AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Electricity Tariff Hike: ರಾಜ್ಯದ ಗ್ರಾಹಕರಿಗೆ ಕರೆಂಟ್ ಶಾಕ್! ಪ್ರತಿ ಯೂನಿಟ್‌ಗೆ 10 ಪೈಸೆವರೆಗೆ ಹೆಚ್ಚಳ ಸಾಧ್ಯತೆ

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) 'ಟಾಪ್-ಅಪ್' ಹೆಸರಿನಲ್ಲಿ ವಿದ್ಯುತ್ ದರ ಹೆಚ್ಚಳ ಘೋಷಿಸಿದೆ. ಇದು ಪೂರ್ಣ ಪರಿಷ್ಕರಣೆಯಾಗಿರದೆ ಮಾರುಕಟ್ಟೆ ಏರಿಳಿತಗಳಿಗೆ ತಕ್ಕಂತೆ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 8-10 ಪೈಸೆ ಹೆಚ್ಚಳವಾಗುವ ನಿರೀಕ್ಷೆಯಿದ್ದು, ಗೃಹ ಜ್ಯೋತಿ ಯೋಜನೆಯ ಕಾರಣ ದರ ಕಡಿತ ಸಾಧ್ಯವಿಲ್ಲವೆಂದು ಆಯೋಗ ತಿಳಿಸಿದೆ .

Karnataka Electricity Tariff Hike: ರಾಜ್ಯದ ಗ್ರಾಹಕರಿಗೆ ಕರೆಂಟ್ ಶಾಕ್! ಪ್ರತಿ ಯೂನಿಟ್‌ಗೆ 10 ಪೈಸೆವರೆಗೆ ಹೆಚ್ಚಳ ಸಾಧ್ಯತೆ
ರಾಜ್ಯದ ವಿದ್ಯುತ್ ಗ್ರಾಹಕರಿಗೆ ಕರೆಂಟ್ ಶಾಕ್!
ಭಾವನಾ ಹೆಗಡೆ
|

Updated on:Dec 30, 2025 | 12:19 PM

Share

ಬೆಂಗಳೂರು, ಡಿಸೆಂಬರ್ 30: ಹೊಸ ವರ್ಷದ ಸಂಭ್ರಮಾಚರಣೆಯ ಬೆನ್ನಲ್ಲೇ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಗ್ರಾಹಕರಿಗೆ ಶಾಕ್ ನೀಡಿದೆ. ಮುಂದಿನ ಹಣಕಾಸು ವರ್ಷದಲ್ಲಿ ರಾಜ್ಯದ ವಿದ್ಯುತ್ ಗ್ರಾಹಕರು ಬಳಸುವ ವಿದ್ಯುತ್‌ಗೆ ಹೆಚ್ಚಿನ ಹಣ ಪಾವತಿಸಬೇಕಾಗುತ್ತದೆ ಎಂದಿರುವ ಆಯೋಗ, ಇದನ್ನು ವಿದ್ಯುತ್ ದರ ಪರಿಷ್ಕರಣೆ ಎಂದು ಕರೆಯದೆ, “ಟಾಪ್-ಅಪ್” ಅಥವಾ “ಟ್ರೂ-ಅಪ್” ಎಂದು ಸ್ಪಷ್ಟಪಡಿಸಿದೆ.

ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ

ಮಾರ್ಚ್ 2025 ರಲ್ಲಿ KERC ವಿದ್ಯುತ್ ದರ ಪರಿಷ್ಕರಣೆಯನ್ನು ಘೋಷಿಸಿದಾಗ, ಮೂರು ವರ್ಷಗಳ ಕಾಲ ಸುಂಕಗಳನ್ನು ಸ್ಥಗಿತಗೊಳಿಸಲು ತೀರ್ಮಾನಿಸಿತ್ತು. ಆದರೆ ಮಾರುಕಟ್ಟೆಯ ಏರಿಳಿತಗಳು ಮತ್ತು ವಿದ್ಯುತ್ ಸರಬರಾಜು ಕಂಪನಿಗಳಲ್ಲಿರುವ (ಎಸ್ಕಾಮ್‌ಗಳು) ಬಾಕಿಗಳನ್ನು ಆಧರಿಸಿ ಇದೀಗ ವಾರ್ಷಿಕವಾಗಿ ಸಣ್ಣ ಪ್ರಮಾಣದ ತಿದ್ದುಪಡಿ ಮಾಡಲಾಗುತ್ತಿದೆ. ಇದನ್ನೇ ಟಾಪ್-ಅಪ್ ಎಂದು ಕರೆಯಲಾಗುತ್ತದೆ ಎಂದು ಕೆಇಆರ್‌ಸಿ ಅಧ್ಯಕ್ಷ ಪಿ. ರವಿ ಕುಮಾರ್ ತಿಳಿಸಿದ್ದಾರೆ.

ಈ ಹೊಸ ಮಾದರಿಯಲ್ಲಿ ಮೂರು ವರ್ಷಕ್ಕೊಮ್ಮೆ ಮಾತ್ರ ದರ ಪರಿಷ್ಕರಣೆ ನಡೆಯಲಿದೆ. ಟಾಪ್-ಅಪ್ ಎಲ್ಲಾ ಎಸ್ಕಾಂಗಳಿಗೆ ಸಮಾನವಾಗಿ ಅನ್ವಯವಾಗಲಿದ್ದು, ಪ್ರತಿ ಯೂನಿಟ್‌ಗೆ ಗರಿಷ್ಠ 8–10 ಪೈಸೆ ಮಾತ್ರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೃಷಿ ಸಬ್ಸಿಡಿಯಲ್ಲಿ ಕಡಿಮೆ ಮಾಡಲು ಸೂಚನೆ

ರಾಜ್ಯದಲ್ಲಿ ಕೃಷಿ ವಿದ್ಯುತ್ ಸಬ್ಸಿಡಿ ಈಗ ಆರ್ಥಿಕ ಹೊರೆ ಆಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಂಗಳು) ಅದರ ಮೊತ್ತವನ್ನು ಕಡಿಮೆ ಮಾಡುವಂತೆ ಚಿಂತನೆ ನಡೆಸಿದ್ದು, ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದರಂತೆ ಎಸ್ಕಾಂಗಳು ತಮ್ಮ ಲೆಕ್ಕಾಚಾರವನ್ನು ಪರಿಷ್ಕರಿಸಿ, ಪ್ರತಿ ಯೂನಿಟ್‌ಗೆ 8.3 ರೂ.ಇದ್ದ ಕೃಷಿ ಸಬ್ಸಿಡಿಯನ್ನು 7.7 ಕ್ಕೆ ಇಳಿಸಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

2025–26 ಹಣಕಾಸು ವರ್ಷದಲ್ಲಿ ಕಲ್ಲಿದ್ದಲು ಬೆಲೆ ಸ್ಥಿರವಾಗಿದ್ದು, ಉಷ್ಣ ವಿದ್ಯುತ್ ಸ್ಥಾವರಗಳಿಗೆ ನಿರಂತರ ಕಲ್ಲಿದ್ದಲು ಪೂರೈಕೆ ಲಭ್ಯವಿದ್ದ ಕಾರಣ ಆಮದು ಕಲ್ಲಿದ್ದಲಿನ ಅವಶ್ಯಕತೆ ಕಡಿಮೆಯಾಗಿದೆ. ಜೊತೆಗೆ ನವೀಕರಿಸಬಹುದಾದ ಇಂಧನಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಉತ್ಪಾದನೆ ಮತ್ತು ಸರಬರಾಜು ವೆಚ್ಚಗಳು ವಿಭಿನ್ನವಾಗಿವೆ.

ಗೃಹ ಜ್ಯೋತಿ ಯೋಜನೆಯಿರುವ ಸಲುವಾಗಿ ದರ ಕಡಿತ ಇಲ್ಲ

ಈ ಎಲ್ಲ ಅಂಶಗಳನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ವಿದ್ಯುತ್ ಉತ್ಪಾದನಾ ವೆಚ್ಚದಲ್ಲಿ ಇಳಿಕೆ ಕಂಡುಬರುತ್ತದೆ. ಆದರೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಬೇಕಿರುವುದರಿಂದ ದರದಲ್ಲಿ ಕಡಿತ ಸಾಧ್ಯವಿಲ್ಲ. ಬದಲಾಗಿ ಈ ವರ್ಷವೂ ವಿದ್ಯುತ್ ದರದಲ್ಲಿ ಏರಿಕೆ ಸಂಭವಿಸಲಿದೆ. ಇದನ್ನು ದರ ಪರಿಷ್ಕರಣೆ ಎಂದು ಕರೆಯದೆ ‘ಟಾಪ್-ಅಪ್’ ಎಂದು ಪರಿಗಣಿಸಲಾಗುತ್ತದೆ ಎಂದು ಕೆಇಆರ್‌ಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:37 am, Tue, 30 December 25