AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತನಿಖಾಧಿಕಾರಿ ಎದುರು ಕಣ್ಣೀರು ಹಾಕಿದ ಸಂಗೀತ ನಿರ್ದೇಶಕ ಹಂಸಲೇಖ

ಯಾವುದೇ ಧರ್ಮ ಅಥವಾ ಜಾತಿಯನ್ನು ನಿಂದಿಸುವ ಉದ್ದೇಶ ನನಗೆ ಇರಲಿಲ್ಲ ಎಂದು ಹಂಸಲೇಖ ಪೊಲೀಸರ ಎದುರು ಹೇಳಿದರು.

ತನಿಖಾಧಿಕಾರಿ ಎದುರು ಕಣ್ಣೀರು ಹಾಕಿದ ಸಂಗೀತ ನಿರ್ದೇಶಕ ಹಂಸಲೇಖ
ಪ್ರಚಾರಕ್ಕಾಗಿ ಸಾಕಷ್ಟು ಜನರು ಹೀಗೆ ಮಾಡುತ್ತಾರೆ; ಶಿಶುಪಾಲನಿಗೆ ಕೃಷ್ಣನೇ ತಕ್ಕಶಾಸ್ತಿ ಮಾಡಿದ್ದ- ಹಂಸಲೇಖ ಟೀಕೆಗೆ ವಿಶ್ವಪ್ರಸನ್ನ ತೀರ್ಥಶ್ರೀ ಪ್ರತ್ಯುತ್ತರ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Nov 25, 2021 | 4:39 PM

Share

ಬೆಂಗಳೂರು: ಪೇಜಾವರ ಮಠದ ದಿವಂಗತ ಸ್ವಾಮೀಜಿ ವಿಶ್ವೇಶ ತೀರ್ಥರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಬಸವನಗುಡಿ ಠಾಣೆ ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ತಾವು ನೀಡಿದ ಹೇಳಿಕೆಯ ಬಗ್ಗೆ ಹಂಸಲೇಖ ಬೇಸರ ವ್ಯಕ್ತಪಡಿಸಿದರು. ಮಾತ್ರವಲ್ಲದೇ, ತನಿಖಾಧಿಕಾರಿ ಮುಂದೆ ಕಣ್ಣೀರು ಹಾಕಿದರು ಎಂದು ಮೂಲಗಳು ಹೇಳಿವೆ. ನಾನು ಏಕೆ ಹಾಗೆ ಹೇಳಿದೆನೋ ಗೊತ್ತಿಲ್ಲ. ನನಗೆ ಅಂಥ ಯಾವ ಉದ್ದೇಶವೂ ಇರಲಿಲ್ಲ. ಮಾತಿನ ಭರದಲ್ಲಿ ಹೇಳಿದೆ. ನನ್ನ ಹೇಳಿಕೆಗೆ ನನ್ನ ಹೆಂಡತಿಯೇ ಬೇಸರ ವ್ಯಕ್ತಪಡಿಸಿದರು. ನನ್ನ ಜೀವನದಲ್ಲಿ ಎಂದೂ ಹೀಗೆ ಮಾಡಿಕೊಂಡಿರಲಿಲ್ಲ. ನಾನು ಅಂಥ ಹೇಳಿಕೆ ನೀಡಿದ್ದರಿಂದ ತಪ್ಪಾಗಿದೆ ಎಂದು ಹಂಸಲೇಖ ಹೇಳಿದ್ದಾರೆ. ಯಾವುದೇ ಧರ್ಮ ಅಥವಾ ಜಾತಿಯನ್ನು ನಿಂದಿಸುವ ಉದ್ದೇಶ ನನಗೆ ಇರಲಿಲ್ಲ. ಈ ಹೇಳಿಕೆಯಿಂದಾಗಿ ನನ್ನ ವೃತ್ತಿಯಲ್ಲಿಯೂ ಹಿನ್ನಡೆ ಉಂಟಾಗಿದೆ. ತುಂಬಾ ನೋವು ಅನುಭವಿಸಿದ್ದೇನೆ ಎಂದು ಹಂಸಲೇಖ ತನಿಖಾಧಿಕಾರಿ ಎದುರು ಕಣ್ಣೀರು ಹಾಕಿದರು. ನಂತರ ಐದು ನಿಮಿಷ ಸುಧಾರಿಸಿಕೊಂಡು ಕಣ್ಣೊರೆಸಿಕೊಂಡು ಸಮಾಧಾನ ಮಾಡಿಕೊಂಡರು ಎಂದು ಮೂಲಗಳು ಹೇಳಿವೆ.

ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಹಂಸಲೇಖ, ಮೇಲ್ಜಾತಿ ಹಾಗೂ ಕೀಳುಜಾತಿ, ಜಾತಿತಾರತಮ್ಯ, ಜಾತಿ ಪಿಡುಗು ವಿಚಾರವಾಗಿ ಮಾತನಾಡುತ್ತಾ ಅವಹೇಳನಕಾರಿ ವಾಕ್ಯ ಪ್ರಯೋಗಿಸಿದ್ದರು. ಬಳಿಕ ಅಂಬೇಡ್ಕರ್ ವಿಚಾರವನ್ನು ಕೂಡ ಉಲ್ಲೇಖಿಸಿದ್ದರು. ಇಲ್ಲಿ ಪೇಜಾವರ ಶ್ರೀಗಳ ಬಗ್ಗೆ ಹಂಸಲೇಖ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಫೇಸ್ಬುಕ್​ನಲ್ಲಿ ಜನರು ವಿವಿಧ ರೀತಿಯ ಕಮೆಂಟ್​ಗಳನ್ನು ಮಾಡಿ ವಿಡಿಯೋ ಹಂಚಿಕೊಂಡಿದ್ದರು.

ಈ ವಿವಾದವನ್ನು ಉದ್ದೇಶಿಸಿ ಕ್ಷಮೆ ಕೇಳುವ ಮೂಲಕ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ಗೊತ್ತಿದೆ. ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ, ತಪ್ಪಾಗಿದೆ. ಅಸ್ಪ್ರಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದ್ದರು.

ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು, ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡ್ತೇನೆ ಎಂದು ತಿಳಿಸಿದ್ದರು.

ಹಂಸಲೇಖ ಹೇಳಿಕೆಯನ್ನು ಖಂಡಿಸಿದ್ದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಹಂಸಲೇಖ ನನ್ನ ಗುರುಗಳನ್ನು ಟೀಕೆ ಮಾಡಿರಬಹುದು. ಹಂಸಲೇಖ ಬಾಯಲ್ಲಿ ಇಂತಹ ಮಾತು ಬರಬಾರದಿತ್ತು. ಸಮಾಜ ಅವರನ್ನು ಎತ್ತರದಲ್ಲಿ ಇರಿಸಿ ಗೌರವಿಸುತ್ತದೆ. ಪ್ರಚಾರಕ್ಕಾಗಿ ಸಾಕಷ್ಟು ಜನರು ಹೀಗೆ ಮಾಡುತ್ತಾರೆ. ಹಂಸಲೇಖ ಅವರಿಗೆ ಇದರಿಂದ ಪ್ರಚಾರ ಬೇಕಾಗಿರಲಿಲ್ಲ. ನನ್ನ ಗುರುಗಳು ಎಲ್ಲರ ಹೃದಯದಲ್ಲಿ ಕಷ್ಣನನ್ನು ಕಂಡವರು. ಆದ್ದರಿಂದಲೇ ಅವರು ದಲಿತರ ಕೇರಿಗೂ (Pejavara Sri Vishvesha Tirtha) ಹೋಗುತ್ತಿದ್ದರು. ನೆರೆ ಹಾವಳಿ, ಭೂಕಂಪ ಆದಾಗಲೂ ಭೇಟಿ ನೀಡುತ್ತಿದ್ದರು. ಸಮಾಜದ ಎಲ್ಲರ ಉದ್ಧಾರ ವಿಶ್ವೇಶತೀರ್ಥರು ಬಯಸಿದ್ದರು. ನಮ್ಮ ಉದ್ದೇಶ ಪ್ರಾಮಾಣಿಕವಾಗಿದೆ ಎಂದು ಹೇಳಿದ್ದರು.

ಪೇಜಾವವರ ಬಗ್ಗೆ ಹಂಸಲೇಖ ಹೇಳಿಕೆಯನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾ ಮತ್ತು ಪೇಜಾವರ ಮಠದ ಭಕ್ತರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಹಂಸಲೇಖ ಹೇಳಿಕೆಯ ಪರ-ವಿರೋಧ ಚರ್ಚೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗರಿಗೆದರಿದ್ದವು. ಹಲವು ಕನ್ನಡಪರ ಸಂಘಟನೆಗಳು ಹಂಸಲೇಖ ಪರವಾಗಿ ಬೀದಿಗಿಳಿದು ಬೆಂಬಲ ಘೋಷಿಸಿದ್ದರು. ಹಿಂದೂಪರ ಸಂಘಟನೆಗಳು ಹಂಸಲೇಖ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು.

ಇದನ್ನೂ ಓದಿ: ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿಚಾರಣೆ: ಹೊರಗೆ ಪರ-ವಿರೋಧ ಪ್ರತಿಭಟನೆ ಇದನ್ನೂ ಓದಿ: ಹಂಸಲೇಖ ಪರವಾಗಿ ಕನ್ನಡಪರ ಸಂಘಟನೆಗಳು, ವಿರುದ್ಧ ಭಜರಂಗದಳ ಘೋಷಣೆ; ಠಾಣೆಯ ಮುಂದೆ ಹೈಡ್ರಾಮಾ