AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮವಸ್ತ್ರ ಸಮರ: ವಿಪಕ್ಷದ ವಿರೋಧದ ನಡುವೆಯೂ ಸರ್ಕಾರದ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ

ಕರ್ನಾಟಕ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್, ಜನಿವಾರ ಸೇರಿದಂತೆ ಧಾರ್ಮಿಕ ವಸ್ತ್ರಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಇದು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸಮವಸ್ತ್ರ ಸಮರಕ್ಕೆ ಕಾರಣವಾಗಿದೆ. ವಿಪಕ್ಷಗಳು ಸರ್ಕಾರದ ಕ್ರಮವನ್ನು ನ್ಯಾಯಾಲಯದ ಆದೇಶಕ್ಕೆ ವಿರುದ್ಧ ಎಂದು ಟೀಕಿಸಿದರೆ, ಸಿಎಂ ಸಿದ್ದರಾಮಯ್ಯ ಹಿಜಾಬ್ ಮಾತ್ರವಲ್ಲದೆ ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟಕ್ಕೂ ಅವಕಾಶ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಸಮವಸ್ತ್ರ ಸಮರ: ವಿಪಕ್ಷದ ವಿರೋಧದ ನಡುವೆಯೂ ಸರ್ಕಾರದ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯ
ಸರ್ಕಾರದ ನಡೆ ಸಮರ್ಥಿಸಿಕೊಂಡ ಸಿದ್ದರಾಮಯ್ಯImage Credit source: Tv9 Kannada
ಪ್ರಸನ್ನ ಹೆಗಡೆ
|

Updated on: May 14, 2026 | 12:56 PM

Share

ಮೈಸೂರು/ಉಡುಪಿ, ಮೇ 14: ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಹಿಜಾಬ್‌ ಸೇರಿದಂತೆ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿರೋದೀಗ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಸಮವಸ್ತ್ರ ಸಮರಕ್ಕೆ ನಾಂದಿ ಹಾಡಿದೆ. ಒಂದು ಸಮುದಾಯದ ಮನವೊಲಿಕೆಗೆ ಇಳಿದಿರುವ ಕಾಂಗ್ರೆಸ್ ಸರ್ಕಾರ​​, ಕೋರ್ಟ್​​ ಆದೇಶವನ್ನೇ ಗಾಳಿಗೆ ತೂರಿದೆ. ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು ಎಂದು ವಿಪಕ್ಷಗಳು ಮುಗಿಬಿದ್ದಿವೆ. ಹೀಗಿದ್ದರೂ ಸಿಎಂ ಸಿದ್ದರಾಮಯ್ಯ ಮಾತ್ರ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸರ್ಕಾರದ ಆದೇಶ ಸಮರ್ಥಿಸಿಕೊಂಡ ಸಿಎಂ

ನಾವು ಹಿಜಾಬ್‌ಗೆ ಮಾತ್ರ ಅವಕಾಶ ಕೊಟ್ಟಿಲ್ಲ, ಜನಿವಾರ, ಶಿವದಾರ, ರುದ್ರಾಕ್ಷಿ, ಪೇಟಕ್ಕೂ ಅವಕಾಶ ಕೊಟ್ಟಿದ್ದೇವೆ. ಆದರೆ ಶಾಲೆಗಳಿಗೆ ಕೇಸರಿ ಶಾಲು ಹಾಕಿಕೊಂಡು ಬರುವಂತಿಲ್ಲ, ಕೇಸರಿ ಪೇಟಕ್ಕೂ ಕೂಡ ಅವಕಾಶ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ತಿಳಿಸಿದ್ದಾರೆ. ಮೊದಲಿನಿಂದ ಯಾವ ಪೇಟಗಳಿತ್ತು, ಆ ಪೇಟಗಳಿಗಷ್ಟೇ ಅವಕಾಶ ಇರಲಿದೆ. ಈಗ ಪೇಟಕ್ಕೆ ಬಣ್ಣದ ಬದಲಾವಣೆ ಮಾಡಿಕೊಂಡರೆ ಅವಕಾಶ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ; ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

‘ಸರ್ಕಾರದ ಆದೇಶ ಸ್ವಾಗತ’

ಇನ್ನು ಸರ್ಕಾರದ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ SDPI ಮುಖಂಡ ಮೊಹಮ್ಮದ್ ಅಶ್ರಫ್ , ಹಿಜಾಬ್ ವಿಚಾರದಲ್ಲಿ ಈ ಹಿಂದಿನ ಸರ್ಕಾರ ವಿದ್ಯಾರ್ಥಿನಿಯರ ಭವಿಷ್ಯದಲ್ಲಿ ಚೆಲ್ಲಾಟವಾಡಿತ್ತು. ಉಡುಪಿ ಜಿಲ್ಲೆಯಲ್ಲಿ ಇದನ್ನು ಆರಂಭ ಮಾಡಿದ್ದು ಇಲ್ಲಿಯ ಮಾಜಿ ಮತ್ತು ಹಾಲಿ ಶಾಸಕರು. ಅನಗತ್ಯ ಈ ವಿಚಾರ ವಿಶ್ವಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಹಿಜಾಬ್​​ ಸಂಬಂಧ ಆದೇಶವನ್ನು ಸರ್ಕಾರ ಈ ಹಿಂದೆಯೇ ಹಿಂಪಡೆಯಬೇಕಿತ್ತು. ಹೀಗಿದ್ದರೂ ಸರ್ಕಾರದ ಆದೇಶವನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.

ಸರ್ಕಾರದ ವಿರುದ್ಧ ಶಾಸಕ ಯಶ್ಪಾಲ್​​ ಕಿಡಿ

ಶಾಲಾ ಸಮವಸ್ತ್ರ ವಿಚಾರವಾಗಿ 2022ರ ಆದೇಶ ಹಿಂಪಡೆಯವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೊಮ್ಮೆ ಜೇನುಗೂಡಿಗೆ ಕೈ ಹಾಕಿದೆ ಎಂದು ಉಡುಪಿ ಶಾಸಕ ಯಶ್​ಪಾಲ್ ಸುವರ್ಣ ಹೇಳಿದ್ದಾರೆ. ಸರ್ಕಾರ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟ ಆಡುತ್ತಿದ್ದು, ಮಮತಾ ಬ್ಯಾನರ್ಜಿ ಮಾದರಿ ಕರ್ನಾಟಕ ಮಾಡಲು ಹೊರಟಿದ್ದಾರೆ. ಮಮತಾ ಬ್ಯಾನರ್ಜಿಗೂ ಸಿಎಂ ಸಿದ್ದರಾಮಯ್ಯಗೂ ವ್ಯತ್ಯಾಸ ಇಲ್ಲ. ಹಿಂದೆ ಹೋರಾಟ ಆದಾಗ ಆ ವಿದ್ಯಾರ್ಥಿಗಳ ಹಿಂದೆ ಇದ್ದಿದ್ದು PFI. ವಿದ್ಯಾರ್ಥಿಗಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಸರ್ಕಾರ ಮಾಡುತ್ತಿದೆ. ಸುಪ್ರೀಂಕೋರ್ಟ್​​ನಲ್ಲಿ ವಿಚಾರ ಬಾಕಿ ಇರುವಾಗ ನಿರ್ಧಾರ ಮಾಡಲು ಆಗಲ್ಲ. ರಾಜ್ಯ ಸರ್ಕಾರದ ನಿರ್ಧಾರ ಖಂಡಿಸಿ ನಾವು ಹೋರಾಟ ಮಾಡುತ್ತೇವೆ. ಮುಂದಾಗುವ ಪರಿಣಾಮಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತೆ ಎಂದವರು ಎಚ್ಚರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More