
ಚಾಮರಾಜನಗರ, ಸೆಪ್ಟೆಂಬರ್ 18: ಇತ್ತೀಚೆಗೆ ಹನೂರು ಅರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಶೂಟೌಟ್ಗೆ ಮೂವರು ಬೇಟೆಗಾರರು ಮೃತಪಟ್ಟ ಘಟನೆ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆ ಬಳಿಕವೂ ಅರಣ್ಯದಲ್ಲಿ ಕಳ್ಳಬೇಟೆ ಮುಂದುವರಿದಿದೆ ಎನ್ನಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೇ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯರಾಗಿದ್ದಾರೆ ಎನ್ನುವ ಸ್ಫೋಟಕ ವಿಚಾರ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ನಿಟ್ಟಿನಲ್ಲಿ ಕಾಡುಗಳ್ಳರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಅರಣ್ಯ ಸಿಬ್ಬಂದಿ ಇದೀಗ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಿದೆ. ಆ ಮೂಲಕ ಕರ್ನಾಟಕದ ಕಾಡುಗಳ ರಕ್ಷಣೆಗೆ ವಿಶೇಷ ತರಬೇತಿ ಪಡೆದ ‘ಬೆಲ್ಜಿಯನ್ ಸ್ನಿಫರ್ ಡಾಗ್’ಗಳ ಬಲ ಲಭಿಸಿದೆ.
ರಾಜ್ಯದ ಅರಣ್ಯಗಳಲ್ಲಿ ಹೆಚ್ಚಿರುವ ಕಳ್ಳಬೇಟೆ ಮತ್ತು ಕಾಡುಗಳ್ಳತನವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದೆ. ಇದಕ್ಕಾಗಿ ಬಂಡೀಪುರದ ಮೇಲುಕಾಮನಹಳ್ಳಿ ಕ್ಯಾಂಪ್ನಲ್ಲಿ ಅರಣ್ಯ ಸಿಬ್ಬಂದಿ 10 ಹೆಣ್ಣು ಬೆಲ್ಜಿಯನ್ ಸ್ನಿಫರ್ ಶ್ವಾನಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: ಚಾಮರಾಜನಗರ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಬೇಟೆಗಾರರು ಇನ್ನು ಸಕ್ರೀಯ: ಸ್ಫೋಟಕ ವಿಚಾರ ಬೆಳಕಿಗೆ
ಇನ್ನು ಇದಷ್ಟೇ ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕಾಡುಗಳ್ಳತನ ಹೆಚ್ಚಾದ ಹಿನ್ನಲೆ ಅರಣ್ಯ ಸಿಬ್ಬಂದಿ ಹೊಸ ತಂತ್ರ ಕೂಡ ಬಳಸುತ್ತಿದ್ದಾರೆ.
ತರಬೇತಿ ಪಡೆದ ಈ ಸ್ನಿಫರ್ ಡಾಗ್ಗಳನ್ನು ರಾಜ್ಯದ ಪ್ರಮುಖ ಐದು ಹುಲಿ ಸಂರಕ್ಷಿತ ಪ್ರದೇಶಗಳ ಕಾವಲಿಗೆ ಹಂಚಿಕೆ ಮಾಡಲಾಗುತ್ತಿದೆ. ಬಂಡೀಪುರ, ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ), ಭದ್ರಾ, ಕಾಳಿ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಗಳಿಗೆ ತಲಾ ಐದು ಶ್ವಾನಗಳನ್ನು ವಿತರಿಸಲಾಗುತ್ತಿದೆ.
ಇನ್ನು ಈ ಬೆಲ್ಜಿಯನ್ ಸ್ನಿಫರ್ ತಳಿಯ ಶ್ವಾನಗಳು ಅತ್ಯಂತ ತೀಕ್ಷ್ಣವಾದ ವಾಸನೆ ಗ್ರಹಿಸುವ ಶಕ್ತಿ ಹಾಗೂ ಅತಿ ವೇಗವಾಗಿ ಓಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಮುಂಚೂಣಿಯಲ್ಲಿರುವ ಈ ಶ್ವಾನಗಳ ಆಗಮನದಿಂದಾಗಿ, ಅರಣ್ಯ ಪ್ರದೇಶದಲ್ಲಿ ಅಕ್ರಮ ಕೃತ್ಯವೆಸಗುವ ಕಾಡುಗಳ್ಳರಿಗೆ ನಡುಕ ಶುರುವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.