ಮುಂಗಾರು ಮಳೆ ಅಭಾವ: ಕರ್ನಾಟಕದ ಬರೋಬ್ಬರಿ 101 ತಾಲೂಕುಗಳಲ್ಲಿ ಬರದ ಛಾಯೆ!
ರಾಜ್ಯದಲ್ಲಿ ಮುಂಗಾರು ಮಳೆಯ ಅಭಾವದಿಂದಾಗಿ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹವಾಗಿವೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ತಿಳಿಸಿದ್ದು, ಕೇಂದ್ರದಿಂದ ಎನ್ಡಿಆರ್ಎಫ್ ಪರಿಹಾರಕ್ಕಾಗಿ ಮನವಿ ಮಾಡಲು ಸರ್ಕಾರ ನಿರ್ಧರಿಸಿದೆ. ಬರ ಹಿನ್ನೆಲೆ ಜನರು ಗುಳೆ ಹೋಗುತ್ತಿದ್ದಾರೆ ಎಂಬ ವರದಿ ಇದ್ದು, ಅಂತವರನ್ನು ತಡೆದು ಮನವೊಲಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದವರು ತಿಳಿಸಿದ್ದಾರೆ.

ಬೆಂಗಳೂರು, ಆಗಸ್ಟ್ 27: ಕರ್ನಾಟಕದಲ್ಲಿ ಮುಂಗಾರು ಮಳೆಯ ತೀವ್ರ ಅಭಾವದ ಹಿನ್ನೆಲೆ 101 ತಾಲೂಕುಗಳು ಬರಪೀಡಿತ ಎಂದು ಘೋಷಿಸಲು ಅರ್ಹವಾಗಿವೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ. 16ನೇ ಹಣಕಾಸು ಆಯೋಗದ ಶಿಫಾರಸಿನ ಎನ್ಡಿಆರ್ಎಫ್ ಹಣ ಬಿಡುಗಡೆ ಆಗಿಲ್ಲ. ಕೇಂದ್ರ ಸರಕಾರ 1,239 ಕೋಟಿ ರೂ. ಕೊಡಬೇಕು. ಮೊದಲ ಕಂತು 450 ಕೋಟಿ ಬಿಡುಗಡೆ ಮಾಡಬೇಕಿದ್ದು, ನಾವು ಎನ್ಡಿಆರ್ಎಫ್ ಹಣದ ನಿರೀಕ್ಷೆಯಲ್ಲಿದ್ದೇವೆ. ಬರ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗಲು ತೀರ್ಮಾನಿಸಿದ್ದು, ಕೇಂದ್ರ ಸಚಿವರನ್ನ ಭೇಟಿ ಮಾಡಿ ಮನವಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.
ಯಾವೆಲ್ಲ ತಾಲೂಕುಗಳಲ್ಲಿ ಬರ?
ಆನೇಕಲ್, ಬೆಂಗಳೂರು ಉತ್ತರ, ಬೆಂಗಳೂರು ಪೂರ್ವ, ಯಲಹಂಕ, ನೆಲಮಂಗಲ, ಹೊಸಕೋಟೆ, ಕೋಲಾರ, ಮಾಲೂರು, ಮುಳಬಾಗಿಲು, ರಾಮನಗರ, ಮಾಗಡಿ, ಬಂಗಾರಪೇಟೆ, ಶ್ರೀನಿವಾಸ್ಪುರ, ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶಿಡ್ಲಘಟ್ಟ, ಚೇಳೂರು, ಮಂಚೇನಹಳ್ಳಿ, ತುಮಕೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಶಿರಾ, ಕುಣಿಗಲ್, ಮಧುಗಿರಿ, ಪಾವಗಡ, ತುಮಕೂರು, ಚಳ್ಳಕೆರೆ, ಹಿರಿಯೂರು, ಹೊಸದುರ್ಗ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಬಾಗಲಕೋಟೆ, ಬೀಳಗಿ, ಜಮಖಂಡಿ, ಗುಳೇದಗುಡ್ಡ, ಇಳಕಲ್, ವಿಜಯಪುರ, ನಿಡಗುಂದಿ, ಕೊಲ್ಹಾರ್, ಗಜೇಂದ್ರಗಢ, ಅರಕಲಗೂಡು, ಹಾಸನ, ಅರಸೀಕರೆ, ಚನ್ನರಾಯಪಟ್ಟಣ, ಹೊಳೆನರಸೀಪುರ, ಅಜ್ಜಂಪುರ, ಶಹಾಪುರ, ಹೊಸಪೇಟೆ, ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪ್ಪನಹಳ್ಳಿ, ಲಿಂಗಸುಗೂರು, ಪಾಂಡವಪುರ, ಚಿಕ್ಕಮಗಳೂರು , ಕೊಪ್ಪ, ಎನ್. ಆರ್.ಪುರ, ತರೀಕೆರೆ, ಮುಂಡಗೋಡು, ಯಲ್ಲಾಪುರ ಸೇರಿ ಒಟ್ಟು 101 ತಾಲೂಕುಗಳು ಬರಪೀಡಿತ ಎಂಬುದು ಕಂಡುಬಂದಿದೆ.
ಇದನ್ನೂ ಓದಿ: ಕೆಆರ್ಎಸ್ ಡ್ಯಾಂಗೆ ಭರ್ಜರಿ ಒಳಹರಿವು, ಜಲಾಶಯಗಳ ನೀರಿನ ಮಟ್ಟದ ವಿವರ
‘ಗುಳೆ ಹೋಗುವುದನ್ನು ತಡೆಯಲು ಪ್ರಯತ್ನ’
ಬರ ಹಿನ್ನೆಲೆ ಜನರು ಗುಳೆ ಹೋಗುತ್ತಿದ್ದಾರೆ ಎಂಬ ವರದಿ ಇದೆ. ಹೀಗಾಗಿ ಗುಳೆ ಹೋಗುವವರನ್ನು ತಡೆದು ಮನವೊಲಿಸಲು ಸರ್ಕಾರ ಪ್ರಯತ್ನಿಸಲಿದ್ದು, ಬಸ್ ಮತ್ತು ರೈಲ್ವೆ ನಿಲ್ದಾಣಗಳಿಗೆ ಅಧಿಕಾರಿಗಳನ್ನ ಕಳಿಸ್ತೇವೆ. ವಿಬಿಜಿ ರಾಮ್ ಜಿ ಯೋಜನೆ ಬಳಸಿಕೊಳ್ಳುವಂತೆ ಡಿಸಿಗಳಿಗೆ ಸೂಚನೆ ನೀಡಲಾಗಿದ್ದು, ವಿಧಾನಸಭಾ ಕ್ಷೇತ್ರಗಳಿಗೆ 189 ಕೋಟಿ ಅನುದಾನ ಕೊಟ್ಟಿದ್ದೇವೆ. ನೀರು ಇರುವ ಕಡೆ ಬಿತ್ತಲು ಮೇವು ಬೀಜ ಪೂರೈಕೆ ಮಾಡಿದ್ದೇವೆ. ಬರ ನಿರ್ವಹಣೆಗೆ ಒಟ್ಟು 635 ಕೋಟಿ ರೂ. ಮೀಸಲಿಟ್ಟಿದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಪರಮೇಶ್ವರ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:22 pm, Thu, 27 August 26




