ಬಾಟ್ಲಾ ಹೌಸ್ ಶೂಟೌಟ್: ಭಯೋತ್ಪಾದಕ ಸತ್ತಾಗ ಸೋನಿಯಾ ಗಾಂಧಿ ಅತ್ತಿದ್ದರು; ಕಾಂಗ್ರೆಸ್ ವಿರುದ್ಧ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ
ಬಾಟ್ಲಾ ಹೌಸ್ನಲ್ಲಿ ಭಯೋತ್ಪಾದಕರ ಮೇಲೆ ಶೂಟ್ ಔಟ್ ಆದಾಗ ಭಯೋತ್ಪಾದಕ ಸತ್ತಾಗ ಸೋನಿಯಾ ಗಾಂಧಿ ಅವರು, ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ದರಂತೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ ತಿರುಗೇಟು ನೀಡಿದ್ದಾರೆ.

ಬೆಂಗಳೂರು: ಬಾಟ್ಲಾ ಹೌಸ್ನಲ್ಲಿ (Batla House) ಭಯೋತ್ಪಾದಕರ (Terrorist) ಮೇಲೆ ಶೂಟ್ ಔಟ್ ಆಗಿ ಭಯೋತ್ಪಾದಕ ಸತ್ತಾಗ ಸೋನಿಯಾ ಗಾಂಧಿ (Sonia Gandhi) ಅವರು, ಭಯೋತ್ಪಾದಕ ಸತ್ತಿದ್ದಕ್ಕೆ ಕಣ್ಣೀರು ಹಾಕಿದ್ದರಂತೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಲ್ಹಾದ ಜೋಶಿ (Pralhad Joshi) ತಿರುಗೇಟು ನೀಡಿದ್ದಾರೆ. ಸೋನಿಯಾ ಗಾಂಧಿ ಅಧಿಕಾರದಲ್ಲಿ ಇದ್ದಾಗ, ಮನಮೋಹನ್ ಸಿಂಗ್ (Manmohan Singh) ಸುಮ್ನೆ ಹೆಸರಿಗೆ ಪ್ರಧಾನಿ ಆಗಿದ್ದರು. ಅಧಿಕಾರ ನಡೆಸುತ್ತಾ ಇದ್ದದ್ದು ಸೋನಿಯಾ ಗಾಂಧಿ ಎಂದರು.
ಬಿಜೆಪಿ ಕಚೇರಿಯಲ್ಲಿ ಇಂದು ಅಸಂಘಟಿತ ಕಾರ್ಮಿಕ ಪ್ರಕೋಷ್ಠದ ಕಾರ್ಯಕಾರಿಣಿ ಸಭೆಯಲ್ಲಿ ಪ್ರಲ್ಹಾದ್ ಜೋಷಿ ಮಾತನಾಡಿ ರಾಜಸ್ಥಾನದಲ್ಲಿ ನಡೆದ ಕನ್ಹಯ್ಯಲಾಲ್ ಕೊಲೆ ಆರೋಪಿಯಲ್ಲಿ ಒಬ್ಬ ಬಿಜೆಪಿ ನಾಯಕರ ಜೊತೆ ನಿಂತಿದ್ದ ಫೋಟೊವನ್ನು ಹರಿಬಿಟ್ಟು ಕೊಲೆಗಡುಕ ಬಿಜೆಪಿಯವನು ಎಂದು ಕಾಂಗ್ರೆಸ್ ನಾಯಕರು ಮಾಡಿದ ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ ಅಫ್ಜಲ್ ಗುರು ಜೊತೆ ಫೋಟೊ ತೆಗೆಸಿಕೊಂಡವರು. ಇಂತವರು ಇಂದು ಬಿಜೆಪಿ ಮೇಲೆ ಆರೋಪ ಮಾಡುತ್ತಾ ಇದ್ದಾರೆ. ಇಂದು ದೇಶದಲ್ಲಿ ಭಯೋತ್ಪಾದನೆ ನಿರ್ನಾಮ ಆಗಿದೆ. ಯಾರಾದರೂ ಒಳನುಸುಳಲು ಬಂದರೆ ನಮ್ಮ ಸೈನಿಕರು ಗಡಿಯಲ್ಲೇ ಹೊಸಕಿ ಹಾಕುತ್ತಾರೆ. ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಆರ್ಟಿಕಲ್370 ರದ್ದು ಮಾಡಿದ್ದೂ ಕೂಡ ಭಯೋತ್ಪಾದನೆ ನಿರ್ನಾಮ ಆಗೋಕೆ ಪ್ರಮುಖ ಕಾರಣವಾಗಿದೆ ಎಂದರು.
ದೇಶದಲ್ಲಿ ನರೇಂದ್ರ ಮೋದಿ ಸರ್ಕಾರ ಮಾಡುವ ಜನಪರ ಕೆಲಸಗಳು, ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಮಾಡುವ ಯೋಜನೆಗಳು ಜನರಿಗೆ ತಲುಪಬಾರದು ಎನ್ನುವ ಉದ್ದೇಶಕ್ಕೆ ಕಾಂಗ್ರೇಸ್ ಈ ರೀತಿ ಸುಳ್ಳು ಪ್ರಚಾರ ಮಾಡುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಸಾಲು ಸಾಲು ಹಗರಣ ಮಾಡಿತು. ಕಲ್ಲಿದ್ದಲು ಹಗರಣ, ಕಾಮನ್ವೆಲ್ತ್ ಹಗರಣ ಸೇರಿದಂತೆ ಕಾಂಗ್ರೆಸ್ ಭ್ರಷ್ಟಾಚಾರ ಮಾಡಿದೆ. ಆದರೆ ಮೋದಿ ಸರ್ಕಾರದ ಮೇಲೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಹೇಳಿದರು.
ಬಿಜೆಪಿ ಮೇಲೆ ಈ ಮೊದಲು ಸಿಟಿ ಪಾರ್ಟಿ, ಉಳ್ಳವರ ಪಾರ್ಟಿ ಎಂದೆಲ್ಲಾ ಆರೋಪ ಇತ್ತು. ಆದರೆ ಇಂದು ಬಿಜೆಪಿ ಗ್ರಾಮೀಣ ಪಾರ್ಟಿ ಆಗಿದೆ ಮತ್ತು ಎಲ್ಲಾ ಗ್ರಾಮದಲ್ಲೂ ಬಿಜೆಪಿ ಪಾರ್ಟಿ ಇದೆ ಎಂದು ತಿಳಿಸಿದರು.