ಮುಂದಿನ 7 ದಿನ ರಾಜ್ಯಾದ್ಯಂತ ವರುಣನ ಆರ್ಭಟ: ಕರಾವಳಿಯಲ್ಲಿ ಜೂನ್ 15ರವರೆಗೆ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ನೈಋತ್ಯ ಮುಂಗಾರು 2026 ಕರ್ನಾಟಕದಾದ್ಯಂತ ಚುರುಕುಗೊಂಡಿದ್ದು, IMD ಮುಂದಿನ 7 ದಿನಗಳ ಕಾಲ ರಾಜ್ಯದಲ್ಲಿ ಗುಡುಗು, ಸಿಡಿಲು ಹಾಗೂ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಇಡೀ ರಾಜ್ಯಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆ ನಿರೀಕ್ಷೆಯಿದೆ. ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಹವಾಮಾನ ಇಲಾಖೆ ಎಚ್ಚರಿಸಿದೆ.

ಬೆಂಗಳೂರು, ಜೂ.12 : ನೈಋತ್ಯ ಮುಂಗಾರು (Monsoon 2026) ಕರ್ನಾಟಕದಾದ್ಯಂತ ಚುರುಕುಗೊಂಡಿದ್ದು, ಮುಂದಿನ 7 ದಿನಗಳ ಕಾಲ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಗುಡುಗು, ಸಿಡಿಲು ಹಾಗೂ ಜೋರಾದ ಗಾಳಿ ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು ರಾಜ್ಯದ ಹಲವು ಭಾಗಗಳಿಗೆ ಮಹತ್ವದ ಮುನ್ನೆಚ್ಚರಿಕೆಗಳನ್ನು ರವಾನಿಸಿದೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮುಂಗಾರು ಮಳೆ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ. ಜೂನ್ 12 ರಂದು (ಇಂದು) ಕರಾವಳಿಯ ಕೆಲವೆಡೆ ಭಾರಿಯಿಂದ ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ತದನಂತರ ಜೂನ್ 13 ರಿಂದ ಜೂನ್ 15 ರವರೆಗೆ ಕರಾವಳಿಯಾದ್ಯಂತ ಸತತವಾಗಿ ಭಾರಿ ಮಳೆಯಾಗಲಿದ್ದು, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಕರಾವಳಿ ತೀರದ ಜನರಿಗೆ ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.
ಉತ್ತರ ಒಳನಾಡುಗಳಾದ ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಜೂನ್ 13 ರವರೆಗೆ ಅಲ್ಲಲ್ಲಿ ಗುಡುಗು, ಮಿಂಚು ಮತ್ತು ಬಲವಾದ ಬಿರುಗಾಳಿ (ಗಂಟೆಗೆ 30-40 ಕಿ.ಮೀ) ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ಇನ್ನು ದಕ್ಷಿಣ ಒಳನಾಡು ಮೈಸೂರು, ಮಂಡ್ಯ, ಕೊಡಗು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಜೂನ್ 13 ರವರೆಗೆ ಮೋಡ ಕವಿದ ವಾತಾವರಣವಿರಲಿದ್ದು, ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ.
ರಾಜಧಾನಿ ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಬೆಳಗ್ಗಿನ ಅವಧಿಯಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಸಂಜೆ ಅಥವಾ ರಾತ್ರಿಯ ವೇಳೆಗೆ ನಗರದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದ್ದು, ತಾಪಮಾನದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡುಬರಲಿದೆ. ಹವಾಮಾನ ಇಲಾಖೆಯು ಇಡೀ ರಾಜ್ಯಕ್ಕೆ ಒಟ್ಟಾರೆಯಾಗಿ ಹಳದಿ ಅಲರ್ಟ್ (Yellow Alert) ಘೋಷಿಸಿದ್ದು, ಸಾರ್ವಜನಿಕರು ಸಿಡಿಲು ಮತ್ತು ಬಿರುಗಾಳಿಯ ಸಮಯದಲ್ಲಿ ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳ ಬಳಿ ನಿಲ್ಲದೆ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ಸೂಚಿಸಿದೆ.
ಇದನ್ನೂ ಓದಿ; ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಕರಾವಳಿ ಕರ್ನಾಟಕ- ಆರೆಂಜ್ ಅಲರ್ಟ್
ಜೂನ್ 12 (ಇಂದು): ಅತಿ ಭಾರಿ ಮಳೆ ಜೊತೆಗೆ ಬಲವಾದ ಗಾಳಿ ಬೀಸಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಜೂನ್ 13 ರಿಂದ ಜೂನ್ 15: ಮೂರು ದಿನಗಳ ಕಾಲ ಸತತವಾಗಿ ಭಾರಿ ಮಳೆ ಹಾಗೂ ಬಲವಾದ ಗಾಳಿ ಇರಲಿದ್ದು, ಹಳದಿ ಅಲರ್ಟ್ ಇರಲಿದೆ.
ಜೂನ್ 16 ರಿಂದ ಜೂನ್ 18: ಯಾವುದೇ ಮಳೆ ಎಚ್ಚರಿಕೆ ಇರುವುದಿಲ್ಲ.
ಉತ್ತರ ಒಳನಾಡು ಕರ್ನಾಟಕ – ಯಲ್ಲೋ ಅಲರ್ಟ್
ಜೂನ್ 12 ಮತ್ತು ಜೂನ್ 13: ಮುಂದಿನ ಎರಡು ದಿನಗಳ ಕಾಲ ಕೆಲವು ಕಡೆಗಳಲ್ಲಿ ಭಾರಿ ಮಳೆ ಹಾಗೂ ಗುಡುಗು, ಸಿಡಿಲು ಸಹಿತ ಭೀಕರ ಬಿರುಗಾಳಿ ಬೀಸಲಿದೆ.
ಜೂನ್ 14 ಮತ್ತು ಜೂನ್ 15: ಮಳೆಯ ಪ್ರಮಾಣ ಸ್ವಲ್ಪ ತಗ್ಗಲಿದೆಯಾದರೂ, ಗುಡುಗು, ಸಿಡಿಲು ಮತ್ತು ಗಾಳಿಯ ಆರ್ಭಟ ಮುಂದುವರಿಯಲಿದೆ.
ಜೂನ್ 16 ರಿಂದ ಜೂನ್ 18: ವಾತಾವರಣ ಸಾಮಾನ್ಯ ಸ್ಥಿತಿಗೆ ಮರಳಲಿದ್ದು, ಯಾವುದೇ ಎಚ್ಚರಿಕೆ ಇರುವುದಿಲ್ಲ.
ದಕ್ಷಿಣ ಒಳನಾಡು ಕರ್ನಾಟಕ – ಯಲ್ಲೋ ಅಲರ್ಟ್
ಜೂನ್ 12 ಮತ್ತು ಜೂನ್ 13: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಹಾಗೂ ಬಲವಾದ ಮೇಲ್ಮೈ ಗಾಳಿ ಬೀಸಲಿದೆ.
ಜೂನ್ 14 ಮತ್ತು ಜೂನ್ 15: ಭಾರಿ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಜೋರಾದ ಗಾಳಿ ಬೀಸುವಿಕೆ ಮುಂದುವರಿಯಲಿದೆ.
ಜೂನ್ 16 ರಿಂದ ಜೂನ್ 18: ಮಳೆ ಮತ್ತು ಗಾಳಿಯ ತೀವ್ರತೆ ಸಂಪೂರ್ಣ ಕಮ್ಮಿಯಾಗಲಿದ್ದು, ಯಾವುದೇ ಮುನ್ನೆಚ್ಚರಿಕೆ ಇಲ್ಲ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Fri, 12 June 26




