AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ: ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ

2022ರಲ್ಲಿ ಬಿಜೆಪಿ ಸರ್ಕಾರದ ಆದೇಶವನ್ನು ಸಿದ್ದರಾಮಯ್ಯ ಸರ್ಕಾರ ಹಿಂಪಡೆದುಕೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್, ಪೇಟ ಸೇರಿದಂತೆ ನಿಗದಿತ ಸಮವಸ್ತ್ರದೊಂದಿಗೆ ಧಾರ್ಮಿಕ ವಸ್ತ್ರಗಳನ್ನು ಧರಿಸಲು ಅವಕಾಶ ನೀಡಿ ಹೊಸ ಆದೇಶ ಹೊರಡಿಸಿದೆ. ಇದರಿಂದ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಸಿಡಿಮಿಡಿಗೊಂಡಿದ್ದು, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಬಿದ್ದಿದ್ದಾರೆ.

ಕರ್ನಾಟಕದಲ್ಲಿ  ಹಿಜಾಬ್​​​ ವಿವಾದ ಮತ್ತೆ ಮುನ್ನೆಲೆಗೆ:  ಸರ್ಕಾರದ ನಡೆಗೆ ಸಿಡಿದೆದ್ದ ವಿಪಕ್ಷ ಬಿಜೆಪಿ
Hijab Row
ರಮೇಶ್ ಬಿ. ಜವಳಗೇರಾ
|

Updated on: May 13, 2026 | 10:56 PM

Share

ಬೆಂಗಳೂರು, (ಮೇ 13): ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ (School And College)  ಹಿಜಾಬ್‌ (Hijab) ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು…2022ರಲ್ಲಿ ಬಿಜೆಪಿ (BJP) ಸರ್ಕಾರದ ಆದೇಶವನ್ನು ಹಿಂಪಡೆದು ಜನಿವಾರ, ಶಿವದಾರ, ರುದ್ರಾಕ್ಷಿ, ಹಿಜಾಬ್, ಪೇಟ ಸೇರಿದಂತೆ ನಿಗದಿತ ಸಮವಸ್ತ್ರದೊಂದಿಗೆ ಧಾರ್ಮಿಕ ವಸ್ತ್ರಗಳನ್ನು ಧರಿಸಲು ಅವಕಾಶ ನೀಡಲಾಗಿದೆ. ಸರ್ಕಾರದ ಈ ನಿರ್ಣಯದಿಂದ ಹಿಜಾಬ್​ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಆಕ್ರೋಶಗೊಂಡಿವೆ.

  • ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ನೀಡಿದ ರಾಜ್ಯ ಸರ್ಕಾರ
  • ಸಿದ್ದರಾಮಯ್ಯ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
  • ಮುಸ್ಲಿಮರ ಮುನಿಸಿಗೆ ಹಿಜಾಬ್ ಮುಲಾಮು ಎಂದ ಅಶೋಕ್
  • ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸುವ ಬಗ್ಗೆ ಚರ್ಚೆ ಮಾಡ್ತೇವೆ ಎಂದ ಮುತಾಲಿಕ್

ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಹಾಗೂ ಧಾರ್ಮಿಕ ವಸ್ತುಗಳನ್ನು ಧರಿಸಲು ಅವಕಾಶ ನೀಡಲಾಗುವುದು ಎಂದು ಸರ್ಕಾರ ನಿರ್ಧಾರ ಮಾಡಿದ್ದು, ಈ ಬೆನ್ನಲ್ಲೇ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್​. ಅಶೋಕ್​​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಜಾಬ್ ಅನ್ನು ನಿಷೇಧಿಸಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಅತಿ ಓಲೈಕೆ ಮಾಡಿ ಮಮತಾ ಬ್ಯಾನರ್ಜಿ ಸೋತು ಮನೆಗೆ ಸೇರಿದ್ದಾರೆ. ತಮಿಳುನಾಡಲ್ಲಿ ಹಿಂದುಗಳನ್ನು ಬೈದು ಸ್ಟಾಲಿನ್ ಸೋತರು. ಅದೇ ರೀತಿಯಲ್ಲಿ ಕೇರಳ ಸಿಎಂ ಆಗಿದ್ದ ಪಿಣರಾಯಿಯನ್ನೂ ಸೋಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿಯ 2022ರ ಆದೇಶ ಹಿಂಪಡೆದ ಸರ್ಕಾರ: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ

ಮುಸ್ಲಿಮರ ಮುನಿಸಿಗೆ ಹಿಜಾಬ್ ಮುಲಾಮು

ದಾವಣಗೆರೆ ಉಪಚುನಾವಣೆ ಸುತ್ತ ನಡೆದ ಘಟನೆಗಳ ನಂತರ ಅಲ್ಪಸಂಖ್ಯಾತರ ಆಕ್ರೋಶಕ್ಕೆ ಕಾಂಗ್ರೆಸ್ ಸರ್ಕಾರ ಬೆದರಿದೆ. ಹೀಗಾಗಿ ತನ್ನ ಮತಬ್ಯಾಂಕ್ ಉಳಿಸಿಕೊಳ್ಳಲು ಹಿಜಾಬ್ ಅಸ್ತ್ರ ಕೈಗೆತ್ತಿಕೊಂಡಿದೆ. ರಾಜ್ಯದ ನೈಜ ಸಮಸ್ಯೆಗಳಾದ ಬೆಲೆ ಏರಿಕೆ, ಭ್ರಷ್ಟಾಚಾರ, ರೈತರ ಸಂಕಷ್ಟ, ಕಾನೂನು ಸುವ್ಯವಸ್ಥೆಯ ವೈಫಲ್ಯ ಇವೆಲ್ಲದರ ಬಗ್ಗೆ ಸರ್ಕಾರ ಮೌನವಾಗಿದ್ದು, ಮುನಿಸಿಕೊಂಡಿರುವ ಮುಸ್ಲಿಂ ಮತ ಬ್ಯಾಂಕ್‌ಗೆ ಹಿಜಾಬ್ ಮೂಲಕ ಮುಲಾಮು ಹಚ್ಚಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದ್ದಾರೆ.

ಕೋರ್ಟ್ ಆದೇಶವನ್ನೇ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ

ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ 2022ರಲ್ಲಿ ಅಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ವಸ್ತ್ರಸಂಹಿತೆಯನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಶಿಕ್ಷಣ ಸಂಸ್ಥೆಗಳಲ್ಲಿ ಶಿಸ್ತು ಮುಖ್ಯ ಎಂದು ತೀರ್ಪು ನೀಡಿತ್ತು. ಈಗ ಕೋರ್ಟ್ ಆದೇಶವನ್ನೇ ಗಾಳಿಗೆ ತೂರಿ ಒಂದು ಸಮುದಾಯದ ಓಲೈಕೆಗೆ ಮುಂದಾಗಿರುವುದು ಯಾವ ಸೀಮೆ ಜಾತ್ಯತೀತತೆ? ಎಂದು ಪ್ರಶ್ನಿಸಿದ ಅಶೋಕ್, ಒಂದು ಸಮುದಾಯದ ಹಿಜಾಬ್‌ಗೆ ಹಸಿರು ನಿಶಾನೆ ತೋರಿರುವ ಸಿದ್ದರಾಮಯ್ಯ ಸರ್ಕಾರ ಕೇಸರಿ ಶಾಲುವಿಗೆ ಮಾತ್ರ ನಿಷೇಧ ಹೇರಿದೆ. ಓಲೈಕೆ ರಾಜಕಾರಣ ಹಿಂದೂಗಳಿಗೆ ಅರ್ಥವಾಗಲ್ಲ ಅಂತ ಭಾವಿಸಿದ್ದೀರಾ ಸಿಎಂ? ಶಾಲಾ-ಕಾಲೇಜುಗಳನ್ನು ಸಮಾನತೆಯ ಕೇಂದ್ರಗಳನ್ನಾಗಿ ನೋಡುವ ಬದಲು ಧರ್ಮದ ಆಧಾರದಲ್ಲಿ ಮಕ್ಕಳನ್ನ ವಿಭಜಿಸ್ತಿರುವ ನಿಮ್ಮ ನಡೆಯೇ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರ್ಕಾರ ಅತಿಯಾದ ಓಲೈಕೆ ರಾಜಕಾರಣ ಮಾಡಿ ಯಾವ ದುಸ್ಥಿತಿಗೆ ತಲುಪಿದೆಯೋ ಕರ್ನಾಟಕದಲ್ಲಿ ನಿಮಗೂ ಅದೇ ಗತಿ ಕಾದಿದೆ. ಕರ್ನಾಟಕದಲ್ಲಿ ತುಷ್ಟೀಕರಣದ ಪರಾಕಾಷ್ಠೆ ತಲುಪಿರುವ ಕಾಂಗ್ರೆಸ್ ಪಕ್ಷಕ್ಕೆ ಕನ್ನಡಿಗರು ತಕ್ಕ ಪಾಠ ಕಲಿಸುವುದು ಗ್ಯಾರಂಟಿ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಂವಿಧಾನ ಮತ್ತು ನ್ಯಾಯಾಂಗದ ಆಶಯಗಳನ್ನು ಬಲಿ ಕೊಡುತ್ತಿರುವ ಸರ್ಕಾರಕ್ಕೆ ಜನರೇ ಅಂತ್ಯ ಹಾಡಲಿದ್ದಾರೆ ಎಂದು ಟ್ವಿಟ್ಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಮೋದ್ ಮುತಾಲಿಕ್ ಕೆಂಡಾಮಂಡಲ

ಹಿಜಾಬ್‌ಗೆ ಅವಕಾಶ ನೀಡಿ ರಾಜ್ಯ ಸರ್ಕಾರ ಆದೇಶಿಸಿರುವ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಸರ್ಕಾರದ ಆದೇಶದ ಪ್ರತಿಯನ್ನು ನಾಳೆ ರಾಜ್ಯಾದ್ಯಂತ ಹರಿದು ಹಾಕುತ್ತೇವೆ. ಹೈಕೋರ್ಟ್‌ನಲ್ಲಿ ಪಿಐಎಲ್ ಹಾಕುವ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಸಮಾನತೆ, ಏಕತೆ ಸರ್ಕಾರಕ್ಕೆ ಬೇಡವಾಗಿದೆ. ಮುಸ್ಲಿಮರ ತುಷ್ಟೀಕರಣಕ್ಕಾಗಿ ಇಂತಹ ಆದೇಶ ಹೊರಡಿಸಿದ್ದಾರೆ ಎಂದು ಕಿಡಿಕಾರಿದರು.

ಶಾಲಾ ಮಕ್ಕಳಲ್ಲಿ ಭೇದ ಭಾವ ಮಾಡ್ತಿದ್ದಾರೆ. ಹಿಜಾಬ್ ಧರಿಸಿ ಬಂದ ಮೇಲೆ ಅವರು ಮುಸ್ಲಿಮರು ಎಂದು ಗೊತ್ತಾಗುತ್ತದೆ. ಶಿವದಾರ, ಜನಿವಾರ ಒಳಗಡೆ ಇರುತ್ತೆ. ಅದು ಯಾರಿಗೂ ಗೊತ್ತಾಗಲ್ಲ. ರಾಜ್ಯ ಸರ್ಕಾರ ಕಣ್ಣಿಗೆ ಮಣ್ಣು ಹಾಕುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಸರ್ಕಾರಕ್ಕೆ ಸಮಾನತೆ ಬೇಕಾಗಿಲ್ಲ, ಒಡಕು ಬೇಕಾಗಿದೆ. ಎಸ್‌ಡಿಎಂಸಿ ಹಕ್ಕನ್ನು ಕಸಿದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

MLC ಸಿ.ಟಿ ರವಿ ಆಕ್ರೋಶ

1965ರಿಂದ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರಗಳಿದೆ. ಶಾಲಾ‌‌ ಕಾಲೇಜಿನಲ್ಲಿ ವಸ್ತ್ರ ಸಂಹಿತೆಯನ್ನ 1969 ರಿಂದ ಕಡ್ಡಾಯ ಮಾಡಲಾಗಿದೆ. 1969 ರಲ್ಲಿ ಯಾವ ಕಾರಣಕ್ಕೆ ಸಮವಸ್ತ್ರ ಜಾರಿ ಮಾಡಿದ್ವಿ ಅನ್ನೋದನ್ನ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಮಕ್ಕಳಲ್ಲಿ ಯಾವುದೇ ಭೇದಭಾವ ತರಬಾರದು ಎಂಬ ಕಾರಣಕ್ಕೆ ಸಮವಸ್ತ್ರ ಜಾರಿ ಮಾಡಲಾಗಿತ್ತು. ಇದೀಗ ಸರ್ಕಾರ ಮತಿಯ ಚಿಹ್ನೆಗಳನ್ನು ಬಳಸಲು ಅವಕಾಶ ನೀಡಿದೆ. ಹಾಗಾದ್ರೆ ಸಮವಸ್ತ್ರದ ಭಾಗನಾ ಮತಿಯ ಚಿಹ್ನೆಗಳು? ಇದನ್ನ‌ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಕೇಸರಿ ಬಣ್ಣದ ಹಿಜಾಬ್ ಹಾಕಿ ಬಂದ್ರೆ ನೀವು ಹೊರಗೆ ಕಳಿಸುತ್ತೀರಾ?

ಮತಿಯ ಚಿಹ್ನೆಗಳು ಬೇರೆ ಸಂಸ್ಕೃತಿಕ ಚಿಹ್ನೆಗಳು ಬೇರೆ. ಹಿಜಾಬ್ ಮತಿಯ ಚಿಹ್ನೆಯೋ ಸಂಸ್ಕೃತಿಯ ಚಿಹ್ನೆಯೋ ಅನ್ನುವುದನ್ನ ಸ್ಪಷ್ಟಪಡಿಸ್ಬೇಕು. ಹಿಜಾಬ್ ಇರಬಾರದು ಅಂತ ನಾವು ಹೇಳಲ್ಲ. ಶಾಲೆಗಳಲ್ಲಿ ಹಿಜಾಬ್ ಇರಬೇಕಾ ಅಥವಾ ಸಮವಸ್ತ್ರ ಇರಬೇಕಾ? ಹಿಜಾಜ್ ಸಮವಸ್ತ್ರದ ಭಾಗವಾದ್ರೆ ಯಾರು ಪ್ರಶ್ನೆ ಮಾಡುವ ಅವಶ್ಯಕತೆ ಇಲ್ಲ. ಆದ್ರೆ ಸಮವಸ್ತ್ರದ ಭಾಗವಾಗದೆ ಇದ್ರೆ ಅದನ್ನ ಸರ್ಕಾರ ಹೇಗೆ ಸಮರ್ಥನೆ ಮಾಡುತ್ತೆ. ಕೆಲವು ಶಾಲೆಗಳಲ್ಲಿ ಅವರದ್ದೆ ಸಮವಸ್ತ್ರಗಳಿದೆ . ಸಮವಸ್ತ್ರಗಳನ್ನ ಶಾಲಾ ಕಾಲೇಜುಗಳು ನಿಗದಿ ಮಾಡಿರುತ್ತದೆ. ಅಂತಹ ಶಾಲೆಗಳಲ್ಲಿ ಹಿಜಾಬ್ ಸಮವಸ್ತ್ರದ ಭಾಗವಾದ್ರೆ ಯಾರು ಪ್ರಶ್ನೆ ಮಾಡುವಂತಿಲ್ಲ. ಆದ್ರೆ ಹಿಜಾಬ್ ಸಮವಸ್ತ್ರದ ಭಾಗವಾಗದೆ ಇದ್ರೆ ಸರ್ಕಾರ ಏನ್ ಹೇಳುತ್ತೆ ಈ ವಿಷಯದಲ್ಲಿ ಕೇಸರಿ ಧಾರ್ಮಿಕ ಚಿಹ್ನೆ ಅಲ್ಲ ಅಂತ ಹೇಳುವ ಅಧಿಕಾರ ಕೊಟ್ಟಿದ್ದು ಯಾರು? ನೀವೇನು ಧಾರ್ಮಿಕ ಪಂಡಿತರ? ನೀವು ಹಿಜಾಬ್ ಗೆ ಅನುಮತಿ ಕೊಟ್ಟು ಕೆಸರಿಗೆ ಅನುಮತಿ ಇಲ್ಲ ಎನ್ನುವುದರ ಅರ್ಥವೇನು? ಹಾಗಾದ್ರೆ ಕೇಸರಿ ಬಣ್ಣದ ಹಿಜಾಬ್ ಹಾಕಿ ಬಂದ್ರೆ ನೀವು ಹೊರಗೆ ಕಳಿಸುತ್ತೀರಾ? ಕೇಸರಿಗೆ ವಿರೋಧ ಯಾಕೆ ನಿಮ್ದು? ಎಂದು ಪ್ರಶ್ನಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us