AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಮನೆ ಕಟ್ಟೋರು, ಕಟ್ಟಿದವರು ಈ ವಿಚಾರ ತಿಳಿದಿರಲೇಬೇಕು!

ಕಟ್ಟಡ ಉಪವಿಧಿಗಳನ್ನು ತಿದ್ದುಪಡಿ ಮಾಡಿ ಮನೆ ಕಟ್ಟುವವರಿಗೆ ನೆರವಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರವು (ಜಿಬಿಎ) ಮುಂದಾಗಿದೆ. ಈ ಬಗ್ಗೆ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಸೆಟ್ ಬ್ಯಾಕ್ ಉಲ್ಲಂಘನೆ ವಿನಾಯಿತಿ ಮಿತಿ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಅದು ಜಾರಿಗೆ ಬಂದರೆ ಮನೆ ಕಟ್ಟುವರರಿಗೆ ದೊಡ್ಡ ಮಟ್ಟದ ಪ್ರಯೋಜನವಾಗಲಿದೆ. ಈ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಮನೆ ಕಟ್ಟೋರು, ಕಟ್ಟಿದವರು ಈ ವಿಚಾರ ತಿಳಿದಿರಲೇಬೇಕು!
ಸಾಂದರ್ಭಿಕ ಚಿತ್ರImage Credit source: tv9
ಗಣಪತಿ ಶರ್ಮಾ
|

Updated on:Apr 08, 2026 | 2:46 PM

Share

ಬೆಂಗಳೂರು, ಏಪ್ರಿಲ್ 8: ಸಿಲಿಕಾನ್ ಸಿಟಿಯ ಬೆಂಗಳೂರಿನಲ್ಲಿ (Bengaluru) ಸ್ವಂತ ಮನೆ ಕಟ್ಟಬೇಕು ಎಂಬುದು ಪ್ರತಿಯೊಬ್ಬರ ಕನಸು. ಆದರೆ, ನಗರ ಪಾಲಿಕೆಯ ಕಟ್ಟುನಿಟ್ಟಿನ ನಿಯಮಗಳಿಂದಾಗಿ ಅನೇಕರು ಅರಿಯದೇ ‘ಅಕ್ರಮ ಕಟ್ಟಡ’ಗಳ ಮಾಲೀಕರಾಗಿಬಿಡುತ್ತಾರೆ. ಇಂತಹವರಿಗೆ ರಾಜ್ಯ ಸರ್ಕಾರವು ಈಗ ದೊಡ್ಡ ಮಟ್ಟದ ಸಮಾಧಾನಕರ ಸುದ್ದಿಯೊಂದನ್ನು ನೀಡಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ ಕಟ್ಟಡ ಉಪವಿಧಿಗಳಿಗೆ ತಿದ್ದುಪಡಿ ತರಲು ಕರಡು ಅಧಿಸೂಚನೆಯನ್ನು ಇತ್ತೀಚೆಗೆ ಪ್ರಕಟಿಸಲಾಗಿದ್ದು, ಸೆಟ್ ಬ್ಯಾಕ್ ಉಲ್ಲಂಘನೆಯ ಮಿತಿಯನ್ನು ಹೆಚ್ಚಿಸಲಾಗಿದೆ. ಈ ಸಂದರ್ಭದಲ್ಲಿ, ಸೆಟ್ ಬ್ಯಾಕ್ ಉಲ್ಲಂಘನೆ ಎಂದರೇನು ಹಾಗೂ ಅದರ ಮಿತಿಗಳ ಬಗ್ಗೆ ತಿಳಿಯುವ ಪ್ರಯತ್ನ ಇಲ್ಲಿದೆ.

ಏನಿದು ಸೆಟ್ ಬ್ಯಾಕ್ ನಿಯಮ?

ನಿಮ್ಮ ನಿವೇಶನದಲ್ಲಿ (Site) ಮನೆ ಕಟ್ಟುವಾಗ ಕಟ್ಟಡದ ಸುತ್ತಲೂ ಇಂತಿಷ್ಟು ಜಾಗ ಬಿಡಬೇಕು ಎಂಬುದು ನಿಯಮ. ಇದನ್ನು ‘ಸೆಟ್ ಬ್ಯಾಕ್’ ಎನ್ನಲಾಗುತ್ತದೆ. ಉದಾಹರಣೆಗೆ, ನೀವು 30×40 ನಿವೇಶನದಲ್ಲಿ ಮನೆ ಕಟ್ಟುವಾಗ ಅಕ್ಕಪಕ್ಕದ ಮನೆಯವರ ಗೋಡೆಗೆ ತಾಗದಂತೆ ಅಥವಾ ರಸ್ತೆಯ ಕಡೆಗೆ ಮೂರ್ನಾಲ್ಕು ಅಡಿ ಜಾಗವನ್ನು ಖಾಲಿ ಬಿಡಬೇಕು. ಇದು ಗಾಳಿ-ಬೆಳಕಿನ ಸಂಚಾರಕ್ಕೆ ಮತ್ತು ತುರ್ತು ಪರಿಸ್ಥಿತಿಯಲ್ಲಿ ರಕ್ಷಣಾ ಕಾರ್ಯಗಳಿಗೆ ಅತ್ಯಗತ್ಯ. ಇದನ್ನು ಪಾಲಿಸದಿದ್ದರೆ ಸೆಟ್​​ ಬ್ಯಾಕ್ ಉಲ್ಲಂಘನೆಯಾಗುತ್ತದೆ.

ಹೊಸ ಪ್ರಸ್ತಾವನೆಯಲ್ಲಿ ಏನಿದೆ?

ಈ ಹಿಂದೆ ನೀವು ಬಿಡಬೇಕಾದ ಜಾಗದಲ್ಲಿ ಕೇವಲ ಶೇಕಡ 5ರಷ್ಟು ಮಾತ್ರ ವ್ಯತ್ಯಾಸ (ಉಲ್ಲಂಘನೆ) ಆಗಲು ಅವಕಾಶವಿತ್ತು. ಅಂದರೆ, ಅಲ್ಪ ಸ್ವಲ್ಪ ಜಾಗ ಹೆಚ್ಚು ಬಳಸಿ ಕಟ್ಟಿದ್ದರೂ ಅದು ಅಕ್ರಮ ಕಟ್ಟಡವಾಗಿ ಬಿಡುತ್ತಿತ್ತು. ಇದರಿಂದಾಗಿ ಬ್ಯಾಂಕ್ ಸಾಲ ಪಡೆಯಲು ಅಥವಾ ಮನೆ ಸಕ್ರಮ ಮಾಡಿಕೊಳ್ಳಲು ತೊಂದರೆಯಾಗುತ್ತಿತ್ತು.

ಹೊಸ ನಿಯಮದಲ್ಲೇನಿದೆ? ಪರಿಣಾಮ ಏನು?

ಈಗ ಸರ್ಕಾರವು ಈ ಉಲ್ಲಂಘನೆ ಮಿತಿಯನ್ನು ಶೇಕಡ 15ಕ್ಕೆ ಏರಿಸಲು ನಿರ್ಧರಿಸಿದೆ. ಇದು ಜಾರಿಗೆ ಬಂದರೆ, ನೀವು ಶೇಕಡ 15ರಷ್ಟು ಜಾಗವನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಿದ್ದರೂ ಸಹ, ನಿಗದಿತ ದಂಡವನ್ನು ಪಾವತಿಸುವ ಮೂಲಕ ಅದನ್ನು ಕಾನೂನುಬದ್ಧವಾಗಿ ಸಕ್ರಮ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಸರ್ಕಾರವು ಈ ಹೊಸ ಕರಡು ಅಧಿಸೂಚನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಇವುಗಳ ಪರಿಶೀಲನೆಯ ನಂತರ ಹೊಸ ನಿಯಮ ಅಧಿಕೃತವಾಗಿ ಜಾರಿಗೆ ಬರಲಿದ್ದು, ಸಣ್ಣ ಸಣ್ಣ ಸೆಟ್ ಬ್ಯಾಕ್ ಉಲ್ಲಂಘನೆಗಳಿಂದ ದಂಡ ಅಥವಾ ತೆರವು ಭೀತಿ ಎದುರಿಸುತ್ತಿದ್ದ ಸಾವಿರಾರು ಜನರಿಗೆ ಇದು ರಿಲೀಫ್ ನೀಡಲಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:45 pm, Wed, 8 April 26

Follow Us