ಚಾಮರಾಜನಗರ: ಐದು ಹುಲಿಗಳ ನಿಗೂಢ ಸಾವು ಬೆನ್ನಲ್ಲೇ ಮತ್ತೊಂದು ಹುಲಿ ಸಾವು
ಚಾಮರಾಜನಗರದ ಮೀಣ್ಯಂ ಅರಣ್ಯದಲ್ಲಿ ಮೃತಪಟ್ಟಿರೋ 5 ಹುಲಿಗಳ ಸಾವಿಗೆ ಕಾರಣ ವಿಷ ಪ್ರಾಶನ ಕಾರಣ ಅನ್ನೋದು ಈಗಾಗಲೇ ಬಯಲಾಗಿದೆ. ಈ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊಂದು ಹೆಣ್ಣು ಹುಲಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬಂಡೀಪುರದ ಗುಂಡ್ರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿದೆ.

ಚಾಮರಾಜನಗರ, ಜೂನ್ 28: ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಲಿಗಳ (tigers) ಹತ್ಯಾಕಾಂಡ ಸದ್ಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಸುಗಳನ್ನ ಬೇಟೆಯಾಡಿ ತಿಂದಿದ್ದಕ್ಕೆ ವಿಷಪ್ರಾಶನ ಮಾಡಿ ಹುಲಿಗಳನ್ನ ಕೊಂದಿರೋ ಆರೋಪ ಕೇಳಿಬಂದಿದೆ. ವಿಷವಿಟ್ಟವರು ಯಾರು ಅನ್ನೋದು ಇನ್ನೂ ಗೊತ್ತಾಗಿಲ್ಲ. ಈಗಾಗಲೇ ಐದು ಹುಲಿಗಳ ಅಂತ್ಯಕ್ರಿಯೆ ಮಾಡಲಾಗಿದೆ. ಈ ಮಧ್ಯೆ ಜಿಲ್ಲೆಯ ಬಂಡೀಪುರದ (Bandipur) ಗುಂಡ್ರೆ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದೆ.
4-5 ವರ್ಷದ ಹೆಣ್ಣು ಹುಲಿ ಸಹಜವಾಗಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಶುಕ್ರವಾರ ಅರಣ್ಯ ಸಿಬ್ಬಂದಿ ಗಸ್ತು ತಿರುಗುವ ವೇಳೆ ಕಳೇಬರ ಪತ್ತೆ ಆಗಿದೆ. ಇಂದು ವೈದ್ಯರು ಹುಲಿ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.
ಇದನ್ನೂ ಓದಿ: 5 ಹುಲಿಗಳ ಅಂತ್ಯಕ್ರಿಯೆ: ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಸದ್ಯ ಐದು ಹುಲಿಗಳ ನಿಗೂಢ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಹುಲಿಗಳ ಸಾವಿಗೆ ವಿಷಪ್ರಾಶನವೇ ಕಾರಣ ಅನ್ನೋದು ಖಚಿತವಾಗಿದೆ. ಆದರೆ ಈ ವಿಷ ಯಾವುದು? ಎಷ್ಟು ಪ್ರಮಾಣದಲ್ಲಿ ಹಾಕಲಾಗಿತ್ತು ಅಂತಾ ತಿಳಿಯಲು ಲ್ಯಾಬ್ಗೆ ಸ್ಯಾಂಪಲ್ ಕಳಿಸಲಾಗಿದೆ. ಹಸುವಿನ ಮೇಲೆ ದಾಳಿ ನಡೆಸಿದ ಸೇಡಿಗೆ ವಿಷವಿಟ್ಟಿರುವ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಶಂಕಿತ ವ್ಯಕ್ತಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಅಂತಾ ಡಿಸಿಎಫ್ ಸ್ಪಷ್ಟನೆ ನೀಡಿದ್ದಾರೆ.
ಇನ್ನು, ನಾಡಿಗೆ ನುಗ್ಗಿ ಹುಲಿ ಬೇಟೆಯಾಡಿಲ್ಲ ಬದಲಾಗಿ ಕಾಡಿಗೆ ಬಂದಿರುವ ಹಸುವನ್ನೇ ಹುಲಿ ಬೇಟೆಯಾಡಿದೆ. ಜನರು ತಮ್ಮ ಪ್ರಾಣಿಗಳನ್ನು ಕಾಡಿಗೆ ಬಿಡಬಾರದು. ಬಿಟ್ಟರೆ ಪರಿಹಾರ ಸಿಗಲ್ಲ ಅಂತಾ DCF ಹೇಳಿದ್ದಾರೆ.
ಇದನ್ನೂ ಓದಿ: ಜನರ ಸೇಡಿಗೆ ಬಲಿಯಾದ್ವಾ 5 ಹುಲಿಗಳು? ವ್ಯಾಘ್ರಗಳು ಸಾವಿಗೂ ಮುನ್ನ ನಡೆದಿದ್ದೇನು?
ಹುಲಿಗಳು ಮತ್ತು ಹಸು ಮೃತಪಟ್ಟ ಸ್ಥಳದಲ್ಲೇ ಅರಣ್ಯ ಸಿಬ್ಬಂದಿ ನಿನ್ನೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಹುಲಿಯ 5 ಮರಿಗಳು ಹಾಗೂ ಹಸುವಿನ ಅಂತ್ಯಕ್ರಿಯೆ ಪ್ರತ್ಯೇಕವಾಗಿ ಮಾಡಲಾಗಿದೆ. ಈ ವೇಳೆ ಅರಣ್ಯ ಸಚಿವ ಈಶ್ವರ ಖಂಡ್ರೆ ಕೂಡ ಇದ್ದರು. ಬಳಿಕ ಮಾತನಾಡಿದ ಅವರು, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:38 am, Sat, 28 June 25







