ಸಣ್ಣ ವ್ಯಾಪಾರಿಗಳಿಗೆ ಬಿಗ್ ರಿಲೀಫ್‌:ನೋಟಿಸ್ ನೀಡಿದ್ರೂ ತೆರಿಗೆ ವಸೂಲಿ ಮಾಡಲ್ಲ, ಸಿಎಂ ಸ್ಪಷ್ಟನೆ

ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು ಬಾರೀ ಚರ್ಚೆಗೆ ಗ್ರಾಸವಾಗಿದ್ದು, ಸಣ್ಣ ಸಣ್ಣ ವ್ಯಾಪಾರ ಮಾಡುವವರು ಲಕ್ಷಾಂತರ ರೂಪಾಯಿ ಹಣ ಹೇಗೆ ಟ್ಯಾಕ್ಸ್ ಕಟ್ಟಬೇಕೆಂದು ಕಂಗಾಲಾಗಿದ್ದಾರೆ. ಈ ಸಂಬಂಧ ಸಿಡಿದೆದ್ದ ಸಣ್ಣ ವರ್ತಕರು, ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರು ವಾಣಿಕ್ಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ವರ್ತಕರ ಸಭೆ ಮಾಡಿ ಚರ್ಚಿಸಿದರು. ಸಭೆಯಲ್ಲಿ ಸಣ್ಣ ವ್ಯಾಪಾರಿಗಳಿಗೆ ಸಿಎಂ ಬಿಗ್ ರಿಲೀಫ್ ನೀಡಿದ್ದಾರೆ. ಇನ್ನು ಈ ಬಗ್ಗೆ ಸಿಎಂ ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.​

ಸಣ್ಣ ವ್ಯಾಪಾರಿಗಳಿಗೆ ಬಿಗ್ ರಿಲೀಫ್‌:ನೋಟಿಸ್ ನೀಡಿದ್ರೂ ತೆರಿಗೆ ವಸೂಲಿ ಮಾಡಲ್ಲ, ಸಿಎಂ ಸ್ಪಷ್ಟನೆ
Siddaramaiah

Updated on: Jul 23, 2025 | 6:07 PM

ಬೆಂಗಳೂರು, (ಜುಲೈ 23): ಜಿಎಸ್‌ಟಿ ನೋಟಿಸ್‌ (GST) ಪಡೆದ ವರ್ತಕರಿಂದ 3 ವರ್ಷದ ತೆರಿಗೆ ಬಾಕಿ ವಸೂಲಾತಿ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಘೋಷಣೆ ಮಾಡಿದ್ದಾರೆ. ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆಯ ಟ್ಯಾಕ್ಸ್​ ನೋಟಿಸ್‌ ಜಾರಿ ಮಾಡಿದ್ದಕ್ಕೆ ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಇಂದು (ಜುಲೈ 23) ಸಿಎಂ ಸಿದ್ದರಾಮಯ್ಯ ಅವರು ಸಭೆ ನಡೆಸಿದ್ದು, ತೆರಿಗೆ ಇಲಾಖೆಯ ಅಧಿಕಾರಿಗಳು, ವರ್ತಕ ಸಂಘದ ಪ್ರತಿನಿಧಿಗಳ ಜೊತೆ ಮಹತ್ವದ ಮಾತುಕತೆ ನಡೆಸಿದರು. ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ, ನೋಟಿಸ್‌ ನೀಡಿದ ವರ್ತಕರಿಂದ ಬಾಕಿ ತೆರಿಗೆಯನ್ನು ವಸೂಲಿ ಮಾಡುವುದಿಲ್ಲ. ಆದರೆ ವರ್ತಕರು ಜಿಎಸ್​ ಟಿ ನೋಂದಣಿ ಮಾಡಿಕೊಳ್ಳಬೇಕು. ಈಗ ಕೊಟ್ಟಿರುವ ನೋಟೀಸ್ ಮೇಲೆ ವಸೂಲಾತಿ, ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ತೆರಿಗೆ ವಸೂಲಿ ಮಾಡುವುದಿಲ್ಲ ಎಂದ ಸಿಎಂ

ಹಾಲು, ತರಕಾರಿ, ಮಾಂಸ, ಹಣ್ಣಿನಂತಹ ಅಗತ್ಯ ಆಹಾರ ವಸ್ತುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದ್ದು, ಅಂತಹ ವ್ಯಾಪಾರಿಗಳಿಗೆ ನೊಟೀಸ್ ಕೊಟ್ಟಿದ್ದರೂ, ಅವರಿಂದ ತೆರಿಗೆ ವಸೂಲಿ ಮಾಡುವುದಿಲ್ಲ. ಆದರೆ ಯಾರು ಕಾಯ್ದೆ ಪ್ರಕಾರ ತೆರಿಗೆ ಕಟ್ಟಬೇಕಾಗಿದೆಯೋ ಅವರು ಕಟ್ಟಬೇಕು. ನೊಟೀಸ್ ನೀಡಲಾಗಿರುವ ಹಳೆಯ ತೆರಿಗೆ ಬಾಕಿಯನ್ನು ಮನ್ನಾ ಮಾಡಲಾಗುವುದು. ಅದನ್ನು ಸರ್ಕಾರ ವಸೂಲು ಮಾಡುವುದಿಲ್ಲ. ಆದರೆ ಅವರೆಲ್ಲರೂ ಕಡ್ಡಾಯವಾಗಿ ಜಿಎಸ್ಟಿ ನೋಂದಣಿ ಮಾಡಬೇಕು ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಸಣ್ಣ ವ್ಯಾಪಾರಿಗಳಲ್ಲಿ ಇದ್ದ ಟ್ಯಾಕ್ಸ್ ಗೊಂದಲಗಳಿಗೆ ತೆರೆ ಎಳೆದರು.

ಇದನ್ನೂ ಓದಿ: ಕಮರ್ಷಿಯಲ್ ಟ್ಯಾಕ್ಸ್ ನೋಟೀಸ್​ಗಳ ವಿರುದ್ಧ ಇಂದಿನಿಂದ ಹೋರಾಟ ಆರಂಭಿಸಿದ ಸಣ್ಣ ವ್ಯಾಪಾರಿಗಳು

ಕಡ್ಡಾಯ ಜಿಎಸ್‌ಟಿ ನೋಂದಣಿ ಸೂಚನೆ

ಮೂರು ವರ್ಷಗಳ ಬಾಕಿ ವಸೂಲಾತಿಗೆ ನೋಟಿಸ್ ಕೊಟ್ಟಿದ್ರು, ಅದನ್ನ ಮುಂದುವರಿಸುವುದಿಲ್ಲ. ಕಡ್ಡಾಯ ಜಿಎಸ್‌ಟಿ ನೋಂದಣಿಗೆ ಒಪ್ಪಿದ್ದಾರೆ. ಜಿಎಸ್‌ಟಿ ಗೊಂದಲಕ್ಕೆ ಸಹಾಯವಾಣಿ ತೆರೆಯುತ್ತೇವೆ. ಜಿಎಸ್‌ಟಿ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಮಾಡಲು ತೀರ್ಮಾನ ಮಾಡಿದ್ದೇವೆ. ವರ್ತಕರು ಯುಪಿಐ ಬಳಸಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.

ವಾಣಿಜ್ಯ ತೆರಿಗೆ ಇಲಾಖೆವರು 9,000 ನೋಟಿಸ್ ನೀಡಿದ್ದರು. 40 ಲಕ್ಷಕ್ಕಿಂತ ಹೆಚ್ಚು ವ್ಯವಹಾರ ನಡೆಸುವವರಿಗೆ  ವಾಣಿಜ್ಯ ತೆರಿಗೆ ಇಲಾಖೆವರು ನೋಟಿಸ್ ಜಾರಿಮಾಡಿದ್ದು, 40 ಲಕ್ಷಕ್ಕಿಂತ ಹೆಚ್ಚಿನ ವ್ಯವಹಾರ ನಡೆಸುವುವವರಿಗೆ 1% ಟ್ಯಾಕ್ಸ್ ಕಟ್ಟಲು ನೋಟಿಸ್ ನೀಡಿದ್ದಾರೆ. ಕೇಂದ್ರ ಸರ್ಕಾರ ಜಿಎಸ್​ಟಿ ವಿಧಿಸುತ್ತಿದೆ, ರಾಜ್ಯ ಸರ್ಕಾರವಲ್ಲ. ಜಿಎಸ್​​ಟಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳುವಂತೆ ಸೂಚಿಸಿದ್ದೇವೆ. ಸಭೆಯಲ್ಲಿ ವರ್ತಕರು GST ನೋಂದಣಿಗೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Wed, 23 July 25