ಚಾಮರಾಜನಗರ ಹುಲಿ ಹತ್ಯೆ ಪ್ರಕರಣ: ಅರಣ್ಯ ಇಲಾಖೆ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ರಾಜ್ಯ ಸರ್ಕಾರ
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ 5 ಹುಲಿಗಳ ಹತ್ಯೆ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಅರಣ್ಯಾಧಿಕಾರಿಗಳಿಗೆ ರಾಜ್ಯ ಸರ್ಕಾರ ತಕ್ಕ ಮಟ್ಟಿಗೆ ಬಿಸಿ ಮುಟ್ಟಿದೆ. ‘ಟಿವಿ9’ ವರದಿ ಬೆನ್ನಲ್ಲೇ ಡಿಸಿಎಫ್, ಎಸಿಎಫ್ ಹಾಗೂ ಆರ್ಫ್ಒಗೆ ಕಡ್ಡಾಯ ರಜೆಯಲ್ಲಿ ತೆರಳುವಂತೆ ಪಿಸಿಸಿಎಫ್ ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ, ಜುಲೈ 1: ಅಳಿವಿನ ಅಂಚಿನಲ್ಲಿರುವ ವ್ಯಾಘ್ರ ಸಂತತಿಯನ್ನು ಉಳಿಸಿ ಬೆಳೆಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಅದರಲ್ಲೂ ಕರ್ನಾಟಕದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಖ್ಯಾತಿ ಚಾಮರಾಜನಗರ ಜಿಲ್ಲೆಗೆ ಇದೆ. ಎರಡೆರಡು ಹುಲಿ ಸಂರಕ್ಷಿತಾರಣ್ಯ ಹೊಂದಿರುವ ಈ ಚಾಮರಾಜನಗರ ಜಿಲ್ಲೆಗೆ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ಐದು ಹುಲಿಗಳ ಹತ್ಯಾಕಾಂಡ (Tiger Death) ಈಗ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಎಸಿ ರೂಮಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಡಿಸಿಎಫ್ ಚಕ್ರಪಾಣಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಿದ್ದು, ಕಡ್ಡಾಯ ರಜೆಗೆ ತೆರಳುವಂತೆ ಸೂಚಿಸಿದೆ.
ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮೀಣ್ಯಂ ಪ್ರದೇಶದಲ್ಲಿ ರಸ್ತೆ ಪಕ್ಕದಲ್ಲೇ 100 ಮೀಟರ್ ದೂರದಲ್ಲಿ ಐದು ಹುಲಿಗಳಿಗೆ ವಿಷಹಾಕಿ ಕೊಲ್ಲಲಾಗಿತ್ತು. ವ್ಯಾಘ್ರ ಹಂತಕರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಆದರೆ ಈ ಘಟನೆಯಂದಾಗಿ, ಡಿಸಿಎಫ್ ಚಕ್ರಪಾಣಿಯ ಆಟಾಟೋಪ, ಅಸಡ್ಡೆಯಿಂದ ಮಾಡಿಕೊಂಡ ಎಡವಟ್ಟು ಒಂದೊಂದಾಗಿ ಬೆಳಕಿಗೆ ಬಂದಿದೆ. ಚಿರತೆ, ಆನೆ ದಾಳಿ ನಡೆಸಿದರೆ ಸ್ಥಳಕ್ಕೆ ಬರುವುದಿಲ್ಲ, ಎಸಿ ರೂಮ್ ಬಿಟ್ಟು ಆಚೆ ಕಾಲಿಡಲ್ಲ ಎಂಬ ಆರೋಪಗಳು ಅವರ ವಿರುದ್ಧ ಕೇಳಿಬಂದಿದ್ದವು. ರೈತರು ಕರೆ ಮಾಡಿದರೂ ಪ್ರತಿಕ್ರಿಯಿಸುವುದಿಲ್ಲ ಎಂದು ಆರೋಪಿಸಲಾಗಿತ್ತು.
ಖುದ್ದು ಸಂಸದರೇ ಕರೆ ಮಾಡಿದರೂ ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ. ಭರಚುಕ್ಕಿ ಪವರ್ ಪ್ರಾಜೆಕ್ಟ್ಗೆ ಭಾರೀ ವಿರೋಧವಿದ್ದರೂ ಅದಕ್ಕೆ ಚಕ್ರಪಾಣಿ ಗ್ರೀನ್ ಸಿಗ್ನಲ್ ನೀಡಿದ್ದರು. ಈ ಎಲ್ಲ ನೌಟಂಕಿಯಾಟದ ಕುರಿತು ‘ಟಿವಿ9’ ಸಮಗ್ರ ವರದಿ ಮಾಡಿತ್ತು. ಈಗ ವರದಿ ಪರಿಣಾಮ ಬೀರಿದ್ದು, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ, ಎಸಿಎಫ್ ಗಜಾನನ ಹೆಗಡೆ, ಆರ್ಎಫ್ಒ ಮಾದೇಶರಿಗೆ ಸಿಸಿಎಫ್ ಕಡ್ಡಾಯ ರಜೆಗೆ ತೆರಳುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಹುಲಿ ಹಂತಕರು 3 ದಿನ ಅರಣ್ಯಾಧಿಕಾರಿಗಳ ಕಸ್ಟಡಿಗೆ
ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬಂತೆ ಮಾಡಿದ ಎಡವಟ್ಟಿಗೆ ಈಗ ಅರಣ್ಯಾಧಿಕಾರಿಗಳಿಗೆ ಕಡ್ಡಾಯ ರಜೆಗೆ ತೆರಳುವಂತೆ ಸೂಚಿಸಲಾಗಿದೆ. ಆದರೆ, ಇಂಥವರನ್ನು ಅಮಾನತು ಮಾಡಲೇ ಬೇಕು. ಈ ಕಡ್ಡಾಯ ರಜೆಯ ಅವಶ್ಯಕತೆಯಿಲ್ಲ ಎಂದು ಸಾರ್ವವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Tue, 1 July 25







