ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೇಮಿಸಲು ಹೊರಟ ಸರ್ಕಾರ: ಹೊರಟ್ಟಿ ಆಕ್ರೋಶ

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವ ಸರ್ಕಾರದ ನಿರ್ಧಾರಕ್ಕೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನ, ಜನಗಣತಿ ಸೇರಿದಂತೆ ಹಲವು ಬೋಧಕೇತರ ಕೆಲಸಗಳಲ್ಲಿ ಈಗಾಗಲೇ ತೊಡಗಿರುವ ಶಿಕ್ಷಕರಿಗೆ ನಾಯಿ ಕಾಯುವ ಜವಾಬ್ದಾರಿ ವಹಿಸುವುದು ಅವಮಾನಕಾರಿ. ಶಿಕ್ಷಕರ ಕೊರತೆಯ ನಡುವೆ ಈ ಕ್ರಮದಿಂದ ಮಕ್ಕಳ ಕಲಿಕೆಯ ಗುಣಮಟ್ಟ ಕುಸಿಯುತ್ತದೆ, ಕೂಡಲೇ ನಿರ್ಧಾರ ಕೈಬಿಡಬೇಕೆಂದು  ಅವರು ಆಗ್ರಹಿಸಿದ್ದಾರೆ.

ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೇಮಿಸಲು ಹೊರಟ ಸರ್ಕಾರ: ಹೊರಟ್ಟಿ ಆಕ್ರೋಶ
ಶಿಕ್ಷಣ ಸಚಿವರಿಗೆ ಪತ್ರ ಬರೆದ ಬಸವರಾಜ್​​ ಹೊರಟ್ಟಿ
Image Credit source: Tv9 Kannada
Edited By:

Updated on: Mar 10, 2026 | 6:59 PM

ಬೆಂಗಳೂರು, ಮಾರ್ಚ್​ 10: ಬೀದಿ ನಾಯಿಗಳ ನಿಯಂತ್ರಣಕ್ಕೆ ಶಿಕ್ಷಕರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲು ಮುಂದಾಗಿರುವ ಸರ್ಕಾರದ ನಿರ್ಧಾರದ ಬಗ್ಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನ, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಈಗಾಗಲೇ ಶಿಕ್ಷಕರು ತೊಡಗಿಸಿಕೊಂಡಿದ್ದಾರೆ. ಮಕ್ಕಳಿಗೆ ಹಾಲು-ಮೊಟ್ಟೆ ವಿತರಣೆಯಂತಹ ಬೋಧಕೇತರ ಕೆಲಸಗಳಲ್ಲಿಯೂ ನಿರತರಾಗಿದ್ದಾರೆ. ರಾಜ್ಯಾದ್ಯಂತ ಈಗಾಗಲೇ ಶಿಕ್ಷಕರ ಕೊರತೆ ಇದ್ದು, ಇಂತಹ ಸಂದರ್ಭದಲ್ಲಿ ನಾಯಿ ಕಾಯುವ ಜವಾಬ್ದಾರಿ ನೀಡುವುದು ಹಾಸ್ಯಾಸ್ಪದ. ಶಿಕ್ಷಕ ಸಮುದಾಯಕ್ಕೆ ಮಾಡುವ ಅವಮಾನ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರಿಗೆ ಪತ್ರ ಮುಖೇನ ತಿಳಿಸಿದ್ದಾರೆ.

ಹೊರಟ್ಟಿ ಬರೆದ ಪತ್ರದಲ್ಲೇನಿದೆ?

ರಾಜ್ಯದ ಎಲ್ಲಾ ಶಿಕ್ಷಕರು ಮತದಾನದ ಕೆಲಸಗಳು, ಜನಗಣತಿ, ಜಾತಿಗಣತಿ, ಮತದಾರರ ಪಟ್ಟಿ ಪರಿಷ್ಕರಣೆ, ಮಕ್ಕಳಿಗೆ ಹಾಲು, ಮೊಟ್ಟೆ ವಿತರಣೆ ಇನ್ನೂ ಮುಂತಾದ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದೀಗ ಅವುಗಳ ಜೊತೆಗೆ ಸರ್ಕಾರವು ಬೀದಿ ನಾಯಿಗಳನ್ನು ಕಾಯುವ ಹೊಣೆಗಾರಿಕೆಯನ್ನು ಶಿಕ್ಷಕರಿಗೆ ನೀಡಿರುವ ಕುರಿತು ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ಸರ್ಕಾರದ ಈ ಕ್ರಮ ನಿಜಕ್ಕೂ ಬಹಳ ಬೇಸರದ ಸಂಗತಿಯಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಮುಂದಾಗಿರುವ ಸರ್ಕಾರವು, ಶಾಲಾ ಶಿಕ್ಷಕರನ್ನ ನೋಡೆಲ್ ಅಧಿಕಾರಿಗಳನ್ನಾಗಿ ನೇಮಕ ಮಾಡುವಂತೆ ಸೂಚಿಸಿದೆ. ಇದು ಸರ್ಕಾರವು ಶಿಕ್ಷಕರನ್ನು ನಾಯಿಗಳಿಗಿಂತ ಕಡೆಯದಾಗಿ ನೋಡುತ್ತಿದೆ ಎನ್ನುವ ಅರ್ಥದಲ್ಲಿ ಬಿಂಬಿತವಾಗುತ್ತದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಜಿಬಿಎಯಿಂದ ಭರ್ಜರಿ ಶಾಕ್​​; ಹೆಚ್ಚುವರಿ ತೆರಿಗೆಗೆ ಬಿಜೆಪಿಗರು ಕೆಂಡ

ಈಗಾಗಲೇ ಶಿಕ್ಷಕರು ಹಲವು ಕೆಲಸಗಳನ್ನು ನಿರ್ವಹಿಸುತ್ತಿರುವ ಕಾರಣ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚು ಗಮನ ಹರಿಸಲು ಆಗುತ್ತಿಲ್ಲ. ಇದರಿಂದ ಮಕ್ಕಳ ಕಲಿಕೆಯ ಗುಣಮಟ್ಟ ಕಡಿಮೆಯಾಗಿ ಫಲಿತಾಂಶವು ಸಹ ಕಡಿಮೆಯಾಗುತ್ತದೆ. ಪ್ರಸ್ತುತ ರಾಜ್ಯಾದ್ಯಂತ ಶಿಕ್ಷಕರ ಕೊರತೆ ಕಾಣುತ್ತಿದೆ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರವು ಜನಗಣತಿ ಆರಂಭಿಸುತ್ತಿದ್ದು ಅದರಲ್ಲೂ ಈ ಶಿಕ್ಷಕರೇ ಪಾಲ್ಗೊಳ್ಳಬೇಕಿದೆ. ಶಿಕ್ಷಕರ ಕೊರತೆಯ ನಡುವೆಯೇ ಸರ್ಕಾರದ ಎಲ್ಲಾ ಕಾರ್ಯಕ್ರಮಗಳಿಗೂ ಅವರನ್ನು ನಿಯೋಜಿಸುವುದರ ಜೊತೆಗೆ ಈಗ ಬೀದಿ ನಾಯಿಗಳ ನಿಯಂತ್ರಣ ಹೊಣೆ ಅವರಿಗೆ ನೀಡಲು ಹೊರಟ ಕ್ರಮ ನಿಜಕ್ಕೂ ಹಾಸ್ಯಾಸ್ಪದ. ಹೀಗಾಗಿ ಈ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಹೊರಟ್ಟಿ ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:57 pm, Tue, 10 March 26

Follow Us