ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ

ವಿಧಾನಸಭೆಯಲ್ಲಿ ಸಚಿವರು ಸಮರ್ಪಕ ಉತ್ತರ ನೀಡದ ಕಾರಣ ಸ್ಪೀಕರ್ ಯು.ಟಿ. ಖಾದರ್ ಅವರ ಆಕ್ರೋಶದಿಂದಾಗಿ ಮೂವರು ಅಧಿಕಾರಿಗಳ ತಲೆದಂಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಮನವೊಲಿಕೆ ನಂತರ, ಎಲ್ಲಾ ಶಾಸಕರಿಗೆ ಪ್ರಶ್ನೆಗಳಿಗೆ ಉತ್ತರ ದೊರೆಯುವ ಬಗ್ಗೆ ಭರವಸೆ ನೀಡಿ ಕಲಾಪ ಪುನಾರಂಭವಾಗಿದೆ. ಇದೇ ರೀತಿಯ ಸಮಸ್ಯೆ ವಿಧಾನ ಪರಿಷತ್‌ನಲ್ಲೂ ಎದುರಾಗಿತ್ತು, ಅಲ್ಲಿಯೂ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಲಾಗಿದೆ.

ಸ್ಪೀಕರ್ ಸಿಟ್ಟಿಗೆ​​ ಮೂವರು ಅಧಿಕಾರಿಗಳ ತಲೆದಂಡ: ಖಾದರ್​​ ಮನವೊಲಿಕೆ ಬಳಿಕ ಸದನ ಪುನಾರಂಭ
ಸ್ಪೀಕರ್​​ ಯು.ಟಿ. ಖಾದರ್​​
Edited By:

Updated on: Mar 16, 2026 | 2:14 PM

ಬೆಂಗಳೂರು, ಮಾರ್ಚ್​​ 16: ವಿಧಾನ ಸಭೆ ಅಧಿವೇಶನದ ವೇಳೆ ಶಾಸಕರ ಪ್ರಶ್ನೆಗಳಿಗೆ ಸಚಿವರು ಸರಿಯಾಗಿ ಉತ್ತರ ನೀಡದ ಕಾರಣ ಗರಂ ಆಗಿ ಸದನ ಮುಂದೂಡಿದ್ದಲ್ಲದೆ ಪೀಠದಿಂದಲೇ ಎದ್ದು ಹೊರ ನಡೆದ ಯು.ಟಿ. ಖಾದರ್​​ ಅವರನ್ನು ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಮನವೊಲಿಸಿದ್ದಾರೆ. ಸ್ಪೀಕರ್ ಸಿಟ್ಟಿಗೆ ಕಂದಾಯ, ಅಲ್ಪಸಂಖ್ಯಾತ ಹಾಗೂ ಪಿಡಬ್ಲ್ಯುಡಿ ಇಲಾಖೆಗಳ ಒಟ್ಟು ಮೂವರು ಅಧಿಕಾರಿಗಳ ತಲೆದಂಡವಾಗಿದೆ.  ಜೊತೆಗೆ ಸಮರ್ಪಕ ಉತ್ತರ ಕೊಡದ 3-4 ಇಲಾಖೆ ಕಾರ್ಯದರ್ಶಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಉತ್ತರ ಒದಗಿಸದ ಪಿಡಬ್ಲ್ಯುಡಿ, ಪಶುಸಂಗೋಪನೆ, ಸಾರಿಗೆ, ಐಟಿ-ಬಿಟಿ, ಡಿಪಿಎಆರ್ ಮತ್ತು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ನೀಡಲು ಸಿಎಂಗೆ ಸ್ಪೀಕರ್​​ ತಿಳಿಸಿರುವ ಹಿನ್ನೆಲೆ, ಹಿರಿಯ ಐಎಎಸ್ ಅಧಿಕಾರಿಗಳೂ ಆದ ಇಲಾಖಾ ಪ್ರಧಾನ ಕಾರ್ಯದರ್ಶಿಗಳಿಗೆ ಬಿಸಿ ಮುಟ್ಟಿದೆ. ಮತ್ತೊಂದೆಡೆ ಸಿಎಂ ಸೂಚನೆ ಹಿನ್ನೆಲೆ ಮಧ್ಯಾಹ್ನ ಸಿಎಸ್‌ ಶಾಲಿನಿ ರಜನೀಶ್​​ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ.

ಇದನ್ನೂ ಓದಿ: ಸರ್ಕಾರದ ಧೋರಣೆಗೆ ಸ್ಪೀಕರ್​​ ಗರಂ; ಕಲಾಪ ಮುಂದೂಡಿ ಪೀಠದಿಂದ ಎದ್ದು ಹೊರನಡೆದ ಖಾದರ್​​

ಅಂತಿಮವಾಗಿ ಸ್ವೀಕರ್​ ಸಂಧಾನ ಯಶಸ್ವಿ ಹಿನ್ನೆಲೆ ವಿಧಾನಸಭೆ ಕಲಾಪ ಪುನಾರಂಭವಾಗಿದೆ. ಸಭೆಯಲ್ಲಿ ಲಿಖಿತ ರೂಪದ ಪ್ರಶ್ನೆಗಳಿಗೆ ಉತ್ತರ ನೀಡುವ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಲ್ಲ ಶಾಸಕರಿಗೆ ಉತ್ತರ ಸಿಗಬೇಕು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕರೆಲ್ಲರೂ ಸೇರಿ ಚರ್ಚಿಸಿದ್ದೇವೆ. ಎಲ್ಲರಿಗೂ ಉತ್ತರ ಸಿಗುವ ಬಗ್ಗೆ ಕ್ರಮಕೈಗೊಳ್ಳುವುದಾಗಿ ಸಿಎಂ ಹೇಳಿರೋದಾಗಿ ಸ್ಪೀಕರ್​ ಖಾದರ್​​ ಮಾಹಿತಿ ನೀಡಿದ್ದಾರೆ.

ವಿಧಾನ ಪರಿಷತ್​ನಲ್ಲೂ ಸದ್ದು ಮಾಡಿದ ಸಚಿವರ ಹಾಜರಾತಿ

ವಿಧಾನ ಸಭೆಯ ಬೆನ್ನಲ್ಲೇ ಅತ್ತ ವಿಧಾನ ಪರಿಷತ್​ನಲ್ಲೂ ಸಚಿವರ ಹಾಜರಾತಿ ವಿಚಾರ ಚರ್ಚೆಗೆ ಗ್ರಾಸವಾಗಿದೆ. ಕಡ್ಡಾಯ ಹಾಜರಾತಿ ಅಂದರೂ ಸಚಿವರು ಸದನಕ್ಕೆ ಬಂದಿಲ್ಲ. ಅಧಿಕಾರಿಗಳೂ ಇಲ್ಲ, ಹೀಗಾದ್ರೆ ಹೇಗೆ ಎಂದು ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಭಾಪತಿಗಳನ್ನು ಪ್ರಶ್ನಿಸಿದ್ದಾರೆ. ಯಾರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಹೇಳಿ? ವಿಧಾನಸಭೆಯಲ್ಲಿ ಉತ್ತರ ಸಿಗಲಿಲ್ಲ ಅಂತಾ ಸದನ ಮುಂದೂಡಿದ್ದಾರೆ. ನಮ್ಮಲ್ಲಿ ಏಕೆ ಈ ಅಸಡ್ಡೆ? ಅಧಿಕಾರಿಗಳು ಸಮರ್ಪಕ ಉತ್ತರ ಕೊಡಲ್ಲ. ಸದಸ್ಯರ 126 ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲವೆಂದು ತಿಳಿದು ಬಂದಿದೆ. ನಮ್ಮ ಸದಸ್ಯರೊಬ್ಬರು ಇಂದಿನವರೆಗೂ ಪ್ರಶ್ನೆ ಮಾಡ್ತಾನೇ ಇದ್ದಾರೆ. ನಾವು ಉತ್ತರ ಕೊಡಲಾರದ ಪ್ರಶ್ನೆಯನ್ನ ಕೇಳುತ್ತಿದ್ದೀವಾ? ಎಂದು ಛಲವಾದಿ ಗರಂ ಆಗಿದ್ದಾರೆ. ಹೀಗಾಗಿ ಕೂಡಲೇ ಉತ್ತರ ಕೊಡಿಸಿ, ಇಲ್ಲ ಕ್ರಮ ಜರುಗಿಸಿ ಎಂದು ಸಭಾನಾಯಕ ಬೋಸರಾಜುಗೆ ​ ಸಭಾಪತಿ ಸೂಚನೆ ನೀಡಿದ ಪ್ರಸಂಗ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us