ನೀಟ್ ವಿಚಾರವಾಗಿ ರಾಜ್ಯದಲ್ಲಿ ಹೋರಾಟ: ಕಾಂಗ್ರೆಸ್ಗೆ 2016ರ ಇತಿಹಾಸ ನೆನಪಿಸಿ ತಿವಿದ ಜೆಡಿಎಸ್
NEET Row: ನೀಟ್ (NEET) ಪರೀಕ್ಷೆ ಅಕ್ರಮ ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ವಿರುದ್ಧ ಜೆಡಿಎಸ್ ತೀವ್ರ ವಾಗ್ದಾಳಿ ನಡೆಸಿದ್ದು, 2016ರ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಇತಿಹಾಸವನ್ನು ನೆನಪಿಸಿ ವಾಗ್ದಾಳಿ ನಡೆಸಿದೆ. ಸಾಲು ಸಾಲು ಹಗರಣಗಳಾದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ, ಈಗ ಮಾತನಾಡಲು ಯಾವ ನೈತಿಕತೆ ಇದೆ ? ಎಂದೂ ಪ್ರಶ್ನಿಸಿದೆ.

ಮುಖ್ಯಾಂಶಗಳು
- ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕಾಂಗ್ರೆಸ್ ಪ್ರತಿಭಟನೆ
- 2016ರ ಇತಿಹಾಸ ನೆನಪಿಸಿ ಕಾಂಗ್ರೆಸ್ ನಾಯಕರಿಗೆ ತಿವಿದ ಜೆಡಿಎಸ್
- ಅಂದು ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆ ನೀಡಿದ್ದರೇ?- JDS
ಬೆಂಗಳೂರು, ಜುಲೈ 23: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ದೇಶಾದ್ಯಂತ ಕಾಂಗ್ರೆಸ್ ಸೇರಿ ಇತರ ಪಕ್ಷ ಮತ್ತು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಕರ್ನಾಟಕದಲ್ಲಿಯೂ ಈ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ನ ಕಾರ್ಯಕರ್ತರು ಪ್ರೊಟೆಸ್ಟ್ ನಡೆಸುತ್ತಿದ್ದಾರೆ. ಈ ನಡುವೆ ‘ಕೈ’ ನಾಯಕರಿಗೆ 2016ರ ಇತಿಹಾಸವನ್ನು ಜೆಡಿಎಸ್ ನೆನಪಿಸಿದೆ. ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ ಎಂದು ಎಕ್ಸ್ ಪೋಸ್ಟ್ ಮೂಲಕ ವ್ಯಂಗ್ಯವಾಡಿದೆ.
‘ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು’
ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ @INCKarnataka!
NEET ವಿಚಾರವಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಬಹಿಷ್ಕರಿಸುವಂತೆ ಒತ್ತಡ ಹೇರುತ್ತಿರುವ ಕಾಂಗ್ರೆಸ್ ಶಾಸಕರು, ನಾಯಕರೇ ಒಮ್ಮೆ ನೆನಪಿಸಿಕೊಳಿ.
ನಿಮ್ಮದೆ ಸರ್ಕಾರವಿದ್ದಾಗ 2016ರಲ್ಲಿ ಒಂದಲ್ಲ… ಎರೆಡೆರಡು ಬಾರಿ ದ್ವಿತೀಯ…
— Janata Dal Secular (@JanataDal_S) July 23, 2026
ನಿಮ್ಮದೆ ಸರ್ಕಾರವಿದ್ದಾಗ 2016ರಲ್ಲಿ ಒಂದಲ್ಲ, ಎರೆಡೆರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಕಲ್ಲು ಹಾಕಿದ್ದು ಮರೆತುಹೋಯಿತೇ ? ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದರೇ? ಎಂದು ಜೆಡಿಎಸ್ ಪ್ರಶ್ನಿಸಿದೆ. ಈಗ NEET ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಅಂತಲೂ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: NEET ಪ್ರತಿಭಟನೆ; ವಿದ್ಯಾರ್ಥಿಗಳ ಪರ ನಿಂತ ಯುವರಾಜ್ ಸಿಂಗ್!
‘ಈಗ ಮಾತನಾಡಲು ಯಾವ ನೈತಿಕತೆ ಇದೆ ?’
ವಾಲ್ಮೀಕಿ ಹಗರಣ, SCSP/TSP ಹಣ ದುರ್ಬಳಕೆ, ಕೆಪಿಎಸ್ಸಿ (KPSC) ಹಗರಣ, ಗೃಹಲಕ್ಷ್ಮಿ (5000 ಕೋಟಿ ) ಹಗರಣ ಸೇರಿ ಸಾಲು ಸಾಲು ಹಗರಣಗಳಾದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ, ಈಗ ಮಾತನಾಡಲು ಯಾವ ನೈತಿಕತೆ ಇದೆ ? ಧಾರವಾಡದಲ್ಲಿ ಉದ್ಯೋಗ ನೇಮಕಾತಿಗಾಗಿ ಹೋರಾಡಿದ ವಿದ್ಯಾರ್ಥಿಗಳ ಮೇಲೆ , ನರಗುಂದದಲ್ಲಿ ಕಬ್ಬು ಬೆಳೆಗಾರರ ಮೇಲೆ, ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಲಾಠಿ ಏಟು ಕೊಟ್ಟ ಜನವಿರೋಧಿ ಸರ್ಕಾರ ನಿಮ್ಮದು. ದಲಿತರ ಮನೆಗೆ ಬೆಂಕಿ ಬಿದ್ದಾಗ, ಹುಬ್ಬಳ್ಳಿಯಲ್ಲಿ ಗಲಭೆಯಾದಾಗ ನಿಮ್ಮ ಬಾಯಿ ಏಕೆ ಮುಚ್ಚಿತ್ತು ಕಾಂಗೆಸ್ಸಿಗರೇ ಎಂದು ಜೆಡಿಎಸ್ ಪ್ರಶ್ನಿಸಿದೆ. ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ, ಬೂಟಾಟಿಕೆ ಹಾಗೂ ದ್ವಂದ್ವ ನೀತಿಯನ್ನು ರಾಜ್ಯದ ಯುವಜನತೆ ಗಮನಿಸುತ್ತಿದ್ದಾರೆ ಎಂದೂ ತಿಳಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:08 pm, Thu, 23 July 26



