ಬೆಂಗಳೂರಿನಲ್ಲಿ ತಡರಾತ್ರಿ 1 ಗಂಟೆ ವರೆಗೆ ಪಬ್ ತೆರೆಯಲು ಅವಕಾಶ: ಡಿಕೆ ಶಿವಕುಮಾರ್ ಭರವಸೆ
ಬೆಂಗಳೂರು ನಗರದ ನೈಟ್ಲೈಫ್ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ವಿಧಾನಸಭೆ ಕಲಾಪದಲ್ಲಿ ಮಹತ್ವದ ಅಪ್ಡೇಟ್ ನೀಡಿದ್ದಾರೆ. ಸದ್ಯ ರೆಸ್ಟೋರೆಂಟ್ಗಳಿಗೆ ಹೊಂದಿರುವ ಪಬ್ಗಳಿಗಷ್ಟೇ ರಾತ್ರಿ 1 ರ ವರೆಗೆ ಕಾರ್ಯಾಚರಣೆ ಅವಕಾಶ ಇದ್ದು, ಇದನ್ನು ಎಲ್ಲ ಪಬ್ಗಳಿಗೆ ವಿಸ್ತರಣೆ ಮಾಡಿಕೊಡುವ ಬಗ್ಗೆ ಅವರು ಭರವಸೆ ನೀಡಿದ್ದಾರೆ.

ಬೆಂಗಳೂರು, ಮಾರ್ಚ್ 21: ಬೆಂಗಳೂರು (Bengaluru) ನಗರದಲ್ಲಿ ಮಧ್ಯರಾತ್ರಿ ಒಂದು ಗಂಟೆವರೆಗೆ ಪಬ್ಗಳನ್ನು (Pub) ತೆರೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭರವಸೆ ನೀಡಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನಗರ ಅಂತರಾಷ್ಟ್ರೀಯ ಖ್ಯಾತಿ ಹೊಂದಿದ್ದು, ಲೈವ್ ಆಗಿರಬೇಕು. ಈ ಕಾರಣಕ್ಕೆ ತಡರಾತ್ರಿ 1 ಗಂಟೆವರೆಗೆ ಪಬ್ ತೆರೆಯಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ತಡರಾತ್ರಿವರೆಗೆ ಕಾರ್ಯಾಚರಣೆಗೆ ಪಬ್ಗಳಿಗೆ ಆಕಾಶ ನೀಡುವ ವಿಚಾರವಾಗಿ ಬಿಜೆಪಿಯ ಎಚ್ಎಸ್ ಗೋಪಿನಾಥ್ ಅವರು ವಿಧಾನಸಭೆ ಕಲಾಪದಲ್ಲಿ ಗಮನ ಸೆಳೆದರು. ಇದಕ್ಕೆ ಅಬಕಾರಿ ಸಚಿವ ಆರ್ಬಿ ತಿಮ್ಮಾಪುರ ಉತ್ತರಿಸುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಡಿಸಿಎಂ ಡಿಕೆ ಶಿವಕುಮಾರ್, ಬೆಳಗ್ಗೆ 10ರಿಂದ ರಾತ್ರಿ 11.30 ರ ವರೆಗೆ ಕಾರ್ಯಾಚರಣೆ ನಡೆಸಲು ಪಬ್ಗಳಿಗೆ ಅವಕಾಶ ಇದೆ. ರೆಸ್ಟೋರೆಂಟ್ಗಳಿಗೆ ಹೊಂದಿಕೊಂಡಿರುವ ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ತೆರೆದಿರಲು ಅವಕಾಶವಿದೆ. ಇದನ್ನೇ ಎಲ್ಲಾ ಪಬ್ಗಳಿಗೂ ಅನ್ವಯಿಸುವಂತೆ ಮಾಡಬೇಕಿದೆ ಎಂದರು.
ಸದ್ಯ ಬೆಳಗ್ಗೆ 10 ರಿಂದ ರಾತ್ರಿ 11:30 ರ ತನಕ ಬೆಂಗಳೂರಿನಲ್ಲಿ ಪಬ್ ಕಾರ್ಯಾಚರಣೆಗೆ ಅವಕಾಶವಿದ್ದು, ನಿಯಮ ಮೀರಿ ವರ್ತಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಮ್ಮಾಪುರ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ನಿಯಮಗಳು ಕಿರುಕುಳ ಆಗಿ ಪರಿಣಮಿಸಬಾರದು. ಬೆಂಗಳೂರು ಅಂತರಾಷ್ಟ್ರೀಯ ಖ್ಯಾತಿಯ ನಗರವಾಗಿದೆ. ಇಲ್ಲಿ ಅನೇಕರು ರಾತ್ರಿ ಕೂಡ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಾತ್ರಿ ಕಾರ್ಯಾಚರಣೆ ಸಂಬಂಧ ಇರುವ ಸಮಸ್ಯೆಗಳ ಕುರಿತು ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಬಲವಂತದ ತೆರಿಗೆ ಸಂಗ್ರಹದ ವಿರುದ್ಧ ಆಕ್ಷೇಪ
ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವು ಐಎಎಸ್ ಅಧಿಕಾರಿಗಳು ಶೇ 9ರಷ್ಟು ಬಡ್ಡಿ ವಿಧಿಸಿ ಬಲವಂತವಾಗಿ ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ ಎಂದು ಬಿಜೆಪಿ ಸದಸ್ಯ ಸಿಕೆ ರಾಮಮೂರ್ತಿ ಆರೋಪಿಸಿದ್ದು, ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಸ್ತಿ ತೆರಿಗೆ ಸಂಗ್ರಹದಲ್ಲಿ ಗಣನೀಯ ಹೆಚ್ಚಳ ಸಾಧಿಸಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಪಾಲಿಕೆ 3000 ಕೋಟಿ ರೂ. ಸಂಗ್ರಹ ಮಾಡಿತ್ತು. ಬಿಜೆಪಿ ಅವಧಿಯಲ್ಲಿ 4,556 ಕೋಟಿ ರೂ. ಸಂಗ್ರಹವಾಗಿತ್ತು. ಈ ವರ್ಷ 6000 ಕೋಟಿ ರೂ. ಸಂಗ್ರಹ ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ, 10 ಸಾವಿರ ಆಸ್ತಿಗೆ ಬೀಗ ಹಾಕಿ, ನೋಟಿಸ್ ಅಂಟಿಸಿ ಕೆಲವು ಐಎಎಸ್ ಅಧಿಕಾರಿಗಳು ಶೇ 9ರಷ್ಟು ಬಡ್ಡಿ ಹಾಕಿ ಬಲವಂತವಾಗಿ ತೆರಿಗೆ ಸಂಗ್ರಹ ಮಾಡುತ್ತಿದ್ದಾರೆ ಎಂದು ಅವರು ಆಕ್ಷೇಪಿಸಿದ್ದಾರೆ.
ಇದನ್ನೂ ಓದಿ: ರಾಜಣ್ಣ ಮಾತ್ರವಲ್ಲಇನ್ನೂ ಮೂರು ಮಂತ್ರಿಗಳಿಗೂ ಹನಿಟ್ರ್ಯಾಪ್: ಗ್ಯಾಂಗ್ನ ಹಿಡಿದು ಬಾಯ್ಬಿಡಿಸಿದ ಸಚಿವ!
ಪಾಲಿಕೆಯಲ್ಲಿ ಅಧಿಕಾರಿಗಳು ದಿನಕ್ಕೊಂದು ವರದಿ ಹಾಕುತ್ತಿದ್ದು, ದಿನನಿತ್ಯ ಇಷ್ಟು ಹಣ ಸಂಗ್ರಹ ಮಾಡಲೇಬೇಕು ಎಂಬುದಾಗಿ ಅಧಿಕಾರಿಗಳಿಗೆ ಬಲವಂತ ಮಾಡುತ್ತಿದ್ದಾರೆ ಎಂದು ದೂರಿದರು.