ ಆರೋಪಗಳ ಬೆನ್ನಲ್ಲೇ ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆ ನೀಡಿದ್ದು, ಅರ್ಹರಲ್ಲದವರನ್ನು ಮಾತ್ರ ಪರಿಷ್ಕರಣೆ ಮಾಡುತ್ತೇವೆ. ಯಾರೆಲ್ಲ ಅರ್ಹರಿದ್ದಾರೆ ಅವರಿಗೆ ಮತ್ತೆ ಕೊಡುತ್ತೇವೆ. ಗೃಹಜ್ಯೋತಿಗೆ ಜಾತಿ ಪ್ರಮಾಣಪತ್ರದ ಅವಶ್ಯಕತೆ ಇಲ್ಲ. ಜಾತಿ ಹೆಸರು ಕಾಲಂನಲ್ಲಿ ಬರೆದರೆ ಸಾಕು. ವಿರೋಧ ಪಕ್ಷದಲ್ಲಿ ಸುಮ್ಮನೇ ಕೂರಲು ಇವರಿಗೆ ಆಗುತ್ತಿಲ್ಲ. ಫಾರಂ ನೋಡಿದ ಮೇಲೆ ಹೇಳಲಿ, ಅದನ್ನು ತೆಗೆದು ನೋಡಿದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ನಾವೇನು ವ್ಯವಹಾರ ಪತ್ರವನ್ನು ಕೊಡುವಂತೆ ಬರೆದಿದ್ದೀವಾ? ಎಂದವರು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:00 pm, Wed, 1 July 26