ಟೆಲಿಗ್ರಾಮ್ ಆ್ಯಪ್ನಲ್ಲಿ ಕೆಲಸ ಹುಡುಕುವವರು ಎಚ್ಚರ! 3.5 ಲಕ್ಷ ರೂ ಕಳೆದುಕೊಂಡ ಯುವಕ
ಟೆಲಿಗ್ರಾಮ್ ಆ್ಯಪ್ ಮೂಲಕ ಕೆಲಸ ನೀಡುವುದಾಗಿ ಯುವಕನೊಬ್ಬನಿಂದ 3.5 ಲಕ್ಷ ರೂ. ವಂಚಿಸಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೊದಲಿಗೆ ಕಡಿಮೆ ಮೊತ್ತವನ್ನು ಪಡೆದು, ಹಂತಹಂತವಾಗಿ ಹೆಚ್ಚಿನ ಮೊತ್ತವನ್ನು ಪಡೆದು ವಂಚಿಸಲಾಗಿದೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ್ದಾರೆ.

ನೆಲಮಂಗಲ, ಮೇ 11: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ಗಳಲ್ಲಿ ಟೆಲಿಗ್ರಾಮ್ (Telegram) ಕೂಡ ಒಂದು. ಲಕ್ಷಾಂತರ ಜನರು ಟೆಲಿಗ್ರಾಮ್ ಆ್ಯಪ್ನ್ನು ಬಳಸುತ್ತಾರೆ. ಆದರೆ ಇದೇ ಟೆಲಿಗ್ರಾಮ್ ಆ್ಯಪ್ನ್ನು ಬಂಡವಾಳ ಮಾಡಿಕೊಂಡಿರುವ ಕಿಡಿಗೇಡಿಗಳು ಕೆಲಸ ಕೊಡಿಸುವುದಾಗಿ ಮಹಾಮೋಸ (Fraud) ಮಾಡುತ್ತಿದ್ದಾರೆ. ಇದೀಗ ಅಂತಹದ್ದೆ ಒಂದು ಘಟನೆ ನಡೆದಿದೆ. ಪರಮೇಶ್ ಎಂಬ ಯುವಕ ಬರೋಬ್ಬರಿ 3.5 ಲಕ್ಷ ರೂ ಕಳೆದು ಕೊಂಡಿದ್ದಾನೆ.
ಸದ್ಯ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರೇಟಿಂಗ್ ಕೊಟ್ಟರೆ ಹಣ ಬರತ್ತೆ ಎಂದು ಕಿಡಿಗೇಡಿಗಳಿಂದ ಮಹಾಮೋಸ ಮಾಡಲಾಗುತ್ತಿದೆ. ಈ ವಂಚನೆ ಜಾಲಕ್ಕೆ ಸಿಲುಕಿ ಸಾಕಷ್ಟು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಮಂಡ್ಯ: ನಾಪತ್ತೆಯಾಗಿದ್ದ ಪದ್ಮಶ್ರೀ ಪುರಸ್ಕೃತ ಕೃಷಿ ವಿಜ್ಞಾನಿ ಸುಬ್ಬಣ್ಣ ಅಯ್ಯಪ್ಪನ್ ಶವವಾಗಿ ಪತ್ತೆ
ಕಡಿಮೆ ಹಣ ಕೊಟ್ಟು ಹೆಚ್ಚು ಹಣಕ್ಕೆ ಟ್ಯಾಕ್ಸ್ ಕಟ್ಟಬೇಕು ಅಂತ ಲಕ್ಷ ಲಕ್ಷ ರೂ ಕೇಳುತ್ತಾರೆ. ಹೀಗೆ ಕೆಲಸ ಸಿಗುವ ಆಸೆಗೆ ಬಿದ್ದ ಯುವಕ ಪರಮೇಶ್ 3.5 ಲಕ್ಷ ರೂ ಕಳೆದು ಕೊಂಡಿದ್ದಾನೆ. ಮೊದಲ ಹಂತದಲ್ಲಿ 150 ರೂ ನಂತೆ 8 ಬಾರಿ ಹಣ ಪಡೆದಿದ್ದ. ಬಳಿಕ ಎರಡು ಸಾವಿರದಿಂದ ಹಂತ ಹಂತವಾಗಿ 3.5. ಲಕ್ಷ ರೂ ಹಣ ಹೂಡಿಕೆ ಮಾಡಿಸಿಕೊಂಡಿದ್ದರು. ಹಣ ವಾಪಸ್ ಕೇಳಿದರೆ ಟ್ಯಾಕ್ಸ್ ಆಗತ್ತೆ ಮತ್ತೆ 1 ಲಕ್ಷ ರೂ ಕಟ್ಟಬೇಕಾತ್ತೆ ಎಂದು ವಂಚಿಸಿದ್ದಾರೆ.
ದುಡಿದು ತಿನ್ನುವ ಅಜ್ಜಿ ಚಿನ್ನಕ್ಕೆ ಕನ್ನ ಹಾಕಿದ ವ್ಯಕ್ತಿ
ಓರ್ವ ಅಜ್ಜಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೋಸ ಮಾಡಿರುವಂತಹ ಘಟನೆ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಬಾಗಲಕೋಟೆ ಹೆದ್ದಾರಿ ಪಕ್ಕದಲ್ಲಿ ಕುಳಿತು ಸವತೆಕಾಯಿ ಮಾರಾಟ ಮಾಡಿ ಜೀವನ ಮಾಡುತ್ತಿದ್ದ ಅಜ್ಜಿಗೆ ದುಡಿದು ತಿನ್ನಲಾಗದೇ ಕೈಲಾಗದ ವ್ಯಕ್ತಿಯೊಬ್ಬ ವಂಚನೆ ಮಾಡಿದ್ದಾನೆ. ಸುಮಾರು ಇಪ್ಪತ್ತು ಗ್ರಾಂ ಚಿನ್ನವನ್ನ ಕದ್ದು ಪರಾರಿಯಾಗಿದ್ದಾನೆ.
ಸಾಮಾನ್ಯವಾಗಿ ಚಿನ್ನ ಕದ್ದು ಪರಾರಿಯಾಗಿಲ್ಲ ಬದಲಿಗೆ ಆತ ಕಂಡುಕೊಂಡ ಮಾರ್ಗ ಏನು ಅಂತಾ ಕೇಳಿದರೆ ನೀವು ಶಾಕ್ ಆಗುತ್ತೀರಾ. ಇಳಿ ವಯಸ್ಸಿನಲ್ಲಿ ದುಡಿದು ತಿನ್ನುವುದರ ಜೊತೆಗೆ ಅದರಲ್ಲೇ ಅಲ್ಪ ಪ್ರಮಾಣದ ಹಣ ಉಳಿಸಿ ಚಿನ್ನವನ್ನ ಕೊಂಡಿದ್ದ ಅಜ್ಜಿ. ಕಿವಿಯೋಲೆ ಹಾಗೂ ಚಿನ್ನದ ಸರವನ್ನ ಕೊಂಡುಕೊಂಡಿದ್ದ ಅಜ್ಜಿ ಎಂದಿನಂತೆ ಸವತೆಕಾಯಿ ಮಾರಾಟಕ್ಕೆ ಬಂದಿದ್ದರು.
ಈ ವೇಳೆ ಅಜ್ಜಿ ಬಳಿ ಬಂದ ವ್ಯಕ್ತಿಯೊಬ್ಬ ಅಜ್ಜಿ ಮಗನ ಹೆಸರು ಹೇಳಿಕೊಂಡು ಮರಾಠಿಯಲ್ಲಿ ಮಾತನಾಡಿದ್ದಾನೆ. ಯಾರೋ ಮಗನ ಸ್ನೇಹಿತ ಅಂದುಕೊಂಡು ಮಾತನಾಡಿದ್ದ ಅಜ್ಜಿಗೆ ಪೋಸ್ಟ್ ಆಫೀಸ್ ನಲ್ಲಿ ಆರು ಸಾವಿರ ರೂ ಹಣ ಕೊಡ್ತಿದ್ದಾರೆ. ನಿನ್ನ ಮಗ ಹೇಳಿದ್ದಾನೆ ನಿನ್ನ ಪೋಸ್ಟ್ ಆಫೀಸ್ಗೆ ಕರೆದುಕೊಂಡು ಬಾ ಅಂತಾ ಹೀಗಾಗಿ ಹೋಗಿ ಬರೋಣ ಬಾ ಅಂತಾ ಅಜ್ಜಿಗೆ ಕರೆದಿದ್ದಾನೆ. ಇದನ್ನ ನಂಬಿದ ಅಜ್ಜಿ ಆತನೊಟ್ಟಿಗೆ ಬೈಕ್ ಹತ್ತಿದ್ದಾಳೆ. ಸಾಂಬ್ರಾ ಗ್ರಾಮದ ಬಳಿಯ ಅದೊಂದು ಬೀಲ್ಡಿಂಗ್ ಬಳಿ ಬಂದು ಇದೇ ಪೋಸ್ಟ್ ಆಫೀಸ್ ಅಂತಾ ತೋರಿಸಿದ್ದಾನೆ. ಒಳಗೆ ಹೋಗುವಾಗ ಚಿನ್ನ ಇರಬಾರದು ಶ್ರೀಮಂತ ಅಂದುಕೊಳ್ತಾರೆ ಅಂತಾ ಹೇಳಿ ಆಕೆ ಕಿವಿಯೋಲೆ ಹಾಗೂ ಚಿನ್ನದ ಸರವನ್ನ ತೆಗೆದುಕೊಡುವಂತೆ ಹೇಳಿದ್ದಾನೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಬ್ಬ ಲಕ್ಕಿ ಭಾಸ್ಕರ್: ಒಂದಲ್ಲ, ಎರಡಲ್ಲ 7 ಕೋಟಿ ರೂ ವಂಚನೆ
ಖದೀಮನ ಮಾತು ನಂಬಿದ ಅಜ್ಜಿ, ಬೀಲ್ಡಿಂಗ್ ಒಳಗೆ ಹೋಗುವ ಮುನ್ನ ಕಿವಿಯೋಲೆ ಹಾಗೂ ಚಿನ್ನದ ಸರವನ್ನ ತೆಗೆದು ಆತನ ಕೈಗೆ ಕೊಟ್ಟು ಹೋಗಿದ್ದಾಳೆ. ಒಳ ಹೋಗಿ ಕೇಳಿದಾಗ ಇದು ಪೋಸ್ಟ್ ಆಫೀಸ್ ಅಲ್ಲಾ ಅಂತಾ ಅವರು ಹೇಳಿ ಕಳ್ಸಿದ್ದಾರೆ. ಹೀಗೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಆತ ಚಿನ್ನದ ಸಮೇತ ಎಸ್ಕೇಪ್ ಆಗಿದ್ದಾನೆ.
ವರದಿ: ಮಂಜುನಾಥ್ ಟಿವಿ9 (ನೆಲಮಂಗಲ)
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.