ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಬೆನ್ನಲ್ಲೇ ಆಹಾರ ಇಲಾಖೆಯೊಂದಿಗೆ ಔಷಧ ನಿಯಂತ್ರಣ ಮಂಡಳಿ ವಿಲೀನ

ಬಳ್ಳಾರಿಯಲ್ಲಿ ಬಾಣಂತಿಯರ ಸಾವುಗಳ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಆಹಾರ ಮತ್ತು ಔಷಧ ನಿಯಂತ್ರಣ ಇಲಾಖೆಗಳನ್ನು ವಿಲೀನಗೊಳಿಸಿದೆ. ಈ ನಿರ್ಧಾರದಿಂದ ಔಷಧಗಳ ಗುಣಮಟ್ಟ ಪರಿಶೀಲನೆ ಸುಧಾರಿಸುವ ನಿರೀಕ್ಷೆಯಿದೆ. ಆಹಾರ ಇಲಾಖೆ ಆಯುಕ್ತರು ಈ ವಿಲೀನಗೊಂಡ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಬೆನ್ನಲ್ಲೇ ಆಹಾರ ಇಲಾಖೆಯೊಂದಿಗೆ ಔಷಧ ನಿಯಂತ್ರಣ ಮಂಡಳಿ ವಿಲೀನ
ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು ಬೆನ್ನಲ್ಲೇ ಆಹಾರ ಇಲಾಖೆಯೊಂದಿಗೆ ಔಷಧ ನಿಯಂತ್ರಣ ಮಂಡಳಿ ವಿಲೀನ
Edited By:

Updated on: Dec 06, 2024 | 5:43 PM

ಬೆಂಗಳೂರು, ಡಿಸೆಂಬರ್​ 06: ಬಳ್ಳಾರಿ (Ballari) ಜಿಲ್ಲಾ ಆಸ್ಪತ್ರೆ ಈಗ ಬಾಣಂತಿಯರ ಸರಣಿ ಸಾವಿನ ಮನೆಯಾಗಿದೆ. ಒಂದು ತಿಂಗಳ ಅಂತರದಲ್ಲಿ 6 ಬಾಣಂತಿಯರು ಸಾವನ್ನಪ್ಪಿದ್ದಾರೆ. ಬಾಣಂತಿಯರ ಸಾವಿನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಬಿಜೆಪಿ ನಾಯಕರ ನಿಯೋಗ ಇಂದು ದೂರು ಕೂಡ ನೀಡಿದೆ. ಇದರ ಬೆನ್ನಲ್ಲೇ ಇದೀಗ ಆಹಾರ ಇಲಾಖೆ ಜೊತೆ ಔಷಧ ನಿಯಂತ್ರಣ ಮಂಡಳಿ ವಿಲೀನಕ್ಕೆ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ. ಆ ಮೂಲಕ ಔಷಧ ನಿಯಂತ್ರಣ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ.

ವಿಧಾನಸೌಧದಲ್ಲಿ ಸಂಪುಟ ಸಭೆ ಬಳಿಕ ಸಚಿವ ಹೆಚ್‌.ಕೆ.ಪಾಟೀಲ್​ ಪ್ರತಿಕ್ರಿಯಿಸಿದ್ದು, ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತೆ ಗುಣಮಟ್ಟ ಇಲಾಖೆಗಳನ್ನು ವಿಲೀನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಪರಿಣಾಮಕಾರಿಯಾಗಿ ಕೆಲಸ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವು​: ಲೋಕಾಯುಕ್ತಕ್ಕೆ ಬಿಜೆಪಿ ದೂರು

ಆಹಾರ ಇಲಾಖೆ ಆಯುಕ್ತರೇ ಡ್ರಗ್ಸ್ ಕಂಟ್ರೋಲ್ ಬೋರ್ಡ್​ಗೆ ಮುಖ್ಯಸ್ಥರಾಗಿ ನೇಮಿಸಲಾಗಿದೆ. ಈಗಾಗಲೇ ಆಹಾರ ಇಲಾಖೆ ಆಯುಕ್ತ ಶ್ರೀನಿವಾಸ್​ಗೆ ಔಷಧ ನಿಯಂತ್ರಣ ಮುಖ್ಯಸ್ಥರಾಗಿ ನೇಮಿಸಿದ್ದು, ಇದೀಗ ಎರಡು ಇಲಾಖೆ ಸಿಬ್ಬಂದಿ ಮುಖ್ಯಸ್ಥರ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ.

ಜಮ್ಮು-ಕಾಶ್ಮೀರ್, ಗುಜರಾತ್, ಉತ್ತರ ಪ್ರದೇಶ ಹಾಗೂ ಇನ್ನು ಅನೇಕ ರಾಜ್ಯದಲ್ಲಿನ ಮಾದರಿ ಅಳವಡಿಕೆ ಮುಂದಾಗಿದೆ. ಬೇರೆ ರಾಜ್ಯದಲ್ಲಿ ಆಹಾರ ಹಾಗೂ ಡ್ರಗ್ಸ್ ಇಲಾಖೆ ಒಟ್ಟಿಗೆ ಕಾರ್ಯ ನಿರ್ವಹಿಸುತ್ತಿವೆ. ಈ ಹಿನ್ನೆಲೆ ಕರ್ನಾಟಕದಲ್ಲೂ ಇದೇ ಮಾದರಿಯಲ್ಲಿ ಇಲಾಖೆ ವಿಲೀನ ಮಾಡಲಾಗಿದೆ.

ಇಲಾಖೆಗಳ ವಿಲೀನ ಬಳ್ಳಾರಿ ವಿಚಾರಕ್ಕೆ ನೇರವಾಗಿ ಸಂಬಂಧ ಇಲ್ಲ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರಿನಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್​ ಪ್ರತಿಕ್ರಿಯಿಸಿದ್ದು, ಇಲಾಖೆಗಳ ವಿಲೀನ ಬಳ್ಳಾರಿ ವಿಚಾರಕ್ಕೆ ನೇರವಾಗಿ ಸಂಬಂಧ ಇಲ್ಲ. ಔಷಧ ನಿಯಂತ್ರಣ ಇಲಾಖೆ ಹಾಗೂ ಆಹಾರ ಸುರಕ್ಷತಾ 2 ಇಲಾಖೆಗಳ ವಿಲೀನ ಕುರಿತು 2 ತಿಂಗಳಿನಿಂದ ಚರ್ಚೆ ನಡೆಯುತ್ತಿತ್ತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬಾಣಂತಿಯರ ಸಾವಿನ ಬಗ್ಗೆ ಸರ್ಕಾರ ಗಂಭೀರವಾಗಿದೆ, ರಾಜೀನಾಮೆಗೂ ಸಿದ್ಧ: ಗುಂಡೂರಾವ್

ಔಷಧ ಗುಣಮಟ್ಟ ಇಲಾಖೆಗೆ ಮೇಲ್ವಿಚಾರಣೆ ಮಾಡುವ ಅಗತ್ಯ ಇತ್ತು. ಐಎಎಸ್​ ಅಧಿಕಾರಿ ಇದ್ದರೆ ಆಡಳಿತಾತ್ಮಕ ವಿಚಾರ ಸರಿಯಾದ ರೀತಿ ಆಗುತ್ತೆ. ಆಹಾರ ಸುರಕ್ಷತಾ ಮತ್ತು ಔಷಧಿ ನಿಯಂತ್ರಣ ಇಲಾಖೆ ಅಂತಾ ಆಗಲಿದೆ. ಈ ಇಲಾಖೆಗೆ ಒಬ್ಬರು ಆಯುಕ್ತರು ಇರ್ತಾರೆ. ಈ ಇಲಾಖೆ ಕೆಲಸ ಕಾರ್ಯಗಳಲ್ಲಿ ಇನ್ನಷ್ಟು ಬದಲಾವಣೆ ಮಾಡಬೇಕಿದೆ. ಇಲಾಖೆ ಬಗ್ಗೆ ಜನರಲ್ಲಿ ಹೆಚ್ಚು ವಿಶ್ವಾಸ ಬರಬೇಕು. ಈ ಹಿಂದೆ ಸಿಎಂ ಸಭೆ ಮಾಡಿದಾಗ ಒಂದಷ್ಟು ಬದಲಾವಣೆಗೆ ಸೂಚಿಸಿದ್ದರು. ಔಷಧ ಗುಣಮಟ್ಟ ಪರಿಶೀಲನೆ, ಉತ್ಪಾದನೆ ಬಗ್ಗೆ ಪರಿಣಾಮಕಾರಿ ಆಗಬೇಕು ಎಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Vinay Kashappanavar
Follow Us