ಬೆಂಗಳೂರಿನ ಮೊದಲ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಎನ್ ಗರುಡಾಚಾರ್ ವಿಧಿವಶ
BN Garudachar Passes Away: ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್. ಗರುಡಾಚಾರ್ ಅವರು ಶುಕ್ರವಾರ ನಿಧನರಾಗಿದ್ದಾರೆ. ಬೆಂಗಳೂರು ನಗರದಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಅನ್ನು ಸ್ಥಾಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಬೆಂಗಳೂರಿನ ನಿವಾಸದಲ್ಲಿ ಬಿ.ಎನ್.ಗರುಡಾಚಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು, ಮಾರ್ಚ್ 28: ಬೆಂಗಳೂರಿನ ಚಿಕ್ಕಪೇಟೆ ಕ್ಷೇತ್ರದ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ತಂದೆ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿ.ಎನ್.ಗರುಡಾಚಾರ್ (BN Garudachar) ಶುಕ್ರವಾರ ವಿಧಿವಶರಾಗಿದ್ದಾರೆ (Passes Away). ಬೆಂಗಳೂರಿನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆ ಮಾಡಿದಾಗ ಟ್ರಾಫಿಕ್ ಡಿಸಿಪಿಯಾಗಿದ್ದರು. 1963ರಲ್ಲಿ N.R.ಜಂಕ್ಷನ್ನಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆಯಾಗಿತ್ತು. ನಗರದ ನಿವಾಸದಲ್ಲಿ ಬಿ.ಎನ್.ಗರುಡಾಚಾರ್ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ 4 ಗಂಟೆಗೆ ವಿಲ್ಸನ್ ಗಾರ್ಡನ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಿ.ಎನ್.ಗರುಡಾಚಾರ್ ಅವರು ಬೆಂಗಳೂರು ಕಮಿಷನರ್ ಸೇರಿ ಹಲವು ಹುದ್ದೆಗಳನ್ನು ನಿರ್ವಹಿಸಿದ್ದರು. ರಾಜ್ಯ ರಾಜಧಾನಿಯಲ್ಲಿ ಮೊದಲ ಟ್ರಾಫಿಕ್ ಸಿಗ್ನಲ್ ಸ್ಥಾಪನೆ ಮಾಡಿದಾಗ ಗರುಡಾಚಾರ್ ಅವರು ಟ್ರಾಫಿಕ್ ಡಿಸಿಪಿ ಆಗಿದ್ದರು.
ಇದನ್ನೂ ಓದಿ: ಬೆಂಗಳೂರಿನಿಂದ ಮುಂಬೈ, ಕೋಲ್ಕತ್ತಾಗೆ ವಿಶೇಷ ರೈಲು: ಇಲ್ಲಿದೆ ವೇಳಾಪಟ್ಟಿ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಬರದ ಬೆಂಗಾಡು ಗ್ರಾಮದಲ್ಲಿ ಬಿ.ಎನ್. ಗರುಡಾಚಾರ್ ಅವರು 1929ರಲ್ಲಿ ಜನಿಸಿದರು. ಇವರದ್ದು, ಕೃಷಿ ಕುಟುಂಬ. ಕಷ್ಟದಲ್ಲೇ ಬೆಳೆದ ಬಿ.ಎನ್. ಗರುಡಾಚಾರ್, ದನ, ಎಮ್ಮೆ ಕಾಯುತ್ತಾ, ಸಗಣಿ ಬಾಚುವ ಕೆಲಸ ಮಾಡುತ್ತಿದ್ದರು.
ಹೀಗಿರುವಾಗ ಅವರ ತಂದೆ ಅಕಾಲಿಕ ಮರಣ ಹೊಂದುತ್ತಾರೆ. ಬಳಿಕ ಕಡು ಕಷ್ಟಕ್ಕೆ ಸಿಲುಕಿದ ಕುಟುಂಬಕ್ಕೆ ಅಮ್ಮ ಆಸರೆಯಾಗುತ್ತಾರೆ. ಕೆಲ ಬಂಧುಗಳ, ಹಿತೈಷಿಗಳ ನೆರವಿನಿಂದ ಬೆಳೆದು, ಹಳ್ಳಿಯಲ್ಲಿ ಕೂಲಿ, ಮಠದಲ್ಲಿ ಗರುಡಾಚಾರ್ ವಿದ್ಯಾಭ್ಯಾಸ ಆರಂಭಿಸಿದರು.
ಇದನ್ನೂ ಓದಿ: ಮೂಡಬಿದ್ರೆಯ ಪೇಪರ್ ರಾಜಣ್ಣ; 52 ವರ್ಷಗಳಿಂದ ದಿನ ಪ್ರತಿಕೆ, ಹಾಲು ಮಾರಿ ಸ್ವಾವಲಂಬಿ ಜೀವನ ಸಾಗಿಸುತ್ತಿರುವ ಬಡ ಜೀವ
ಹಾಸನ, ಗೊರೂರು ಮತ್ತು ಮೈಸೂರಿನಲ್ಲಿ ಅವರಿವರ ಮನೆಯಲ್ಲಿ ಆಶ್ರಯ ಪಡೆದು, ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. 1953ರಲ್ಲಿ ಐಪಿಎಸ್ ಪಾಸ್ ಮಾಡಿ, ಮೊದಲಿಗರೆನಿಸಿಕೊಂಡರು. ಬಳಿಕ ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯ ಉನ್ನತ ಶ್ರೇಣಿಯ ಅಧಿಕಾರಿಯಾಗಿ ನೇಮಕಗೊಂಡಿದ್ದರು. ಇದರ ದಕ್ಷ ಮತ್ತು ಪ್ರಾಮಾಣಿಕ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:37 am, Fri, 28 March 25