ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್

ಬೆಂಗಳೂರಿನ ಕೆಂಗೇರಿ ಪೊಲೀಸರು ಮಲ್ಟಿ ಟ್ಯಾಲೆಂಟ್​ನನ್ನು ಬಂಧಿಸಿದ್ದಾರೆ. ಬೈಕ್ ಕಳ್ಳತನ ಪ್ರಕರಣದ ತನಿಖೆ ವೇಳೆ ಈತ ಗ್ಯಾಸ್ ಸಿಲಿಂಡರ್, ವಾಹನ ಬ್ಯಾಟರಿ ಹಾಗೂ ಆಟೋ ರಿಕ್ಷಾ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಆತ ಕಳ್ಳತನ ಮಾಡಿದ್ದ 25 ಬೈಕ್‌ಗಳು, 12 ಸಿಲಿಂಡರ್‌ಗಳು ಸೇರಿ ಅನೇಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಒಬ್ಬ ಖದೀಮ ಮೂರು ಮಾದರಿಯಲ್ಲಿ ಕಳ್ಳತನ: ಮಲ್ಟಿ ಟ್ಯಾಲೆಂಟೆಡ್ ಕಳ್ಳ ಕೊನೆಗೂ ಅರೆಸ್ಟ್
ಬಂಧಿತ ಕಳ್ಳ
Image Credit source: tv9 kannada
Edited By:

Updated on: May 21, 2026 | 4:14 PM

ಬೆಂಗಳೂರು, ಮೇ 21: ಒಬ್ಬನೇ ಕಳ್ಳ (Thief), ಆದರೆ ಕಳ್ಳತನದ ಶೈಲಿ ಮಾತ್ರ ವಿಭಿನ್ನ. ಬೈಕ್ ಸಿಕ್ಕರೆ ಬೈಕ್, ಗ್ಯಾಸ್ ಸಿಲಿಂಡರ್ ಸಿಕ್ಕರೆ ಸಿಲಿಂಡರ್, ಅಷ್ಟೇ ಏಕೆ ಕಣ್ಣಿಗೆ ಬಿದ್ದ ವಾಹನಗಳ ಬ್ಯಾಟರಿಯನ್ನೂ ಬಿಡದ ಮಲ್ಟಿ ಟ್ಯಾಲೆಂಟ್​​ ಕಳ್ಳನೊಬ್ಬನನ್ನು ಬೆಂಗಳೂರಿನ ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ (arrest). ಬಂಧಿತ ಆರೋಪಿಯನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಸದ್ಯ ಬಂಧಿತ ಆರೋಪಿಯಿಂದ ಒಟ್ಟು 25 ಬೈಕ್​ಗಳನ್ನು ವಶಕ್ಕೆ ಪಡೆಯಲಾಗಿದೆ.

ಮುಖ್ಯಾಂಶಗಳು

  • ಒಬ್ಬನೇ ಕಳ್ಳನಿಂದ ಮೂರು ಮಾದರಿಯಲ್ಲಿ ಕಳ್ಳತನ
  • ವಿಚಾರಣೆ ವೇಳೆ ಪೊಲೀಸರೇ ಶಾಕ್​​!
  • ಬೆಂಗಳೂರಿನ ಕೆಂಗೇರಿ ಪೊಲೀಸರಿಂದ ಮಲ್ಟಿ ಟ್ಯಾಲೆಂಟ್​​ ಕಳ್ಳನ ಅರೆಸ್ಟ್

ಟ್ವಿಸ್ಟ್ ಕೊಟ್ಟ ವಿಚಾರಣೆ!

ಆರಂಭದಲ್ಲಿ ಕೇವಲ ಬೈಕ್ ಕಳ್ಳತನದ ಆರೋಪದ ಮೇಲೆ ಪೊಲೀಸರು ಅಭಿಷೇಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಆದರೆ, ತನಿಖೆ ತೀವ್ರಗೊಂಡಂತೆ ಈತ ಕೇವಲ ಬೈಕ್ ಕಳ್ಳತನಕ್ಕೆ ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಮೂರು ಭಿನ್ನ ಮಾದರಿಗಳಲ್ಲಿ ಕಳ್ಳತನ ನಡೆಸುತ್ತಿದ್ದ ಖತರ್ನಾಕ್ ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

ಹೈಟೆಕ್ ಶೈಲಿಯಲ್ಲಿ ಬೈಕ್ ಮಾರಾಟ

ಆರೋಪಿ ಅಭಿಷೇಕ್ ಕೇವಲ ಬೈಕ್‌ಗಳನ್ನು ಕಳ್ಳತನ ಮಾಡುತ್ತಿರಲಿಲ್ಲ, ಬದಲಿಗೆ ಅವುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡುತ್ತಿದ್ದ. ಬಳಿಕ ಸಾರ್ವಜನಿಕರನ್ನು ನಂಬಿಸಲು ಒಎಲ್‌ಎಕ್ಸ್ ಹಾಗೂ ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಬೈಕ್‌ಗಳನ್ನು ಸುಲಭವಾಗಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ.

ಸಿಲಿಂಡರ್ ಹಾಗೂ ವಾಹನಗಳ ಬ್ಯಾಟರಿಗೂ ಕನ್ನ

ಬೈಕ್ ಕಳ್ಳತನದ ಜೊತೆಗೆ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್​​ ಕಳ್ಳತನ ಮಾಡುತ್ತಿದ್ದ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಯಿಂದ 12 ಗ್ಯಾಸ್ ಸಿಲಿಂಡರ್‌ಗಳನ್ನು ಜಪ್ತಿ ಮಾಡಲಾಗಿದೆ. ಇದಿಷ್ಟೇ ಅಲ್ಲದೆ, ರಸ್ತೆ ಬದಿ ನಿಲ್ಲಿಸುವ ವಾಹನಗಳ ಬ್ಯಾಟರಿಗಳನ್ನೂ ಈತ ಕಳ್ಳತನ ಮಾಡುತ್ತಿದ್ದ. ಒಂದು ದೊಡ್ಡ ವಾಹನದ ಬ್ಯಾಟರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಫ್ರೀಯಾಗಿ ನೆಟ್​​ಫ್ಲಿಕ್ಸ್​​ ಪಡೆಯಲು ಹೋಗಿ 1 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ: ಆಗಿದ್ದೇನು?

ಇನ್ನು ಈತ ಆಟೋಗಳನ್ನು ಸಹ ಕಳ್ಳತನ ಮಾಡುತ್ತಿದ್ದ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಕೆಂಗೇರಿ ಪೊಲೀಸರು, ಒಂದು ಆಟೋವನ್ನು ಸಹ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆರೋಪಿಯನ್ನು ಕಂಬಿ ಹಿಂದೆ ತಳ್ಳಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಜ್ವಲ್​ ಕುಮಾರ್ ಎನ್​ ವೈ
Follow Us