ಮಾಕ್ ಡ್ರಿಲ್ ಅಂದ್ರೇನು? ಬೆಂಗಳೂರಿನಲ್ಲಿ ಎಲ್ಲೆಲ್ಲಿ, ಹೇಗೆ ನಡೆಯುತ್ತೆ? ಇಲ್ಲಿದೆ ಸಂಪೂರ್ಣ ವಿವರ
ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಮ್ನಲ್ಲಿ ಉಗ್ರರ ದಾಳಿ ಬೆನ್ನಲ್ಲೇ ಭಾರತ ಹಾಗೂ ಪಾಕ್ ಮಧ್ಯೆ ಯುದ್ಧದ ಕಾರ್ಮೋಡ ಆವರಿಸಿದೆ. ಪಾಪಿ ಪಾಕಿಸ್ತಾನದ ವಿರುದ್ಧ ಸಮರ ಸಾರಲು ಭಾರತ ಸರ್ವ ಸನ್ನದ್ಧವಾಗಿದ್ದು, ನಾಳೆ(ಮೇ 07) ದೇಶಾದ್ಯಂತ 259 ಸ್ಥಳಗಳಲ್ಲಿ ಮಾಕ್ ಡ್ರಿಲ್ಗೆ ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಮಾಕ್ ಡ್ರಿಲ್ಗೆ ಸಿದ್ಧತೆಗಳು ನಡೆದಿವೆ. ಹಾಗಾದ್ರೆ, ಏನಿದು ಮಾಕ್ ಡ್ರಿಲ್? ಬೆಂಗಳೂರಿನಲ್ಲಿ ಎಷ್ಟಿವೆ? ಮತ್ತು ಎಲ್ಲೆಲ್ಲಿ ಮಾಕ್ ಡ್ರಿಲ್ ನಡೆಯಲಿದೆ ಎನ್ನುವ ಸಂಪೂರ್ಣ ವಿವರ ಈ ಕೆಳಗಿನಂತಿದೆ.

ಬೆಂಗಳೂರು, (ಮೇ 06): ಪಾಕಿಸ್ತಾನದ (Pakistan) ವಿರುದ್ಧ ಭಾರತ (India) ಯಾವ ಕ್ಷಣದಲ್ಲಿ ಏನು ಬೇಕಾದ್ರೂ ಯಾವ ನಿರ್ಧಾರ ತೆಗೆದುಕೊಳ್ಳಳ್ಳಬಹುದು. ಅಥದ್ದೊಂದು ಸನ್ನಿವೇಶವೇ ಸೃಷ್ಟಿಯಾಗಿದೆ. ಹೀಗಾಗಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಬ್ಯಾಕ್ ಟು ಬ್ಯಾಕ್ ಸಭೆಗಳನ್ನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು, ಸಲಹೆಗಾರ ಅಜಿತ್ ಧೋವಲ್ ಜೊತೆ ನಿರಂತರ ಮಾತುಕತೆ ನಡೆಸಿದ್ದಾರೆ. ಇದರ ಮಧ್ಯೆ ಕೇಂದ್ರ ಗೃಹ ಇಲಾಖೆ ದೇಶದ ಎಲ್ಲಾ ರಾಜ್ಯಗಳಿಗೆ ನಾಳೆ (ಮೇ 07) ಮಾಕ್ ಡ್ರಿಲ್ (Mock Drill) ಮಾಡುವಂತೆ ಸಂದೇಶ ರವಾನಿಸಿದೆ. ಇನ್ನು ಬೆಂಗಳೂರಿನ 35 ಕಡೆ ಸೈರನ್ ಇದ್ದು, ಇವುಗಳ ಪೈಕಿ 32 ಕಡೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್ ಕಾರ್ಯನಿರ್ವಹಿಸುವ ಕಡೆಗಳಲ್ಲಿ ನಾಳೆ ಮಾಕ್ ಡ್ರಿಲ್ (ಅಣಕು ಕವಾಯತು) ನಡೆಯಲಿದೆ.
ಬೆಂಗಳೂರು ನಗರದ 32 ಕಡೆ ಮಾಕ್ ಡ್ರಿಲ್
ಬೆಂಗಳೂರಿನ 35 ಕಡೆ ಸೈರನ್ ಇದ್ದು, 32 ಕಡೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ ಸೈರನ್ ಕಾರ್ಯ ನಿರ್ವಹಿಸುವ ಕಡೆ ಮಾಕ್ಡ್ರಿಲ್ ನಡೆಯಲಿದೆ. ಇಂಡಿಯನ್ ಇನ್ಸ್ಟಿಟ್ಯೂಟ್, ಸಿಕ್ಯುಎಎಲ್, ಇಎಸ್ಐ ಆಸ್ಪತ್ರೆ, ಎನ್ಎಎಲ್, ಬೆಂಗಳೂರು ಡೈರಿ, ಕೆನರಾ ಬ್ಯಾಂಕ್, SRS ಪೀಣ್ಯ, ವಿವಿ ಟವರ್ ಅಗ್ನಿಶಾಮಕ ಠಾಣೆ, ಜ್ಞಾನಭಾರತಿ ಅಗ್ನಿಶಾಮಕ ಠಾಣೆ, ಥಣಿಸಂದ್ರ ಅಗ್ನಿಶಾಮಕ ಠಾಣೆ, ಬಾಣಸವಾಡಿ ಅಗ್ನಿಶಾಮಕ ಠಾಣೆ, ಯಶವಂತಪುರ ಅಗ್ನಿಶಾಮಕ ಠಾಣೆ, ಬನಶಂಕರಿ ಅಗ್ನಿಶಾಮಕ ಠಾಣೆ, ರಾಜಾಜಿನಗರ ಅಗ್ನಿಶಾಮಕ ಠಾಣೆ, ಚಾಮರಾಜಪೇಟೆ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆ, ಹಲಸೂರು ಗೇಟ್ ಠಾಣೆ, ಹಲಸೂರು ಪೊಲೀಸ್ ಠಾಣೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ, ಕಾಮಾಕ್ಷಿಪಾಳ್ಯ ಠಾಣೆ, ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆ, ವೈಯಾಲಿಕಾವಲ್ ಠಾಣೆ, ಹಲಸೂರು ಗೃಹರಕ್ಷಕದಳ ಕೇಂದ್ರ ಕಚೇರಿ, ಪೀಣ್ಯ ಅಗ್ನಿಶಾಮಕ ಠಾಣೆ, ಬೆಂಗಳೂರು ಗ್ರಾಮಾಂತರ ಗೃಹರಕ್ಷಕದಳ ಕಚೇರಿ, ಬಾಗಲೂರು ಅಗ್ನಿಶಾಮಕ ಠಾಣೆ, ಅಂಜನಾಪುರ ಅಗ್ನಿಶಾಮಕ ಠಾಣೆ, ITPL ಅಗ್ನಿಶಾಮಕ ಠಾಣೆ, ಸರ್ಜಾಪುರ ಅಗ್ನಿಶಾಮಕ ಠಾಣೆ, ಎಲೆಕ್ಟ್ರಾನಿಕ್ ಅಗ್ನಿಶಾಮಕ ಠಾಣೆ ಮತ್ತು ಡೈರಿ ಸರ್ಕಲ್ ಅಗ್ನಿಶಾಮಕ ಠಾಣೆಯಲ್ಲಿ ನಡೆಯಲಿದೆ.
ನಾಳೆಯ ಮಾಕ್ ಡ್ರಿಲ್ ನಲ್ಲಿ ಸೈರನ್ ಹಾಕಲಾಗುತ್ತದೆ. ಮೂರು ಹಂತದಲ್ಲಿ ಸೈರನ್ ಆನ್ ಮಾಡಲಾಗುತ್ತದೆ. ಸೈರನ್ ಸಹ ಮೂರು ರೀತಿಯ ಶಬ್ದ ಮಾಡುತ್ತದೆ. ಈ ಸೈರನ್ ಸುಮಾರು 3ಕಿ.ಮೀ. ವ್ಯಾಪ್ತಿಯವ ವರೆಗೂ ಕೇಳತ್ತೆ.
ಇದನ್ನೂ ಓದಿ: ಕರ್ನಾಟಕದ ಈ ಮೂರು ಜಿಲ್ಲೆಗಳಲ್ಲಿ ನಾಳೆ ಮಾಕ್ ಡ್ರಿಲ್ಗೆ ನಿರ್ಧಾರ
54 ವರ್ಷದ ಬಳಿಕ ಮಾಕ್ ಡ್ರಿಲ್!
1971ರ ನಂತರ ಅಂದ್ರೆ 54 ವರ್ಷದ ಬಳಿಕ ದೇಶದಲ್ಲಿ ರಕ್ಷಣಾ ಮಾಕ್ ಡ್ರಿಲ್ ನಡೆಸಲು ಕೇಂದ್ರ ಸರ್ಕಾರ ಸೂಚನೆ ನೀಡಿರುವುದು ವಿಶೇಷವಾಗಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದಿಂದ ಉತ್ತರ ಭಾರತದ ರಾಜ್ಯಗಳಿಗೆ ಈ ಸೂಚನೆ ನೀಡಲಾಗಿದೆ. 1971ರಲ್ಲಿ ಭಾರತ, ಪಾಕಿಸ್ತಾನ ನಡುವೆ ಯುದ್ಧ ನಡೆದಾಗ ಈ ರಕ್ಷಣಾ ಮಾಕ್ ಡ್ರಿಲ್ ನಡೆಸಲಾಗಿತ್ತು. ಆದಾದ ಬಳಿಕ ಎಂದೂ ಕೂಡ ದೇಶದಲ್ಲಿ ರಕ್ಷಣಾ ಮಾಕ್ ಡ್ರಿಲ್ ನಡೆಸಿಲ್ಲ. ಕಾರ್ಗಿಲ್ ಯುದ್ಧದ ವೇಳೆಯೂ ಮಾಕ್ ಡ್ರಿಲ್ ನಡೆಸಿರಲಿಲ್ಲ. ಪಹಲ್ಗಾಮ್ ನರಮೇಧದ ಬಳಿಕ ಭಾರತದ ಪ್ರತೀಕಾರದ ದಾಳಿಯ ಬಳಿಕ ಪಾಕ್ ಕೂಡ ಪ್ರತಿದಾಳಿ ನಡೆಸುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ರಕ್ಷಣಾ ಮಾಕ್ ಡ್ರಿಲ್ಗೆ ಕೇಂದ್ರದಿಂದ ಸೂಚನೆ ಸಿಕ್ಕಿದೆ.
ಏನಿದು ಮಾಕ್ ಡ್ರಿಲ್ ಹೇಗೆ?
ಈ ಮಾಕ್ ಡ್ರೀಲ್ ಮಾಡುವ ಉದ್ದೇಶ ಎನ್ನೆಂದು ನೋಡುವುದ್ದಾರೆ, ಯುದ್ಧದ ವೇಳೆ ದಾಳೆ ನಡೆದ್ರೆ ನಮ್ಮ ರಕ್ಷಣೆ ಹೇಗೆ ಮಾಡಿಕೊಳ್ಳಬೇಕು? ಸೈರನ್ ಆದ ವೇಳೆಯಲ್ಲಿ ನಾವು ಏನ ಮಾಡಬೇಕು? ಸುರಕ್ಷಿತ ಸ್ಥಳಕ್ಕೆ ಹೇಗೆ ಹೋಗ ಬೇಕು ಯಾವ ವಿಧಾನ. ಸಾವು ನೋವು ಸಂಭವಿಸಿದ್ರೆ ನಮ್ಮ ಚಿಕಿತ್ಸೆ ಹೇಗೆ ಮಾಡಿಕೊಳ್ಳಬೇಕು. ಆಸ್ಪತ್ರೆಯಲ್ಲಿ ಇರುವ ರೋಗಿಗಳು ಹೇಗೆ ಸುರಕ್ಷತವಾಗಿರಬಹುದು? ರಕ್ತನಿಧಿಗಳಲ್ಲಿ ಹಾಗೂ ಆಸ್ಪತ್ರೆಯಲ್ಲಿ ಅಗತ್ಯ ಸಲಕರಣೆ ಚೆಕ್ ಮಾಡುವುದು. ಬೆಡ್, ಮಾತ್ರೆಗಳು, ಔಷಧಿಗಳನ್ನು ಹೇಗೆ ಶೇಕರಣೆ ಮಾಡುವುದು ಎಂದು ನೋಡುವುದು. ಒಂದು ವೇಳೆ ದಾಳಿ ನಡೆದರೆ ಸುರಕ್ಷಿತ ಸ್ಥಳಕ್ಕೆ ಹೇಗೆ ಬೇಗ ಹೋಗಬೇಕು ಎಂದು ನೋಡುವುದು.
ಮಾಕ್ ಡ್ರಿಲ್ ಆದ್ರೆ ಯುದ್ದ ಗ್ಯಾರಂಟಿ ಅಂತಲೇ ಅರ್ಥ. ಇದು ಯುದ್ದದ ಕೊನೆಯ ಪೂರ್ವ ತಯಾರಿಯಾಗಿರುತ್ತೆ ಪ್ರಧಾನಿ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಮಾಕ್ ಡ್ರಿಲ್ ಆಗಿದೆ ಅಂತ ನಾಳೆನೇ ಯುದ್ದ ಘೋಷಣೆ ಆಗಲ್ಲ. ಆದ್ರೆ ಕೆಲವೇ ದಿನಗಳಲ್ಲಿ ದಾಳಿ ಆಗುವುದು ಗ್ಯಾರಂಟಿ. ಮಾಕ್ ಡ್ರಿಲ್ ಸಮಯದಲ್ಲಿ ಯುದ್ದದ ಪೂರ್ವ ತಯಾರಿ ಬಗ್ಗೆ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಈ ಸಮಯದಲ್ಲಿ ಜನರು ದೇಶದ ಪರ ನಿಲ್ಲಬೇಕು. ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸುವಂತೆ ನಡೆದುಕೊಳ್ಳಬೇಕು ಎನ್ನವುದು ಇದರ ಅರ್ಥ.
ಮಾಕ್ ಡ್ರಿಲ್ ವೇಳೆ ಏನೆಲ್ಲ ನಡೆಯುತ್ತೆ..?
ಅಣಕು ಕವಾಯತಿನ ಅಡಿಯಲ್ಲಿ ವಾಯುದಾಳಿ ಎಚ್ಚರಿಕೆ ಸೈರನ್ಗಳನ್ನು ನಿರ್ವಹಿಸಲಾಗುತ್ತದೆ. ಇದು ಪ್ರಮುಖ ಅಪಾಯ ಮತ್ತು ಶತ್ರು ಚಟುವಟಿಕೆಗಳ ಕುರಿತು ಎಚ್ಚರಿಕೆಯನ್ನು ನೀಡುವುದಕ್ಕೆ ಸಂಬಂಧಿಸಿದ ಒಂದು ಹಂತವಾಗಿದೆ. ಸಂಭವನೀಯ ದಾಳಿಗಳ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ನಾಗರಿಕ ರಕ್ಷಣಾ ತಂತ್ರಗಳಲ್ಲಿ ತರಬೇತಿ ನೀಡಲಾಗುವುದು. ಅಪಘಾತ ತಡೆಗಟ್ಟುವ ವ್ಯವಸ್ಥೆಗಳನ್ನು ಮಾಡಲಾಗುವುದು. ಇದರ ಅಡಿಯಲ್ಲಿ, ಶತ್ರುಗಳ ವೈಮಾನಿಕ ಕಣ್ಗಾವಲು ಅಥವಾ ದಾಳಿಯಿಂದ ನಗರಗಳು ಮತ್ತು ರಚನೆಗಳನ್ನು ಮರೆಮಾಡಲು ತುರ್ತು ಪ್ರೋಟೋಕಾಲ್ಗಳನ್ನು ಅಳವಡಿಸಲಾಗುತ್ತದೆ. ನಾಳೆ ಅಂದರೆ ಮೇ 7 ರಂದು ಯುದ್ಧದ ಸೈರನ್ ಮೊಳಗಿಸಲಾಗುತ್ತದೆ ಮತ್ತು ಅಣಕು ಕವಾಯತುಗಳನ್ನು ನಡೆಸಲಾಗುತ್ತದೆ.
- ಯುದ್ಧ ನೋಡದ ಇಂದಿನ ಪೀಳಿಗೆಗೆ ಶತ್ರುಗಳಿಂದ ಸ್ವಯಂ ರಕ್ಷಣೆ ಸಂಬಂಧ ಕಾರ್ಯಕ್ರಮ.
- ಸುಕ್ಷ್ಮ ಪ್ರದೇಶಗಳಲ್ಲಿ ಶತ್ರುಗಳಿಂದ ವಾಯು ದಾಳಿ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಯುದಾಳಿಯ ಸೈರನ್ ಮೊಳಗಿಸಿ ಮಾಹಿತಿ ನೀಡುವುದು.
- ಪ್ರತಿಕೂಲ ದಾಳಿ ವೇಳೆ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ತರಬೇತಿ ನೀಡಲಾಗುತ್ತದೆ. ಪ್ರಸ್ತುತ ಇರುವ ಪೀಳಿಗೆ ಯುದ್ಧವನ್ನು ನೋಡಿಲ್ಲ. ಹೀಗಾಗಿ ಇದು ತುಂಬಾನೇ ಮುಖ್ಯವಾಗಿದೆ.
- ವಾಯುದಾಳಿ ಸಂದರ್ಭದಲ್ಲಿ ನಗರ ಮತ್ತು ಹಳ್ಳಿಗಳಲ್ಲಿ ವಿದ್ಯುತ್ ದೀಪ್ ಸಂಪೂರ್ಣ ಬಂದ್ ಆಗಿರಲಿದೆ. ರಾತ್ರಿ ವಾಹನ ಸಂಚಾರ ಸ್ಥಗಿತವಾಗಿರಲಿದೆ. ವೈರಿಗಳಿಗೆ ಜನಸಂಖ್ಯೆ ವಾಸಿಸುವ ಗುರುತು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಅಂತೆಯೇ 244 ಜಿಲ್ಲೆಗಳಲ್ಲಿ ವಿದ್ಯುತ್ ದೀಪ್ ಬಂದ್ ಆಗಲಿದೆ.
- ಪ್ರಮುಖ ಸ್ಥಾವರಗಳ ಮರೆಮಾಚುವಿಕೆ: ದೇಶದ ಆಸ್ತಿ ಆಗಿರುವ ಪ್ರಮುಖ ಸ್ಥಾವರಗಳನ್ನು ಶತ್ರುಗಳಿಂದ ಬಚ್ಚಿಟ್ಟುಕೊಳ್ಳುವುದು ಮುಖ್ಯವಾಗಿದೆ. ಅವುಗಳ ಮೇಲೆ ದಾಳಿ ಆಗದಂತೆ ಮರೆಮಾಚಿಕೊಳ್ಳಬೇಕಾದ ಅಗತ್ಯ ಇರುತ್ತದೆ. ಹೀಗಾಗಿ ಈ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ.
- ರೆಸ್ಕ್ಯೂ ಆಪರೇಷನ್ ಬಗ್ಗೆ ತರಬೇತಿ: ದುರ್ಗಮ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದವರನ್ನು ಹೇಗೆ ರಕ್ಷಣೆ ಮಾಡಬೇಕು ಅನ್ನೋದ್ರ ಬಗ್ಗೆ ಅಣಕು ಕಾರ್ಯಾಚರಣೆ ನಡೆಸಲಾಗುತ್ತದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:55 pm, Tue, 6 May 25