ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಶಂಕಿತ ಉಗ್ರ ಚಿಕಿತ್ಸೆ ಫಲಿಸದೆ ಸಾವು!
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕ ಸಾದಿಕ್ ಪಾಷಾ (47) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಎನ್ಐಎನಿಂದ ಬಂಧಿತರಾಗಿದ್ದ ಸಾದಿಕ್, ಕಳೆದ ಆರು ತಿಂಗಳಿಂದ ಲೋ ಬಿಪಿ ಮತ್ತು ಹೈ ಶುಗರ್ನಿಂದ ಬಳಲುತ್ತಿದ್ದರು. ಜೈಲು ಅಧಿಕಾರಿಗಳು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಬೆಂಗಳೂರು, ಫೆಬ್ರವರಿ 07: ಬೆಂಗಳೂರಿನ ಪರಪ್ಪನ ಅಗ್ರಹಾರ (Parappana Agrahara) ಕೇಂದ್ರ ಕಾರಾಗೃಹದಲ್ಲಿ ಬಂಧಿತನಾಗಿದ್ದ ಶಂಕಿತ ಭಯೋತ್ಪಾದಕನೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಸುದ್ದಗುಂಟೆಪಾಳ್ಯ ಸ್ಫೋಟಕ ವಸ್ತು ಸಂಗ್ರಹ ಪ್ರಕರಣದಲ್ಲಿ ಬಂಧಿತರಾಗಿದ್ದ ಸಾಧಿಕ್ ಪಾಷಾ (47), ಅನಾರೋಗ್ಯದ ಕಾರಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ. ನಿನ್ನೆ (ಫೆಬ್ರುವರಿ 06) ತಡರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
6 ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಪಾಷಾ
ಸಾಧಿಕ್ ಪಾಷಾ ಕಳೆದ ಆರು ತಿಂಗಳಿಂದ ಲೋ ಬಿಪಿ ಹಾಗೂ ಹೈ ಶುಗರ್ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಆರೋಗ್ಯದಲ್ಲಿ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಜೈಲು ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಕಾರಣ ಶುಕ್ರವಾರ ಮಧ್ಯರಾತ್ರಿ ಸಾಧಿಕ್ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ ಗೋಡೌನ್ನಲ್ಲಿ ಅಕ್ರಮವಾಗಿ ಯೂರಿಯಾ ಗೊಬ್ಬರ ಸ್ಟಾಕ್; ಅಧಿಕಾರಿಗಳಿಂದ ದಾಳಿ
6 ವರ್ಷಗಳ ಹಿಂದೆ ಜೈಲು ಪಾಲಾಗಿದ್ದ ಶಂಕಿತ ಉಗ್ರ
2020ರಲ್ಲಿ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಸ್ಫೋಟಕ ವಸ್ತು ಸಂಗ್ರಹ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸಾಧಿಕ್ ಸೇರಿ ಒಟ್ಟು ಆರು ಶಂಕಿತರನ್ನು ಬಂಧಿಸಿತ್ತು. ಅಂದಿನಿಂದ 6 ವರ್ಷಗಳ ಕಾಲ ಪಾಷಾ ಪರಪ್ಪನ ಅಗ್ರಹಾರದಲ್ಲಿಯೇ ಬಂಧಿಯಾಗಿದ್ದ. ಇದೀಗ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಧಿಕ್ ಪಾಷಾ ಸಾವಿನ ಕುರಿತು ಜೈಲು ಹಾಗೂ ಆಸ್ಪತ್ರೆ ಅಧಿಕಾರಿಗಳು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.